ಮಂಡ್ಯ: ಬಸರಾಳು ಗ್ರಾಮವನ್ನು ದತ್ತು ಪಡೆದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಎಂ.ಶ್ರೀನಿವಾಸ್ ಅವರ ಕಾರ್ಯವನ್ನು ಸಂಸದೆ ಸುಮಲತಾ ಅಂಬರೀಶ್ ಶ್ಲಾಘಿಸಿದ್ದಾರೆ
ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದ ವನಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಬಸರಾಳು ಗ್ರಾಮವನ್ನು ದತ್ತು ಪಡೆದು ಸರ್ವತೋಮುಖ ಅಭಿವೃದ್ಧಿ ಮಾಡುವ ಅವರ ಹಂಬಲಕ್ಕೆ ನಮ್ಮ ನೆರವು ಇರುವುದಾಗಿ ಹೇಳಿದ ಅವರು, ಹಸಿರುಕರಣ ಮಾಡುವ ಅವರ ಸದುದ್ದೇಶ ಎಲ್ಲರೂ ಬೆಂಬಲಿಸಿ ಶ್ರಮಿಸೋಣ ಎಂದರು.
ಇದೇ ವೇಳೆ 100 ಸಸಿ ನೆಟ್ಟು, ಬಸರಾಳು ವ್ಯಾಪ್ತಿಯ ನಿವಾಸಿಗಳಿಗೆ 600 ಸಸಿಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್ರವರು ಸಮಗ್ರ ಅಭಿವೃದ್ದಿಯೊಂದಿಗೆ ಹಸಿರು ಗ್ರಾಮವನ್ನಾಗಿ ಮಾಡುವುದೇ ನಮ್ಮ ಧ್ಯೇಯವಾಗಿದೆ. ಬಸರಾಳು ಗ್ರಾಮವು ಸಂಸದರ ಆದರ್ಶ ಗ್ರಾಮಾಭಿವೃದ್ದಿ ಯೋಜನೆಗಳಲ್ಲಿ ಒಂದಾಗಿ ಅಭಿವೃದ್ಧಿಗೆ ಸೇರ್ಪಡೆಗೊಂಡಿದೆ. ನಾವು ಕೂಡ ದತ್ತು ಗ್ರಾಮವನ್ನಾಗಿ ಪಡೆದು ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪಮಾಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ಹಸಿರು ಗ್ರಾಮವನ್ನಾಗಿ ಮಾಡುವ ಗುರಿ ಹೊಂದಿದ್ದು ಈ ಕಾರ್ಯಕ್ಕೆ ನಮಗೆ ಸಂಪೂರ್ಣ ಸಹಕಾರವನ್ನು ಸಾಮಾಜಿಕ ಅರಣ್ಯ ವಿಭಾಗ ಹಾಗೂ ಅನನ್ಯ ಹಾರ್ಟ್ ಸಂಸ್ಥೆಯ ಅನುಪಮ ಅವರು ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣೆ ಅಧಿಕಾರಿ ವೆಂಕಟೇಶ್, ರವಿಶಂಕರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ್, ಜಿಲ್ಲಾ ಹೆಚ್ಚುವರಿ ಅರಣ್ಯ ಅಧಿಕಾರಿ ನಾಗರಾಜು, ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಶಿಲ್ಪಾ ಸೇರಿದಂತೆ ಹಲವರು ಇದ್ದರು.