ಮೈಸೂರಿನ ಹೊರ ವಲಯದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮೈಸೂರಿನ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಈ ಪ್ರಕರಣವನ್ನು ಘಟನೆ ನಡೆದ ಕೇವಲ 82 ಗಂಟೆಗಳ ಒಳಗೆ ಮೈಸೂರು ಪೊಲೀಸರು ಬೇಧಿಸುವ ಮೂಲಕ ಅಪರಾಧ ತನಿಖೆಯ ಕಾರ್ಯಚರಣೆಯಲ್ಲಿ ತಾವು ಎಷ್ಟರಮಟ್ಟಿಗೆ ಚುರುಕು ಇದ್ದೇವೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಮೂಲಕ ಮೈಸೂರಿನ ಪೊಲೀಸರ ಘನತೆಯನ್ನು ಇಡೀ ದೇಶದಲ್ಲಿ ಎತ್ತಿ ಹಿಡಿದಿದ್ದಾರೆ. ಇಡೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಎಸಿಪಿಗಳು, ಇನ್ಸಪೆಕ್ಟರ್ ಗಳು, ಸಬ್ ಇನ್ಸ್ ಪೆಕ್ಟರ್ ಗಳು, ಪೊಲೀಸ್ ಪೇದೆಗಳು, ಗುಪ್ತಚರ ಸಿಬ್ಬಂದಿಗಳು ಅಭಿನಂದನೆಗೆ ಅರ್ಹರು. ಇಂತಹ ಟೀಂ ನ ನೇತೃತ್ವವಹಿಸಿದ್ದ ಮೈಸೂರು ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತಾ ಮತ್ತು ಡಿಸಿಪಿ ಪ್ರದೀಪ್ ಗುಂಟಿ ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಮೈಸೂರು ಜನರ ಪರವಾಗಿ ಸಲ್ಲಿಸುತ್ತಿದ್ದೇನೆ.
ಕರ್ನಾಟಕ ಪೊಲೀಸರು ದಕ್ಷತೆಗೆ ಹೆಸರಾಗಿರುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು (ಬಾಲ ಆರೋಪಿ ಸೇರಿ) ಪೊಲೀಸರು ಚುರುಕು ಕಾರ್ಯಾಚರಣೆ ಮೂಲಕ ಬಂಧಿಸಿದ್ದು, ಅವರಿಗೆ ಅಭಿನಂದನೆಗಳನ್ನು ಹೇಳಬಯಸುತ್ತೇನೆ.
ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ 5 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಯನ್ನೂ ಸಹ ಶೀಘ್ರ ಬಂಧಿಸಲಾಗುತ್ತದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು, ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಲಭಿಸುವಂತೆ ಮಾಡಲಿದ್ದಾರೆ.
ಇನ್ನು ಮೂರು ದಿನಗಳ ಹಿಂದೆ ಮೈಸೂರಿನ ಜ್ಯುವೆಲ್ಲರಿ ಶಾಪ್ ವೊಂದರಲ್ಲಿ ಶೂಟೌಟ್ ನಡೆಸಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಮೈಸೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ ಎಂಬುದನ್ನು ದೇಶಕ್ಕೆ ತೋರಿಸಿಕೊಡಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಪಾಲನೆಯಾಗುವಲ್ಲಿ ಪೊಲೀಸರ ಪಾತ್ರ ಬಹಳ ದೊಡ್ಡದಿದೆ. ಅಲ್ಲದೆ, ಕರ್ನಾಟಕದ ಪೊಲೀಸರ ಬಗ್ಗೆ ದೇಶದಲ್ಲೇ ಉತ್ತಮ ಹೆಸರಿದ್ದು, ದಕ್ಷ, ಪ್ರಾಮಾಣಿಕ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮೈಸೂರಿನಲ್ಲಿಯೂ ಸಹ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಈಗಾಗಲೇ ಸೂಚನೆ ನಿಡಲಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ.