ಮೈಸೂರು: ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವ ಮಾಹಿತಿ ಹೊರ ಬಂದಿದೆ.
ಅತ್ಯಾಚಾರಿಗಳ ಪೈಕಿ ನಾಲ್ವರು ಹೊರರಾಜ್ಯಗಳಿಗೆ ಸೇರಿದವರಾಗಿದ್ದರೆ, ಉಳಿದ ಇಬ್ಬರು ಸ್ಥಳೀಯರು ಎಂದು ಹೇಳಲಾಗುತ್ತಿದ್ದು, ಪೊಲೀಸರು ಬಂಧಿಸಿ ಸಮಗ್ರ ವಿಚಾರಣೆ ನಡೆಸಿದ ಬಳಿಕವಷ್ಟೆ ನೈಜ ವಿಚಾರ ಹೊರಬರಲಿದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ಕಾಮುಕರು ಮೈಸೂರಿನಿಂದ ಕಾಲ್ಕಿತ್ತಿದ್ದರು. ಆದರೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ತಮಿಳುನಾಡು ಕೇರಳದಿಂದ ಅವರನ್ನು ಬಂಧಿಸಿ ಕರೆತರಲಾಗಿದೆ.
ಈ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜಿನ ರಿಪಿಟರ್ಸ್ ಆಗಿದ್ದು, ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ಇವರು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಸೇರಿ ಆ.24ರಂದು ಮಂಗಳವಾರ ಚಾಮುಂಡಿಬೆಟ್ಟ ತಪ್ಪಲಿನ ಲಲಿತಾದ್ರಿ ಪುರದ ಬಳಿಯ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಸೇವಿಸುತ್ತಾ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ಅಂದರೆ ರಾತ್ರಿ 7.30ರಿಂದ 8 ಗಂಟೆ ಅವಧಿಯಲ್ಲಿ ಮುಂಬೈ ಮೂಲದ ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಆ ಪ್ರದೇಶದ ಮೋರಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದನ್ನು ನೋಡಿದ ಕಾಮುಕರು ಮೊದಲೇ ಮದ್ಯ ಸೇವಿಸಿ ಅಮಲಿನಲ್ಲಿದ್ದರು. ಹೀಗಾಗಿ ವಿದ್ಯಾರ್ಥಿನಿ ಬಳಿ ತೆರಳಿ ಆಕೆಯ ಗೆಳೆಯನಿಗೆ ಥಳಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಪರೀಕ್ಷೆ ಬರೆಯದೆ ಎಸ್ಕೇಪ್ ಆಗಿದ್ದರು. ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಆ ನಂತರ ಬಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು.
ಯಾವಾಗ ಪ್ರಕರಣ ಬೆಳಕಿಗೆ ಬಂತೋ ಇಡೀ ಮೈಸೂರು ಮಾತ್ರವಲ್ಲ, ರಾಜ್ಯ, ದೇಶದಲ್ಲಿ ಸಂಚಲನ ಶುರುವಾಗಿತ್ತು. ನಿರ್ಭಯಾ ಪ್ರಕರಣದ ದುಃಖ ಇನ್ನೂ ಜನರ ಮನಸ್ಸಿನಿಂದ ದೂರವಾಗಿಲ್ಲ. ಆಗಲೇ ನಮ್ಮ ಊರಿನಲ್ಲಿ ಭಯಾನಕ ಕೃತ್ಯ ನಡೆಯಿತಲ್ಲ ಎಂದು ಜನ ಆಕ್ರೋಶಕ್ಕೊಳಗಾಗಿದ್ದರು. ಹೆಣ್ಣು ಹೆತ್ತವರು ಚಿಂತೆಗೊಳಗಾಗಿದ್ದರು.
ವಿರೋಧಪಕ್ಷಗಳು, ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಕೃತ್ಯವನ್ನು ಖಂಡಿಸಿದಲ್ಲದೆ, ಬೀದಿಗಿಳಿದು ಪ್ರತಿಭಟನೆ ನಡೆಸಿದರು. ತಕ್ಷಣ ಎಚ್ಚೆತ್ತ ಸರ್ಕಾರ ಇತ್ತ ಧಾವಿಸಿತ್ತು. ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಯಿತು. ಸುಮಾರು 80ಕ್ಕೂ ಹೆಚ್ಚಿನ ಪೊಲೀಸರ ತಂಡ ಕಾರ್ಯಾಚರಣೆಗಿಳಿಒಯಿತು. 25ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿತ್ತು. 28ಮಂದಿಯ ಲೊಕೇಶನ್ ಪತ್ತೆ ಹಚ್ಚಲಾಯಿತು. ಅದರಲ್ಲಿ ನಾಲ್ವರು ಮೇಲೆ ಪೊಲೀಸರಿಗೆ ಸಂಶಯ ಬಂದಿತ್ತು. ಹೀಗಾಗಿ ಅವರ ಜಾಡು ಹಿಡಿದು ತ್ತಿದ ಆಲನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ರವಿಶಂಕರ್, ನಜರ್ ಬಾದ್ ಇನ್ಸಪೆಕ್ಟರ್ ಶ್ರೀಕಾಂತ್, ಉದಯಗಿರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್ ಅವರ ನೇತೃತ್ವದ ತಂಡ ತಮಿಳುನಾಡು- ಕೇರಳಗಳಿಗೆ ತೆರಳಿತ್ತಲ್ಲದೆ, ಅವರನ್ನು ಹುಡುಕಿ ಶುಕ್ರವಾರ ತಡರಾತ್ರಿ ಮೈಸೂರಿಗೆ ತರುವಲ್ಲಿ ಯಶಸ್ವಿಯಾಗಿದೆ.
ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪೊಲಿಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು ಯಶಸ್ವಿಯಾಗಿದೆ. ಈ ಬಗ್ಗೆ ನಾನು ಈಗ ಮಾಹಿತಿ ಕೊಡಲು ಸಾಧ್ಯವಿಲ್ಲ. ಆದರೆ ಶೀಘ್ರವೇ ಎಲ್ಲಾ ಮಾಹಿತಿಯನ್ನು ನಾನು ಅಥವಾ ಪೊಲೀಸರು ನೀಡುವುದಾಗಿ ಹೇಳಿದ್ದಾರೆ.