ಚಾಮರಾಜನಗರ: ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕ ಮೃತಪಟ್ಟಿದ್ದರಿಂದ ನೊಂದ ಚಾಲಕ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸವಕನಹಳ್ಳಿಪಾಳ್ಯದಲ್ಲಿ ನಡೆದಿದೆ.
ಸವಕನಹಳ್ಳಿಪಾಳ್ಯ ಗ್ರಾಮದ ಹರ್ಷ(5) ಎಂಬ ಬಾಲಕ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪಿಹೆಚ್ಡಿ ಸಂಶೋಧನೆ ಕೈಗೊಂಡಿದ್ದ ಸುನೀಲ್(23) ಮೃತ ದುರ್ದೈವಿಗಳು.
ಗ್ರಾಮದಲ್ಲಿ ಜಮೀನನ್ನು ಕ್ರಿಕೆಟ್ ಪಂದ್ಯಾವಳಿ ನಡೆಸುವ ಸಲುವಾಗಿ ಟ್ರ್ಯಾಕ್ಟರ್ ನಿಂದ ಸಮತಟ್ಟು ಮಾಡಲಾಗುತ್ತಿತ್ತು. ಸುನೀಲ್ ಟ್ರ್ಯಾಕ್ಟರ್ ಓಡಿಸುತ್ತಿದ್ದು, ಅದನ್ನು ಬಾಲಕ ಹರ್ಷ ನೋಡುತ್ತಾ ನಿಂತಿದ್ದನು. ಈ ವೇಳೆ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಬಾಲಕ ಹರ್ಷನಿಗೆ ಗುದ್ದಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದರಿಂದ ತಕ್ಷಣವೇ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸ ಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಹರ್ಷ ಮೃತಪಟ್ಟಿದ್ದಾನೆ.
ಘಟನೆ ಬಳಿಕ ಸ್ಥಳದಿಂದ ಪರಾರಿಯಾದ ಸುನೀಲ್ ಮೈಸೂರಿಗೆ ತೆರಳಿದ್ದಾನೆ. ಅಷ್ಟರಲ್ಲೇ ಆತನಿಗೆ ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ ವಿಚಾರ ತಿಳಿದಿದೆ, ಇದರಿಂದ ಮನನೊಂದ ಆತ ತಾನು ಉಳಿದುಕೊಂಡಿದ್ದ ರೂಮಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.