ಡೆಮಾಕ್ರಸಿ ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಇದೆ. ಸಂಗೀತ ನಿರ್ದೇಶಕ ಡಾ.ಹಂಸಲೇಖ ಕಳವಳ

ಮೈಸೂರು: ಜನರಿಗೆ ಪ್ರಜಾಸತ್ತಾತ್ಮಕ ತಿಳಿವಳಿಕೆ ಬರದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ತಿಳಿಸಿದರು.
ರಂಗವಾಹಿನಿ, ರಾಮಮನೋಹನರ ಲೋಹಿಯಾ ಟ್ರಸ್ಟ್ ಹಾಗೂ ನೆಲೆ ಹಿನ್ನೆಲೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 10ನೇ ವರ್ಷದ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮದಲ್ಲಿ ಮುಳ್ಳೂರು ನಾಗರಾಜ ಕುರಿತು ಅವರು ಮಾತನಾಡಿದರು.


ದಲಿತರು ಹಿಂದುಳಿದ ವರ್ಗಗಳ ಜನರು ಎಚ್ಚೆತ್ತುಕೊಳ್ಳಬೇಕು. ತೀರ್ಥಕ್ಷೇತ್ರ, ಮಠಮಾನ್ಯಗಳಿಗೆ ಸುತ್ತುವುದನ್ನು ಬಿಡಬೇಕು. ಅಸಹನೆ ಹೆಚ್ಚಾಗುತ್ತಿದೆ. ಜಾತಿಗಳ ನಡುವಿನ ಅಸಹನೆ ಹೆಚ್ಚಾಗಿದೆ. ಇದು ಅಪಾಯಕಾರಿ ಎಂದರು.
ಭಾರತದಲ್ಲಿ 2 ರೋಗಗಳಿವೆ. ಮೊದಲನೆಯದು ಜಾತಿ ಎಂಬ ಒಳರೋಗ. ಮತ್ತೊಂದು ಜಾತಿಯನ್ನು ತೋರಿಸಿಕೊಳ್ಳುವ ಕಾಯಿಲೆ. ಇವರೆಡನ್ನು ಬಿಟ್ಟು ಸಂವಿಧಾನ ಕೊಟ್ಟ ನಾಗರಿಕತ್ವಕ್ಕೆ ಗೌರವ ಕೊಡಬೇಕು ಎಂದು ತಿಳಿಸಿದರು.
ಮುಳ್ಳೂರು ನಾಗರಾಜು, ರಾಜಶೇಖರ ಕೋಟಿ ಪತ್ರಕರ್ತರಾಗಿ ಜನರ ಜಾಗೃತಿಗಾಗಿ ಶ್ರಮಿಸಿದರು. ನಾಗರಾಜ ಕ್ರಾಂತಿಕಾರಿ. ಅವರ ತನಕ್ಕೆ ಶರೀರ ಒಗ್ಗುತ್ತಿರಲಿಲ್ಲ. ಕೊನೇ ದಿನಗಳಲ್ಲಿ ಬಹಳ ಕಷ್ಟಪಟ್ಟರು. ಈ ವರ್ಷದ ಪ್ರಶಸ್ತಿಯನ್ನು ಸ್ವಾರ್ಥಕ್ಕಾಗಿ ಬರೆಯದೇ ಲೇಖಕ ಡಾ.ಕಷ್ಣಮೂರ್ತಿ ಅವರಿಗೆ ನೀಡಿರುವುದಕ್ಕೆ ಸಂಘಟಕರನ್ನು ಪ್ರಶಂಸಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ.ಮುನಿರಾಜು ರಾಜಶೇಖರ ಕೋಟಿ ಕುರಿತು ಮಾತನಾಡಿ, ಜನಪರ, ಜೀವಪರ, ನೆಲ-ಜಲದ ಪರವಾಗಿ ಕೆಲಸ ಮಾಡಿದ ಕೆಲವೇ ಕೆಲವು ಪತ್ರಿಕೆಗಳಲ್ಲಿ ಆಂದೋಲನ ಪ್ರಮುಖವಾದದ್ದು. ಚಳವಳಿಗಳ ಮುಖವಾಣಿಯಾಗಿದ್ದು ಆಂದೋಲನ ಪತ್ರಿಕೆ. ಸತ್ಯಕ್ಕಾಗಿ ಧೈರ್ಯವಾಗಿ ಕೆಲಸ ಮಾಡಿದವರು ರಾಜಶೇಖರಕೋಟಿಯವರು ಎಂದರು.
ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಲೇಖಕ, ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ಅವರಿಗೆ 10ನೇ ವರ್ಷದ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಸಮಾರಂಭ ಉದ್ಘಾಟಿಸಿದರು. ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನಾ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಜಾನಪದ ಪ್ರಾಧ್ಯಾಪಕ ಪ್ರೊ.ಎಂ.ನಂಜಯ್ಯ ಹೊಂಗನೂರು, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ನೆಲೆ ಹಿನ್ನೆಲೆ ಕೆ.ಆರ್.ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ವಿಜ್ಞಾನಿ ವಿದ್ಯಾರ್ಥಿಯಾದ ನನ್ನನ್ನು ಬದುಕಿನ ಒತ್ತಡ ಸಾಹಿತ್ಯದತ್ತ ಕರೆತಂದಿತು. ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಸಾಹಿತ್ಯ ನನಗೆ ನೋವಿನ ಭಾಷೆಯಾಗಿದೆ. ಪ್ರಶಸ್ತಿ ಸನ್ಮಾನಗಳಿಗೆ ಅಪೇಕ್ಷಿಸದೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಹಂಸಲೇಖರಿಂದ ನನ್ನ ಕೃತಿಗೆ ಪ್ರಶಸ್ತಿ ಲಭಿಸಿರುವುದು ಅತೀವ ಸಂತಸ ತಂದಿದೆ.
-ಡಾ.ಕೃಷ್ಣಮೂರ್ತಿ ಚಮರಂ

ಡೆಮಾಕ್ರಸಿ ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಇದೆ. ಅದಾದರೆ ಹಳೆಯದಕ್ಕೆ ಜಾರಿ ಬೀಳುತ್ತೆ. ಆದರೂ ಸಂಪೂರ್ಣ ನಾಶವಾಗುವುದಿಲ್ಲ ಎಂಬ ನಂಬಿಕೆಯಿದೆ. ಪ್ರಜಾಪ್ರಭುತ್ವ ಉಳಿಸಲು ಎಲ್ಲರ ಎಚ್ಚರದಿಂದ ಇರಬೇಕು. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಎಚ್ಚರದಿಂದ ಕೆಲಸ ಮಾಡಬೇಕು. ದಲಿತರ ಮನೆಗೆ ಬಲಿತರ ಮನೆಗೆ ಹೋಗುವುದು ದೊಡ್ಡ ವಿಷಯವಲ್ಲ. ದಲಿತರ ಮನೆಗೆ ಬರುವ ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಊಟ ಬಡಿಸುವುದು ದೊಡ್ಡ ವಿಷಯ.
-ಡಾ.ಹಂಸಲೇಖ, ಸಂಗೀತ ನಿರ್ದೇಶಕ