ಮೈಸೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಿಜವಾದ ರೈತರಲ್ಲ ಅವರೆಲ್ಲರೂ ರೈತರ ರಕ್ತ ಹೀರುವ ಮಧ್ಯವರ್ತಿಗಳು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವ ಸ್ಥಾನ ಅಲಂಕರಿಸಿದ ಬಳಿಕ ಪ್ರಥಮ ಬಾರಿಗೆ ಮೈಸೂರು ಜಿಲ್ಲೆಗೆ ಭೇಟಿ ನೀಡಿ, ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀಕಂಠೇಶ್ವರನ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವ ನಾಯಕರನ್ನು ಕರೆದು ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಇದೇ ವೇಳೆ ಹೇಳಿದರು.

ದೇವಸ್ಥಾನಕ್ಕೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೇವಸ್ಥಾನದ ನಿರ್ವಹಣಾಧಿಕಾರಿ ರವೀಂದ್ರ ಅವರು ಸ್ವಾಗತಿಸಿದರು. ಇದೇ ವೇಳೆ ಸ್ಥಳೀಯ ಶಾಸಕ ಬಿ ಹರ್ಷವರ್ಧನ್, ಮೈಸೂರು ಚಾಮರಾಜಕ್ಷೇತ್ರದ ಶಾಸಕ ನಾಗೇಂದ್ರ, ನಿಗಮ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ನಾಗಚಂದ್ರ ದೀಕ್ಷಿತ್, ಶಂಕರ್ ದೀಕ್ಷಿತ್ ಹಾಗೂ ಹಲವು ಮುಖಂಡರು ಇದ್ದರು.