ಸ್ವಂತ ಸೂರಿಲ್ಲದ ಕಾರ್ಮಿಕರಿಗೆ ಮನೆ: ರಾಮದಾಸ್
ಮೈಸೂರು: ಸ್ವಂತ ಮನೆ ಹೊಂದಿಲ್ಲದ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಆಶ್ರಯ ಯೋಜನೆಯಡಿಯಲ್ಲಿ ಮನೆಗಳ ಸೌಲಭ್ಯ ಕಲ್ಪಿಸುವುದಾಗಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಾಯ್ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಕೆ.ಆರ್.ಕ್ಷೇತ್ರದಲ್ಲಿ ನಡೆದ ಕೋವಿಡ್-19 ರ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರಿಗೆ ಕೋವಿಡ್ ನಿಂದಾಗಿ ಕೆಲಸ ನಿಂತುಹೋಗಿದ್ದು, ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್ ಗಳನ್ನು ನೀಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್ ವರೆಗೂ ಉಚಿತ ಪಡಿತರವನ್ನ ನೀಡುತ್ತಿದ್ದಾರೆ. ಓರ್ವ ಕಟ್ಟಡ ಕಾರ್ಮಿಕ ಕೂಡಾ ತನ್ನ ಸ್ಕಿಲ್ ಗಳ ಮೂಲಕ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಕೂಡ ಹೋಗಿ ಕೆಲಸ ಮಾಡಬಹುದು. ಇಂತಹ ಸ್ಕಿಲ್ ಇರುವ ಕೆಲಸಗಾರರನ್ನು ಗುರುತಿಸಿ ವಿಶೇಷವಾದ ಪ್ರೋತ್ಸಾಹವನ್ನು ಕೊಡಬೇಕಾಗಿದೆ ಎಂದರು.
ಈ ವೇಳೆ ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಕಾರ್ಮಿಕ ಇಲಾಖೆಯ ಅಧಿಕಾರಿ ರಾಜೇಶ್ ಜಾಧವ್, BAI ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಎನ್. ಹೇಮಂತ್, ಅಧ್ಯಕ್ಷ ಅಜಿತ್ ನಾರಾಯಣ್, ಕ್ರೆಡಾಯ್ ನ ಅಧ್ಯಕ್ಷ ಮುರಳೀಧರ ಇದ್ದರು.