ಉಡುಪಿ: ಮೀನುಗಾರರ ಧ್ವನಿಯಾಗಬೇಕೆಂಬ ಉದ್ದೇಶದಿಂದ ನಾನು ಮೀನುಗಾರರ ಬಳಿಗೆ ಬಂದಿದ್ದೇನೆ ಹೊರತು ಚುನಾವಣಾ ಉದ್ದೇಶದಿಂದ ಅಲ್ಲ. ಮೀನುಗಾರರ ಧ್ವನಿಯಾಗಿ ಸದನದಲ್ಲಿ ಬೆಲೆ ಕೊಡಿಸುತ್ತೇನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳೀದರು.
ಮಲ್ಪೆಯಲ್ಲಿ ಮಂಗಳವಾರ ಮೀನುಗಾರ ಮುಖಂಡರೊಂದಿಗೆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಮಾತನಾಡಿ, ಮೀನುಗಾರರ ಧ್ವನಿಯಾಗಬೇಕೆಂಬ ಉದ್ದೇಶದಿಂದ ನಾನು ಮೀನುಗಾರರ ಬಳಿಗೆ ಬಂದಿದ್ದೇನೆ ಹೊರತು ಚುನಾವಣಾ ಉದ್ದೇಶದಿಂದ ಬಂದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಖಂಡಿತ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಆಗ ಮೀನುಗಾರರಿಗೆ ಸರ್ಕಾರವೇ ಗ್ಯಾರಂಟಿ ನಿಂತು ಸಾಲ ನೀಡಲಿದೆ ಎಂದು ಹೇಳಿದರು.
ಕೇರಳ, ಗೋವಾದಲ್ಲಿರುವಂತೆ ಕರ್ನಾಟಕದಲ್ಲೂ ಕರಾವಳಿಯ ತೀರದಲ್ಲಿ ಬದುಕುತ್ತಿರುವ ಮೀನುಗಾರರಿಗೆ ಅನ್ಯಾಯವಾಗ ಬಾರದು. ಆಂಧ್ರದಲ್ಲಿ ದೊರೆಯುವಂತೆ ಡೀಸೆಲ್ ಸಬ್ಸಿಡಿ ಕರ್ನಾಟಕದ ಮೀನುಗಾರರಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮೀನುಗಾರರ ಧ್ವನಿಯಾಗಲಿದೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಮೀನುಗಾರರಿದ್ದರೂ ಕೇವಲ ಕೆಲವೇ ಮಂದಿಗೆ 3 ಸಾವಿರ ರೂ ಪರಿಹಾರ ನೀಡುವ ತೀರ್ಮಾನದಿಂದ ಮೀನುಗಾರರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಪಡಿಸಲು ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಂಕಾಳ್ ವೈದ್ಯ, ಐವನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಇತರ ನಾಯಕರು ಇದ್ದರು.