ಕಾಂಗ್ರೆಸ್ ಬರಲು ಕೆಲ ಶಾಸಕರ ಪ್ರಯತ್ನ: ಧ್ರುವನಾರಾಯಣ್

ಮೈಸೂರು: ಜೆಡಿಎಸ್, ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಗೆ ಬರುವ ಪ್ರಯತ್ನದಲ್ಲಿದ್ದಾರೆ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕೆಲ ಶಾಸಕರುಗಳು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಯಾರು ಎಂದು ಈಗಲೇ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬೇರೆ ಪಕ್ಷದ ಶಾಸಕರ ಸೇರ್ಪಡೆ ಬಗ್ಗೆ ಒಂದು ಸಮಿತಿಯಿದ್ದು ಅದನ್ನು ಸಮಿತಿ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ದಲಿತರಿಗೆ ಕೊಟ್ಟಷ್ಟು ಅವಕಾಶ ಬೇರೆ ಯಾವ ಪಕ್ಷವೂ ಕೊಟ್ಟಿಲ್ಲ ಹೀಗಾಗಿ ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡಿಲ್ಲ. ಎಲ್ಲ ವರ್ಗದವರಿಗೂ ಅವಕಾಶ ಕೊಟ್ಟು ಸಾಮಾಜಿಕ ನ್ಯಾಯ ಕಲ್ಪಿಸಿದ್ದು, ಸಮಯ ಬಂದಾಗ ಸಿಎಂ ಸ್ಥಾನ ಸಿಗುತ್ತದೆ ಎಂದರು.

ಸದ್ಯ ಕೇಂದ್ರದಲ್ಲಿ ಸಂಪುಟ ಪುನರ್‌ರಚನೆಯಾಗುತ್ತಿದ್ದು, ಐದು ಮಂದಿ ದಲಿತ ಸಂಸದರಿದ್ದಾರೆ. ಬಿಜೆಪಿ ಯಾಕೆ ಸಚಿವರನ್ನಾಗಿ ಮಾಡುತ್ತಿಲ್ಲ ಎಂಬುದನ್ನು ಮೊದಲು ಹೇಳಲಿ. ಚುನಾವಣೆಯಲ್ಲಿ ಸೋಲು ಕಂಡರೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯಸಭೆ ಶಾಸಕಾಂಗ ನಾಯಕರನ್ನಾಗಿ ಮಾಡಿದೆ. ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಟಿತ್ತು. ಪರಮೇಶ್ವರ್ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದರು.

ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಆ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1,800 ಮತಗಳ ಅಂತರದಿಂದ ಸೋತಿದ್ದು, ಮುಂದಿನ ಲೋಕಸಭಾ ಚುನಾವಣೆ ಆಕಾಂಕ್ಷಿ ಅಲ್ಲ ಅಭ್ಯರ್ಥಿಯೂ ನಾನೇ ಅಲ್ಲ. ಅದನ್ನು ಪಕ್ಷ ತೀರ್ಮಾನಿಸುತ್ತದೆ ಎಂದರು.

Leave a Reply

Your email address will not be published. Required fields are marked *