ಗ್ರಾಮಮಟ್ಟಕ್ಕೂ ವ್ಯಸನ ಹರಡಿರುವುದು ವಿಪರ್ಯಾಸ!

ಮಂಡ್ಯ: ಅಂದು ಸಿನಿಮಾಗಳಲ್ಲಿ ನೋಡುತ್ತಿದ್ದ ವ್ಯಸನ ಇಂದು ಕಾಲೇಜುಗಳಲ್ಲಿ, ಶಾಲೆಗಳಲ್ಲಿ, ಬೀದಿಗಳಲ್ಲಿ, ಗ್ರಾಮಮಟ್ಟದಲ್ಲಿ ಕಾಣುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಎನ್ ಧನಂಜಯ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮನೋರೋಗ ವಿಭಾಗ ಮಿಮ್ಸ್ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟ ಇದರ ಬಗ್ಗೆ ಜಾಗೃತಿ ಮೂಡಿಸಲು 1987 ರಿಂದ ವಿಶ್ವಾದ್ಯಂತ ಈ ದಿನವನ್ನು ಆಚರಿಸಿಕೊಂಡು ಬಂದಿದ್ದೇವೆ. ಆರೋಗ್ಯವಂತ ಸಮಾಜ ನಿರ್ಮಾಣದ ಹೊಣೆ ಪ್ರತಿಯೊಬ್ಬರದಾಗಿದ್ದು, ದುಶ್ಚಟಗಳಿಂದ ದೂರಾಗುವ ಮೂಲಕ ಉತ್ತಮ ಹವ್ಯಾಸ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚು ಮಾದಕ ದ್ರವ್ಯ ವ್ಯಸನ ಕ್ಕೆ ಒಳಗಾಗುತ್ತಿದ್ದಾರೆ, ಅನೇಕ ಸಂದರ್ಭದಲ್ಲಿ ಅನೇಕ ಅಪರಾಧಗಳು ನಡೆದಾಗ ಅವರು ಮಾದಕದ್ರವ್ಯ ಸೇವನೆಯ ದಾಸರಾಗಿ ಅಪರಾಧವನ್ನು ಮಾಡಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ. ಈ ವ್ಯಸನವೂ ಅಲ್ಪಕ್ಷಣದ ಖುಷಿಗೋಸ್ಕರ ಅಥವಾ ಕುತೂಹಲದಿಂದ ಬಂದಿದ್ದು, ಇದು ಚಟವಾಗಿ ಸಮಾಜಕ್ಕೆ ಮಾರಕವಾಗಿದೆ. ವ್ಯಸನದಿಂದ ಅನೇಕ ಅಪರಾಧ ಪ್ರಕರಣಗಳು ನಡೆದಿದ್ದು, ಇವೆಲ್ಲಕ್ಕೂ ಅಂತ್ಯ ಹಾಡಲೇಬೇಕು, ಹಾಗಾಗಿ ಮುಂದೆ ಈ ದೇಶದ ಭವಿಷ್ಯ ಉಜ್ವಲವಾಗಿಸಲು, ಮಾದಕ ವ್ಯಸನದ ಬಗ್ಗೆ ಜಾಗೃತಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ಜಾಗೃತಿ ಜಾಥಾವು ಯಶಸ್ಸಿಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ವಿ ಹಾಗೂ ಜಿಲ್ಲಾ ಮಾನಸಿಕ ಕಾರ್ಯಕ್ರಮಾಧಿಕಾರಿ ಡಾ ಕೆ ಪಿ ಅಶ್ವತ್ಥ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಶಶಿಧರ್ ಬಸವರಾಜ್ ಜಿ, ಡಾ ಅನಿಲ್ ಕುಮಾರ್ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಧರ್ ಹಾಗೂ ಮನರೋಗತಜ್ಞರಾದ ಡಾ. ಶಶಾಂಕ್, ಮಂಡ್ಯ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಜವರೆಗೌಡ, ಡಾ. ಚಂದ್ರಶೇಖರ್, ಡಾ: ವೇಣುಗೋಪಾಲ್ ರಾಘವೇಂದ್ರ, ಗೋವಿಂದರಾಜು, ಚಿಕ್ಕರಸೇಗೌಡ, ಸುಹೆಲ್ ಸನತ್ ಇದ್ದರು.

Leave a Reply

Your email address will not be published. Required fields are marked *