ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರುಣಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ಮಾತುಕತೆ ನಡೆಸುತ್ತಿದ್ದ ವೇಳೆ ಅವರು, ‘ಬಾಯಿ ಮುಚ್ಚಿಕೊಳ್ಳಿ, ಅಧಿಕ ಪ್ರಸಂಗ ಮಾಡಬೇಡಿ, ಏನ್ ರೀ ನಿಮ್ಮ ಹೆಸರು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ನೀವು ಸರ್ಕಾರಿ ನೌಕರರಾಗುವುದಕ್ಕೆ ಅನ್ಫಿಟ್’ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಬಿಲ್ ವಸೂಲಿ ಮಾಡಿ. ಜನರು 500 ರೂ. ಬಿಲ್ ಕೊಟ್ಟರೂ ತೆಗೆದುಕೊಳ್ಳಿ. ಜನರ ಬಳಿ ಕಂತು ಲೆಕ್ಕದಲ್ಲಿ ಹಣ ಪಡೆಯಿರಿ. ಆದರೆ ವಿದ್ಯುತ್ ಸಂಪರ್ಕ ಕಡಿತ ಮಾಡಬೇಡಿ. ವರುಣಾ ಕ್ಷೇತ್ರದಲ್ಲಿ ಸೆಸ್ಕ್ ಕಚೇರಿಗೆ ನೀಡಲಾಗಿರುವ ಜಾಗ ಗ್ರಾಪಂ ನದ್ದೇ ಒಂದು ವೇಳೆ ಕಚೇರಿಯನ್ನು ಸೀಜ್ ಮಾಡಿದರೂ ಹೀಗೆ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಈ ವೇಳೆ ಗ್ರಾಮದ ಮುಖಂಡ ಮಾತನಾಡಿ, ಸರ್ಕಾರದಿಂದ ಉಚಿತವಾಗಿ ಮೀಟರ್ ಅಳವಡಿಕೆ ಯೋಜನೆ ಬಂದಿದ್ದರೂ, ಗ್ರಾಮಸ್ಥರಿಂದ 3 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು. ಈ ವೇಳೆ ಅಧಿಕಾರಿಯೊಬ್ಬರು, ‘ಯಾವುದು ಆ ಯೋಜನೆ ದಾಖಲೆ ಕೊಡಿ’ ಎಂದು ಪ್ರಶ್ನಿಸಿದ್ದಕ್ಕೆ, ಶಾಸಕರು ಕಿಡಿ ಕಾರಿದರು.
ಸರ್ಕಾರಿ ಯೋಜನೆಗಳ ಬಗ್ಗೆ ನೀವು ತಿಳಿಸಿಕೊಡಬೇಕು, ಗ್ರಾಪಂ ಮೂಲಕ ಅನುಷ್ಠಾನಕ್ಕೆ ತರಬೇಕು. ಅದನ್ನು ಬಿಟ್ಟು ಜನರನ್ನು ದಾಖಲೆ ಕೇಳಿದರೆ, ಅವರೇನು ಕೊಡುತ್ತಾರೆ? ಕುಳಿತು ಮಾತನಾಡಿ, ಸಮಸ್ಯೆ ಬಗೆಹರಿಸುವುದನ್ನು ನೋಡಿ.. ಎಂದು ಸೂಚಿಸಿದರು.