ಧನುಷ್ಕೋಟಿಯಲ್ಲಿ ನರ್ತಿಸುವ ಕಾವೇರಿ…

ಕೊಡಗಿನಲ್ಲಿ ವರುಣ ಅಬ್ಬರಿಸಿದಾಗ ಕಾವೇರಿ ರೌದ್ರಾವತಾರ ತಾಳಿ ಹರಿಯುತ್ತಾಳೆ ಹೀಗೆ ವಿಶಾಲವಾಗಿ ಹರಿಯುತ್ತಾ ಬರುವ ಆಕೆ  ಕೆ.ಆರ್.ನಗರದ ಚುಂಚನಕಟ್ಟೆ ಬಳಿಯ ಧನುಷ್ಕೋಟಿಯಲ್ಲಿ ಹೆಬ್ಬಂಡೆ ಮೇಲೆ ನರ್ತಿಸುವಾಗ ಕಾಣುವ ದೃಶ್ಯ ಕಣ್ಣಿಗೊಂದು ಹಬ್ಬ

ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತದ ಬಗ್ಗೆ ಹೇಳುವುದಾದರೆ ಈ ಜಲಧಾರೆ  ಈ ಭಾಗದ ಜನರಿಗೆ ಅಚ್ಚುಮೆಚ್ಚಾಗಿದ್ದು, ಇದರ ಸೌಂದರ್ಯ ಆಸ್ವಾದಿಸಲೆಂದೇ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

ಈ ಬಾರಿ ಕೊಡಗಿನಲ್ಲಿ ಉತ್ತಮವಾಗಿ ಮಳೆ ಯಾಗುತ್ತಿರುವುದರಿಂದ ಮತ್ತು ಕಾವೇರಿ ನದಿಯಲ್ಲಿ ನೀರಿನ ಹರಿವು ಕೂಡ ಉತ್ತಮವಾಗಿರುವುದರಿಂದ ಕಾವೇರಿಯ ನರ್ತನವಂತು ತುಸು ಹೆಚ್ಚಾಗಿಯೇ ಇದೆ.

ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿ ಧುಮ್ಮಿಕ್ಕುವ ಜಲಪಾತವು ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ವಿಶಾಲವಾಗಿ ಜಿಗಿದು  ಸುಂದರ ದೃಶ್ಯಗಳನ್ನು ನೋಡುಗರಿಗೆ ತೆರೆದಿಡುತ್ತದೆ.  ಇದನ್ನು ನೋಡಲೆಂದೇ ಪ್ರವಾಸಿಗರ ದಂಡು ಇತ್ತ ಸುಳಿಯುತ್ತದೆ.

ಧನುಷ್ಕೋಟಿಯ ಚೆಲುವು ಪ್ರವಾಸಿಗರನ್ನು ಹುಚ್ಚೆಬ್ಬಿಸುವುದು ಸಹಜ ಹೀಗಾಗಿಯೇ ಕೆಲವರು ನೀರಿಗಿಳಿದು ಈಜುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಈಜುವುದು ಅಪಾಯಕಾರಿ ಎಂಬ ಫಲಕವಿದ್ದರೂ ಅದನ್ನು ನಿರ್ಲಕ್ಷಿಸಿ ಕಣ್ತಪ್ಪಿಸಿ ನೀರಿಗಿಳಿದು ಹಲವರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಹೀಗಾಗಿ ಒಂದೇ ಒಂದು ಕಿವಿ ಮಾತು ಏನೆಂದರೆ ದೂರದಿಂದಲೇ ಕಾವೇರಿಯ ಜಲನರ್ತನ ನೀರಿಗಿಳಿಯದೆ ಹಿಂತಿರುಗಿ..

Leave a Reply

Your email address will not be published. Required fields are marked *