ಜನಸಂಖ್ಯಾ ನಿಯಂತ್ರಣ ಮಾಡಬೇಕಾದವರು ಯಾರು?

ದಿನದಿಂದ ದಿನಕ್ಕೆ ನಮ್ಮ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣಗಳು ಮರಣದ ಪ್ರಮಾಣ ಕಡಿಮೆಯಾಗಿರುವುದಾ? ಅಥವಾ ಜನನ ಪ್ರಮಾಣ ಹೆಚ್ಚುತ್ತಿರುವುದಾ? ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರ ನೀಡುವುದು ಕಷ್ಟವಾಗಬಹುದು. ಆದರೆ ನಾವು ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಆ ಪ್ರಕಾರ ಒಂದು ಕುಟುಂಬಕ್ಕೆ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು. ಇದು ಸಮರ್ಪಕವಾಗಿ ಅನುಷ್ಟಾನವಾಗುತ್ತಿದೆಯಾ?

ಶ್ರೀಮಂತರು, ಉದ್ಯೋಗಿಗಳು ಒಂದೇ ಮಗು ಸಾಕೆಂಬ ತೀರ್ಮಾನ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನು ಕೆಲವರು ಉದ್ಯೋಗದಲ್ಲಿರುವ ದಂಪತಿಗಳು ಮಕ್ಕಳನ್ನು ನೋಡಿಕೊಂಡು ಉದ್ಯೋಗ ಮಾಡಲಿಕ್ಕಾಗಲ್ಲ ಎಂಬ ಕಾರಣಕ್ಕೆ ಒಂದೇ ಮಗು ಸಾಕೆಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ತೀರಾ ಬಡತನದಲ್ಲಿರುವ ಮಕ್ಕಳನ್ನು ಸಾಕುವುದೇ ಕಷ್ಟ ಎನ್ನುವವರೇ ಇವತ್ತು ಮಕ್ಕಳನ್ನು ಹೆಚ್ಚು ಹೆರುತ್ತಿದ್ದಾರೆ. ಮಕ್ಕಳು ದೇವರು ಕೊಟ್ಟಿದ್ದು ಸಾಕಿದರಾಯಿತು ಎಂಬ ಅಭಿಪ್ರಾಯ ಹೊಂದಿರುವ ಅವರಿಗೆ ಸಂತಾನದ ನಿಯಂತ್ರಣದ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ.

ಜನಸಂಖ್ಯೆ ಏರಿಕೆಯ ವೇಗವನ್ನು ನೋಡಿದ್ದೇ ಆದರೆ ಅದು ಏರುಗತಿಯಲ್ಲಿ ಸಾಗುತ್ತಿದೆ. ಇದನ್ನು ಗಮನಿಸಿದ ವಿಶ್ವಸಂಸ್ಥೆ 1987ರ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವಾಗಿ ಆಚರಣೆ ತಂದಿತಲ್ಲದೆ. ಆ ಮೂಲಕ ಜನಸಂಖ್ಯೆ ನಿಯಂತ್ರಣ ಮಾಡುವ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯಿತು. ಅದು ಮುಂದುವರೆಯುತ್ತಾ ಬಂದಿದ್ದು  ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಕುರಿತು ವಿಶ್ವಸಮುದಾಯದ ಗಮನ ಸೆಳೆಯುವ ಕೆಲಸವೂ ಇದರಿಂದಾಗುತ್ತಿದೆ.

ವಿಶ್ವದ ಜನಸಂಖ್ಯೆ ಹೆಚ್ಚಳಕ್ಕೆ ನಮ್ಮ ದೇಶದ ಕೊಡುಗೆ ಜಾಸ್ತಿಯಿದೆ. ಚೀನಾ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದರಲ್ಲಿ, ಜನಸಂಖ್ಯೆಗೆ ತಕ್ಕಂತೆ  ಉದ್ಯೋಗ ಸೃಷ್ಠಿಸಿಕೊಳ್ಳುವುದರಲ್ಲಿ ಅವರು ಮುಂದಿದ್ದಾರೆ. ಹೀಗಾಗಿ ಮಾನವ ಸಂಪನ್ಮೂಲವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವುದರಲ್ಲಿ ಅವರು ಯಶಸ್ಸು ಕಾಣುತ್ತಿದ್ದಾರೆ.

