ಮೈವಿವಿ ಶಿಕ್ಷಣ ಮಂಡಳಿ ಮೂರನೇ ಸಾಮಾನ್ಯ ಸಭೆಯಲ್ಲಿ ಅನುಮತಿ
ಮೈಸೂರು: ಹಳ್ಳಿಹಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮೈಸೂರು ವಿವಿಯ ‘ಮೈಸೂರು ಸಿಟಿ ಸ್ಕೂಲ್ ಆಫ್ ಲಾ’ ವಿದ್ಯಾರ್ಥಿಗಳು ಇನ್ನುಮುಂದೆ ಕನ್ನಡದಲ್ಲೇ ಕಾನೂನು ಪದವಿ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡುವಂತೆ ತೀರ್ಮಾನಿಸಲಾಯಿತು.

ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಗುರುವಾರ ವಿಜ್ಞಾನ ಭವನದಲ್ಲಿ ನಡೆದ ಮೈವಿವಿಯ ಶಿಕ್ಷಣ ಮಂಡಳಿ 3ನೇ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಿತು.
ಕಾನೂನು ನಿಕಾಯದ ಡೀನ್ ಪ್ರೊ.ರಮೇಶ್ ಅವರು ಸಭೆಯ ನಡಾವಳಿಯನ್ನು ಮಂಡಿಸಲು ಅನುಮತಿ ಕೋರಿದರು. ಈ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ ಸರ್ಕಾರ ನಾಮನಿರ್ದೇಶನ ಸದಸ್ಯ ವಕೀಲ ಎಂ.ಸಿ.ರಾಜಶೇಖರ್, ‘ಕಾನೂನು ಓದುವ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಎಂಜಿನಿಯಿರಿಂಗ್, ಮೆಡಿಕಲ್ ಪರೀಕ್ಷೆಗಳನ್ನೇ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ಎಷ್ಟೋ ನ್ಯಾಯಮೂರ್ತಿಗಳು ಕನ್ನಡದಲ್ಲೇ ತೀರ್ಪನ್ನು ಬರೆಯುತ್ತಾರೆ. ಹೀಗಿರುವಾಗ ಕಾನೂನು ವಿಷಯಕ್ಕೆ ಮಾತ್ರ ಇಂಗ್ಲಿಷ್ ಮಾಧ್ಯಮವೇಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪ್ರೊ.ರಮೇಶ್ ಅವರು, ವಿವಿಯಲ್ಲಿ 1973ರಿಂದ ಕಾನೂನು ವಿಭಾಗ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ ಸ್ನಾತಕೋತ್ತ ಪದವಿಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲೇ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಸ್ನಾತಕ ಪೂರ್ವ ಪದವಿಯಲ್ಲಿ ೨೦೦೬ರ ವರೆಗೆ ವಿದ್ಯಾರ್ಥಿಗಳು ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆಯುತ್ತಿದ್ದರು. ನಂತರ ಬದಲಾದ ನಿಯಾಮಾವಳಿಂದ ಕಾನೂನು ಪದವಿ ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತನೆ ಆಯಿತು ಎಂದರು.
ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದರೆ, ಪಾಠವನ್ನೂ ಕನ್ನಡದಲ್ಲೇ ಮಾಡಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿಯುತ್ತಾರೆ. ಆದರೆ, ಕನ್ನಡದಲ್ಲಿ ಅಧ್ಯಯನಕ್ಕೆ ಗುಣಮಟ್ಟದ ಪುಸ್ತಕಗಳಿಲ್ಲ. ಬೆರಳೆಣಿಕೆಯಷ್ಟು ಪುಸ್ತಕಗಳಿದ್ದು, ಅವು ಗುಣಮಟ್ಟದಲ್ಲಿ ಅನುವಾದ ಮಾಡಿಲ್ಲ. ಅಂತಹ ಪುಸ್ತಕಗಳನ್ನು ಅಧ್ಯಯನ ಮಾಡಿದರೆ, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಇನ್ನೂ ಕಡಿಮೆಯಾಗುತ್ತದೆ. ಹೀಗಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ನಂತರ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಬೆಂಗಳೂರು ಕಾನೂನು ವಿವಿಯಲ್ಲಿ ಪಠ್ಯಕ್ರಮ ಹೇಗಿದೆ? ಯಾವ ಭಾಷೆಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಪರಿಶೀಲಿಸಲಾಗುವುದು. ಜೊತೆಗೆ ಮುಂದಿನ ಬಾರಿಯಿಂದ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಭರವಸೆ ನೀಡಿದರು.
ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಶೈಕ್ಷಣಿಕ ಮಂಡಳಿ ಸದಸ್ಯರಾದ ಎಂಎಲ್ಸಿ ಆರ್.ಧರ್ಮಸೇನಾ, ಪ್ರೊ.ಜಿ.ಆರ್.ಜನಾರ್ಧನ್, ಪ್ರೊ.ಶೋಭಾ ಜಗನ್ನಾಥ್, ಪ್ರೊ.ಎಸ್.ಲೀಲಾವತಿ, ಪ್ರೊ.ಎಂ.ಎಸ್.ಶಾರದಾ, ಪ್ರೊ.ಕೆ.ಎನ್.ಅಮೃತಾ, ಪ್ರೊ.ರಾಜ್ಕುಮಾರ್ ಎಚ್.ಗರಂಪಲ್ಲಿ, ಪ್ರೊ.ಎಂ.ಎಸ್.ನಳಿನಿ, ಪ್ರೊ.ಕೆ.ಕೆಂಪರಾಜು, ಪ್ರೊ.ಕೆ.ಗೋಪಾಲ್ ಮರಾಟೆ, ಪ್ರೊ.ಕೆ.ಎನ್.ಮೋಹನ, ಡಾ.ಎಂ.ಪಿ.ಸದಾಶಿವಯ್ಯ, ಪ್ರೊ.ನಿಂಗಮ್ಮ ಬೆಟಸೂರ್ ಇತರರು ಹಾಜರಿದ್ದರು.