ಮೈಸೂರಿನ ಅಭಿವೃದ್ಧಿ ಹಾಗೂ ಮೈಸೂರು ಪ್ರವಾಸೋದ್ಯಮ ಹಿತದೃಷ್ಟಿಯಿಂದ ನಮ್ಮ ಮೈಸೂರಿನವರೇ ಆದ ಮುಖ್ಯಮಂತ್ರಿಗಳಾದ ಸನ್ಮಾನ್ಯ “ಶ್ರೀ ಸಿದ್ದರಾಮಯ್ಯನವರು” ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಮುಂದುವರಿಯಬೇಕೆಂದು ಹೋಟೆಲು ಮಾಲೀಕರ ಸಂಘದಿಂದ ಆಗ್ರಹ. ಮೈಸೂರು ಭಾಗದಲ್ಲಿ ಶ್ರೀ ಡಿ.ದೇವರಾಜ ಅರಸುರವರನ್ನು ಬಿಟ್ಟರೆ, ಮುಖ್ಯಮಂತ್ರಿ ಸ್ಥಾನ ಸಿಗಲು ಮೈಸೂರಿನ ಜನತೆ 33 ವರ್ಷ ಕಾಯಬೇಕಾಯಿತು. ಮೊದಲ ಅವಧಿ ನಂತರ ಎರಡನೆಯ ಅವಧಿಗೆ ಪುನಃ ಮುಖ್ಯಮಂತ್ರಿಗಳಾಗಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಶ್ರೀ ಸಿದ್ದರಾಮಯ್ಯನವರು ಮೈಸೂರು ಭಾಗಕ್ಕೆ ಅನೇಕ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಪ್ರವಾಸೋದ್ಯಮಕ್ಕೆ ಅತೀ ಹೆಚ್ಚಿನ ಆದ್ಯತೆ ನೀಡಿರುವುದು ಮುವಾರಿ ಭಾಗದಿಂದ ಮುಖ್ಯಮಂತ್ರಿಗಳಾಗಿದ್ದರಿಂದಲೇ ಅವರಿಗೆ ತವರು ಜಿಲ್ಲೆ, ನಮ್ಮ ಜಿಲ್ಲೆ ಮೈಸೂರಿಗೆ ಏನಾದರೂ ಅಭಿವೃದ್ಧಿ ಕಾರ್ಯ ಮಾಡಬೇಕೆಂದು ಸದಾ ನೆನಪಿಡುವ ಕಾರ್ಯಕ್ರಮ ಮಾಡುತ್ತಿದ್ದಾರೆ.

2013-2018 ಈ ಅವಧಿಯಲ್ಲಿ ಅವರು ಮಾಡಿರುವ ಬಹಳ ಮುಖ್ಯವಾದ, ಜನಮನದಲ್ಲಿ ಶಾಶ್ವತವಾಗಿ ಉಳಿಯುವ, ಜಯದೇವ ಆಸ್ಪತ್ರೆ, ಟ್ರಾಮಾ ಸೆಂಟರ್, ಜಿಲ್ಲಾ ಆಸ್ಪತ್ರೆ, ಪಂಚಕರ್ಮ ಆಯುರ್ವೇದ ಆಸ್ಪತ್ರೆ, ಮಹಾರಾಣಿ ಕಾಲೇಜು, ಹೊಸ ಜಿಲ್ಲಾಧಿಕಾರಿಗಳ ಕಛೇರಿ, ಚಾಮುಂಡಿ ಬೆಟ್ಟ ಬಹುಮಹಡಿ ವಾಹನ ನಿಲ್ದಾಣ, ಕಾಂಕ್ರೀಟ್ ರಸ್ತೆಗಳಾದ ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಆಲ್ಬರ್ಟ್ ವಿಕ್ಟರಿ ರಸ್ತೆ ಮತ್ತಿತರ ಕಡೆ ಸೇರಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ 3000 ಕೋಟಿ ರೂ.ಗಳಿಗೂ ಅಧಿಕ ಹಣ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಿದ್ದಾರೆ. ಮೈಸೂರಿನವರಾದ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗಳಾಗಿರುವುದ ರಿಂದಲೇ ಈ ಅಭಿವೃದ್ಧಿ ಕಾರ್ಯಗಳು ಆಗಿರುತ್ತವೆ.
ಈಗ ಎರಡನೇ ಅವಧಿಯ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿ ಮುಂದುವರಿದರೆ ನಮ್ಮ ಮೈಸೂರಿನ ಪ್ರವಾಸೋದ್ಯಮ, ಚಿತ್ರನಗರಿ, ಡಿಸ್ನಿಲ್ಯಾಂಡ್ ಮತ್ತಿತರ ಅಭಿವೃದ್ಧಿ ಕಾರ್ಯಗಳು ಮೈಸೂರಿನಲ್ಲಿ ಇನ್ನೂ ಹೆಚ್ಚಿಗೆ ಆಗುವುದು. ಮೈಸೂರಿನವರು ಮುಖ್ಯಮಂತ್ರಿಗಳಾಗಿದ್ದರಿಂದ ಮೈಸೂರಿನ ಮೇಲೆ ವಿಶೇಷ ಕಾಳಜಿ ಇರುವುದರಿಂದ ಅದ್ದೂರಿ ದಸರಾ ಆಚರಿಸಲು 40 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ವಿಶೇಷವಾದ ಪ್ರೀತಿಯಿದೆ. ಮಾನ್ಯ ಸಿದ್ದರಾಮಯ್ಯನವರು ರಾಜೀನಾಮೆ ನೀಡದೇ ಇನ್ನೂ ಮೂರೂವರೆ ವರ್ಷ ಅಂದರೆ 2ನೇ ಅವಧಿಯ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ.
ನಮ್ಮ ಹೋಟೆಲ್ ಉದ್ಯಮವು ಅತಿಥಿ ದೇವೋಭವ ಉದ್ಯಮ, ಜಾತ್ಯಾತೀತ ಹಾಗೂ ಪಕ್ಷಾತೀತವಾಗಿದ್ದು, ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ಹೋಟೆಲ್ ಮಾಲೀಕರ ಸಂಘವು ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಬಯಸುತ್ತದೆ.