ಅನುದಾನ ಬಿಡುಗಡೆ ವಿಳಂಬದಿಂದ ಅಭಿವೃದ್ಧಿ ನೆನಗುದಿಗೆ

ತಿ.ನರಸೀಪುರ: ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ  ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ ಎಂದು ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ತಾಲ್ಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ನೂತನ ಬಸವ ಭವನವನ್ನು ಉದ್ಘಾಟಿಸಿ ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿದ ಅವರು,  ಅನುದಾನ ಮಂಜೂರಾದ ಕೂಡಲೇ ಬಾಕಿ ಉಳಿದಿರುವ ಚಟ್ನಹಳ್ಳಿಪಾಳ್ಯ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.

ರಾಜ್ಯ ಸರ್ಕಾರದ ಆಡಳಿತಾತ್ಮಕ ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ತಡೆ ಹಿಡಿದ್ದರಿಂದ ಕಳೆದೊಂದು ವರ್ಷದಿಂದ ಹಲವಾರು ಅಭಿವೃದ್ಧಿ ಕೆಲಸ ನೆನಗುದಿಗೆ ಬಿದ್ದಿವೆ. ಹಾಗಾಗಿ ಚಟ್ನಹಳ್ಳಿ ಪಾಳ್ಯದ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ  ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಶಾಸಕರಾಗಿದ್ದರಿಂದ ಗ್ರಾಮದಲ್ಲಿ ಬಸವ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 10 ಲಕ್ಷ ರೂಗಳ ಅನುದಾನ ನೀಡಿದ್ದರು. ಜೊತೆಗೆ ಕೆರೆಯ ಜೀರ್ಣೋದ್ಧಾರ ಅನುದಾನ ಮಂಜೂರು ಮಾಡಿ, ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಗೂ ಯೋಜನೆ ರೂಪಿಸಿದ್ದರು. ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟು ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಬಾಕಿ ಉಳಿದಿರುವ ಕಾಮಗಾರಿಗಳು ಸೇರಿದಂತೆ ಅಭಿವೃದ್ಧಿಗೊಳ್ಳಬೇಕಿರುವ ರಸ್ತೆಗಳನ್ನು ಕೂಡ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ವೀರಶೈವ ಮಹಾಸಭಾದ ಕೋಶಾಧ್ಯಕ್ಷ ವರುಣ ಮಹೇಶ್, ಕಾಂಗ್ರೆಸ್ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಪಾಳ್ಯ ಸುರೇಶ್,  ಹಿರಿಯ ಮುಖಂಡರಾದ ಪಿಜಿ ಹುಂಡಿ ಮಹದೇವಪ್ಪ, ಕೀಳನಪುರ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್(ಮುದ್ದೇಗೌಡ), ತಾ.ಪಂ ಮಾಜಿ ಸದಸ್ಯ ಗುರುಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್, ಗ್ರಾ.ಪಂ ಅಧ್ಯಕ್ಷೆ ಸಕ್ಕುಬಾಯಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಡಿ.ಮಾಯಪ್ಪ ಸೇರಿದಂತೆ ಬಸವ ಬಳಗ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *