ಮೈಸೂರು: ಚಾಮುಂಡಿಬೆಟ್ಟ ಪಾದದ ದ್ವಾರವನ್ನು ಇದುವರೆಗೆ ತೆರೆದಿಲ್ಲ. ಆದರೂ ಜನ ಪಕ್ಕದ ಬೇಲಿ ನುಸುಳಿ ಮೆಟ್ಟಿಲು ಹತ್ತಿ ಇಳಿಯುತ್ತಿದ್ದಾರೆ. ಹಾಗಾದರೆ ದ್ವಾರ ಹಾಕಿರುವ ಉದ್ದೇಶವೇನು ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳ ಕಾಲ ಮೆಟ್ಟಿಲೇರುವುದನ್ನು ನಿಷೇಧಿಸಿ ದ್ವಾರವನ್ನು ಮುಚ್ಚಲಾಗಿತ್ತು. ಆ ನಂತರ ಅನ್ ಲಾಕ್ ಜಾರಿಗೆ ಬಂದಿದ್ದರೂ ದ್ವಾರವನ್ನು ಮಾತ್ರ ತೆರೆದಿರಲಿಲ್ಲ. ಬಳಿಕ ಆಷಾಢ ಅಮಾವಾಸ್ಯೆ ಮತ್ತು ವಾರಾಂತ್ಯದ ಕಾರಣ ಮೂರು ದಿನಗಳ ಕಾಲ ಪಾದದ ಬಳಿ ಬ್ಯಾರಿಕೇಡ್ ಹಾಕಿ, ಪೊಲೀಸರನ್ನು ನಿಯೋಜಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಕೋವಿಡ್ ಆರಂಭವಾದ ಬಳಿಕ ಕಳೆದ ವರ್ಷ ಆಷಾಢದಲ್ಲಿ ಪ್ರತಿ ಶುಕ್ರವಾರ ಮತ್ತು ವಾರಾಂತ್ಯದ ಶನಿವಾರ, ಭಾನುವಾರ ಹೀಗೆ ಮೂರು ದಿನಗಳ ಕಾಲ ಬೆಟ್ಟಕ್ಕೆ ಮೆಟ್ಟಿಲೇರಿ ಹೋಗುವುದನ್ನು ನಿರ್ಬಂಧಿಸಲಾಗಿತ್ತು. ಇದು ಕಳೆದ ಬಾರಿಯೂ ಜಾರಿಯಲ್ಲಿತ್ತು. ಆದರೆ ಉಳಿದ ದಿನಗಳಲ್ಲಿ ಮೆಟ್ಟಿಲೇರಲು ದ್ವಾರ ತೆರೆದು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಲಾಕ್ ಡೌನ್ ವೇಳೆ ಹಾಕಿದ ದ್ವಾರವನ್ನು ಇದುವರೆಗೆ ತೆರೆಯದ ಕಾರಣ ಭಕ್ತರು ಸೇರಿದಂತೆ ಬೆಳಿಗ್ಗೆ ಬೆಟ್ಟವೇರಿರುವ ನೂರಾರು ಮಂದಿ ದ್ವಾರದ ಬಳಿಯ ಬೇಲಿಯನ್ನು ನುಸುಳಿಕೊಂಡು ಮೆಟ್ಟಿಲೇರುತ್ತಿದ್ದಾರೆ.

ಪ್ರತಿ ದಿನವೂ ಸಾವಿರ ಮೆಟ್ಟಿಲೇರಿ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ನಮಸ್ಕರಿಸಿಕೊಂಡು ಬರುವ ವಾಯುವಿಹಾರಿಗಳದ್ದು ದೊಡ್ಡ ಸಂಖ್ಯೆಯಲ್ಲಿದೆ. ಇವರೆಲ್ಲರೂ ವಾರದಲ್ಲಿ ನಾಲ್ಕು ದಿನವಾದರೂ ಮೆಟ್ಟಿಲು ಹತ್ತುವುದಕ್ಕೆ ಅವಕಾಶವಾಗುವಂತೆ ದ್ವಾರವನ್ನು ತೆರೆಯುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಈಗ ಮೆಟ್ಟಿಲೇರುವ ದ್ವಾರವನ್ನು ಹಾಕಿದ ಮುಚ್ಚಿರುವ ನಂತರ ಬೇಲಿಯಿಂದ ನುಸುಳಿ ಹೋಗಲು ಅವಕಾಶ ಮಾಡಿಕೊಡಬಾರದು. ಆದರೆ ಇಲ್ಲಿ ಮೆಟ್ಟಿಲೇರುವವರು ಅವರ ಪಾಡಿಗೆ ನುಸುಳಿಕೊಂಡು ಮೆಟ್ಟಿಲೇರುತ್ತಿದ್ದಾರೆ. ಹೀಗಿರುವಾಗ ದ್ವಾರವನ್ನು ಬಂದ್ ಮಾಡಿ ಏನು ಪ್ರಯೋಜನವಾಯಿತು? ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಗೊಂದಲ ನಿವಾರಿಸ ಬೇಕಿದೆ. ಇಲ್ಲದೆ ಹೋದರೆ ಮೆಟ್ಟಿಲು ಹತ್ತಲು ಅವಕಾಶ ನೀಡಿ ದ್ವಾರವನ್ನು ತೆಗೆಯದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಕೇಳುತ್ತಿದ್ದಾರೆ.

ಇನ್ನೊಂದೆಡೆ ಎರಡು ತಿಂಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದರಿಂದ ಭಕ್ತರು ಸೇರಿದಂತೆ ಜನರು ಇತ್ತ ಬಾರದ ಕಾರಣ ಚಾಮುಂಡಿಬೆಟ್ಟದ ಪಾದದ ಬಳಿಯ ಮರಗಳಲ್ಲಿ ವಾಸವಾಗಿರುವ ಕೋತಿಗಳು ಹೊಟ್ಟೆಗೆ ಆಹಾರವಿಲ್ಲದೆ ಪರದಾಡುತ್ತಿದ್ದವು. ಈಗ ಇಲ್ಲಿಗೆ ಬರುವವರು ಬಾಳೆ ಹಣ್ಣು, ಬಿಸ್ಕೆಟ್ ಮೊದಲಾದವುಗಳನ್ನು ನೀಡುತ್ತಿದ್ದಾರೆ. ಇದರಿಂದ ಅವು ನೆಮ್ಮದಿಯಾಗಿವೆ.