ನಮ್ಮದು ಮುಂದುವರೆಯುತ್ತಿರುವ ದೇಶ ಹೀಗಾಗಿ ಮುಂದುವರೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಮೂಲ ಸೌಲಭ್ಯ, ಉದ್ಯೋಗ ಹೀಗೆ ಅಗತ್ಯತೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ನಾವು ಸಮಸ್ಯೆಗಳನ್ನು ಎಳೆದುಕೊಂಡೇ ಮುಂದೆ ಸಾಗುತ್ತಿದ್ದೇವೆ. ಇದು ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ ವಿಶ್ವದ ಸಮಸ್ಯೆ ಎನ್ನುವುದನ್ನು ತಳ್ಳಿಹಾಕಲಾಗದು.

ವಿಶ್ವದ ಬಹುತೇಕ ಕಡೆಗಳಲ್ಲಿ ಕಳೆದೊಂದು ಶತಮಾನದಲ್ಲಿ ತೀವ್ರ ಗತಿಯಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಅದರ ಪರಿಣಾಮಗಳನ್ನು ಕೂಡ ನಾವು ನೋಡುತ್ತಿದ್ದೇವೆ. ಇವು ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಐಷಾರಾಮಿ ಚಿಂತಿತ ಜೀವನ, ಯಂತ್ರಗಳ ಬಳಕೆ, ಇವು ಒಂದು ಕಡೆಯಿಂದ ನಮಗೆ ಹಗುರವಾಗಿ ಕಾಣಿಸಿದರೂ ಉದ್ಯೋಗದ ಸಮಸ್ಯೆಯನ್ನು ತಂದೊಡ್ಡಿದೆ.

ಸಮಾಜದಲ್ಲಿ ಲಿಂಗ ಪತ್ತೆ ಕ್ರಮದಿಂದ ಹೆಣ್ಣುಮಕ್ಕಳ ಜನನ ನಿಯಂತ್ರಣ ದಿಂದ ಸಮಾಜದಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ ವ್ಯತ್ಯಾಸ ಕಾಣುವಂತಾಗಿದೆ. ನಮ್ಮಲ್ಲಿ ಇನ್ನೂ ತುಂಬಿ ತುಳುಕುತ್ತಿರುವ ಬಡತನ, ಅಜ್ಞಾನ, ಮೌಢ್ಯಯುತ ದಾರ್ಮಿಕ ಶ್ರದ್ಧೆ ಸೇರಿದಂತೆ ಹಲವಾರು ಕಾರಣಗಳಿಂದ ಜನಸಂಖ್ಯೆ ನಿರಂತರ ಏರುಮುಖದತ್ತ ಸಾಗುತ್ತಿದೆ. ಇದರಿಂದ ಉದ್ಯೋಗ ಸಮಸ್ಯೆ, ಆಹಾರ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ ಎದುರಿಸುವಂತಾಗಿದೆ.

ಎಲ್ಲೋ ಒಂದು ಕಡೆಯಿಂದ ನೋಡಿದರೆ ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಜಾತಿ ವ್ಯವಸ್ಥೆ, ಲಾಭದ ರಾಜಕೀಯ, ಬಡವ ಬಲ್ಲಿದ ನೆಂಬ ಬೇಧ, ಆಸ್ತಿ ಮಾಡುವ ಹಂಬಲ, ಕೂಡಿಡುವ ಹುಚ್ಚು, ಹೀಗೆ ಅಗತ್ಯ ಸಂಪನ್ಮೂಲಗಳು ಕೂಡ ಸಮರ್ಪಕ ಬಳಕೆಯಾಗದೆ ಕೊಳೆಯುತ್ತಿದೆ. ಕುಟುಂಬ ಯೋಜನೆ ಜಾರಿಗೆ ತಂದರೆ ಸಾಲದು ಅದು ಸಮರ್ಪಕವಾಗಿ ಅನುಷ್ಠಾನವಾಗಿದೆಯಾ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಕೆಲಸವಾಗಬೇಕು. ಆಗ ಮಾತ್ರ ಜನಸಂಖ್ಯಾ ಸ್ಫೋಟಕ ತಡೆಯಲು ಸಾಧ್ಯವಾಗಬಹುದೇನೋ?

Leave a Reply

Your email address will not be published. Required fields are marked *