ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ ಪ್ರಸಾದ್

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನು ಅಲಂಕರಿಸಿ ಸುಮಾರು ಐವತ್ತು ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯದಿಂದ ನಿವೃತ್ತಿಯಾಗುವ ಘೋಷಣೆ ಮಾಡಿದ್ದಾರೆ.

ತಮ್ಮ ಎಪ್ಪತೈದನೇ ವರ್ಷದ ಹುಟ್ಟು ಹಬ್ಬ(ಆ.6)ದಂದೇ ಘೋಷಣೆ ಮಾಡಿದ್ದು, ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ ಮಾಡಿದ್ದಾರೆ. ಈ ತೀರ್ಮಾನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಾಣಲು ಆರ್.ಧ್ರುವನಾರಾಯಣ್ ಅವರಿಗೆ ಮಾರ್ಗ ಮಾಡಿಕೊಟ್ಟಂತಾಗಿದೆ.

ಬಹುಶಃ ಕಾಂಗ್ರೆಸ್ ನಲ್ಲಿ ಇನ್ನೊಂದಷ್ಟು ಉನ್ನತ ಹುದ್ದೆಗಳನ್ನು ಕೆಪಿಸಿಸಿ ಅಧ್ಯಕ್ಷರಾಗುವ, ಮುಖ್ಯಮಂತ್ರಿಯಾಗುವ ಅವಕಾಶವೂ ಇಲ್ಲದಿರಲಿಲ್ಲ. ಆದರೆ ಹಲವು ಕಾರಣಗಳಿಂದ ಅದು ಕೈತಪ್ಪುವಂತಾಯಿತು. ಆ ಬಗ್ಗೆ ಅವರಿಗೆ ಬೇಸರವಿದೆ.

ಇನ್ನು ಸ್ವಾಭಿಮಾನಕ್ಕೆ ಧಕ್ಕೆ ಯಾಯಿತು ಎಂಬ ಒಂದೇ ಕಾರಣಕ್ಕೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಆದರೆ ತಮ್ಮ ತತ್ವ ಸಿದ್ಧಾಂತವನ್ನು ಬಿಟ್ಟುಕೊಟ್ಟವರಲ್ಲ. ರಾಜ್ಯ ಮತ್ತು ಕೇಂದ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಅವರು ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ಅವರೊಂದಿಗೆ ಆದ ಮನಸ್ತಾಪದಿಂದ ಪಕ್ಷವನ್ನು ಬಿಟ್ಟಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ 1974ರಲ್ಲಿ ಮೊದಲ ಚುನಾವಣೆ ಎದುರಿಸಿದ ಅವರು ಅಲ್ಲಿಂದ ಇಲ್ಲಿವರೆಗೆ ಸುಮಾರು ಹದಿನಾಲ್ಕು ಚುನಾವಣೆಗಳನ್ನು ಎದುರಿಸಿದ್ದಾರೆ. ಇದೀಗ ಬಿಜೆಪಿ ಪಕ್ಷದಲ್ಲಿರುವಾಗಲೇ ರಾಜಕೀಯ ನಿವೃತ್ತಿ ಕುರಿತಂತೆ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರೊಂದಿಗಿನ ಮನಸ್ತಾಪದಿಂದಲೇ ಕೈ ಬಿಟ್ಟು ಕಮಲ ಹಿಡಿದರೂ ಕೆಸರು ಮೆತ್ತಿಕೊಂಡವರಲ್ಲ. ತತ್ವ ವಿಚಾರಗಳನ್ನು ಬಿಟ್ಟವರಲ್ಲ. ತಪ್ಪು ನಡೆದಾಗ ಯಾವುದೇ ಪಕ್ಷವಾದರೂ ಅದರ ಬಗ್ಗೆ ಧ್ವನಿ ಎತ್ತಿದ್ದಾರೆ. ಯಾವತ್ತೂ ಸಿದ್ಧಾಂತವನ್ನು ಮರೆತವರಲ್ಲ.

ರಾಜಕೀಯವನ್ನು ತಪಸ್ಸಿನಂತೆ ಸ್ವೀಕರಿದ್ದಾರೆ. ಅಷ್ಟೇ ಅಲ್ಲ ಸ್ವಾಭಿಮಾನಕ್ಕೆ ಧಕ್ಕೆಯಾದ ವೇಳೆ ಅವರು ಹಿಂದೆಮುಂದೆ ನೋಡದೆ ಪಕ್ಷ ಬಿಟ್ಟು ಹೊರ ನಡೆದಿದ್ದಾರೆ. ಇದೀಗ ಬಿಜೆಪಿಯಲ್ಲಿರುವಾಗಲೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಆ ಮೂಲಕ ಯುವ ನಾಯಕರಿಗೆ ರಾಜಕೀಯ ಹಾದಿಯನ್ನು ತೆರೆದಿಟ್ಟಿದ್ದಾರೆ.

Leave a Reply

Your email address will not be published. Required fields are marked *