ಮಡಿಕೇರಿ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಮ್ಮ 64 ನೇ ವರ್ಷದ ಹುಟ್ಟುಹಬ್ಬವನ್ನು ಕುಶಾಲನಗರ ಸಮೀಪ ಕೂಡಿಗೆ ಬಳಿಯಿರುವ ಶ್ರೀ ಶಕ್ತಿ ವೃದ್ದಾಶ್ರಮದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮತ್ತು ಆಶ್ರಮದಲ್ಲಿ ಆಶ್ರಯ ಪಡೆದಿರುವ ವೃದ್ದರೊಂದಿಗೆ ಆಚರಿಸಿಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು.
ಈ ವೇಳೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು, ನಾನು ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಉದಾಹರಣೆಗಳಿಲ್ಲ. ಹಿರಿಯರ ಪ್ರೀತಿ ಮತ್ತು ಆಶೀರ್ವಾದ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲ, ಅವರುಗಳ ಪ್ರೀತಿ ನನಗೆ ದೊಡ್ಡ ಉಡುಗೊರೆ. ನಮ್ಮ ಪಕ್ಷದ ಕಾರ್ಯಕರ್ತರು ಇಂದು ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಿ ನನ್ನನ್ನು ಆಹ್ವಾನಿಸಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದು ನಿಜವಾಗಿಯೂ ನನಗೆ ಸಂತೋಷ ತಂದಿದೆ. ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಲು ನನಗೆ ಶಕ್ತಿ ತುಂಬಿದಂತಾಗಿದೆ ಎಂದರು. ಜನುಮ ದಿನ ಆಚರಣೆಯ ನಂತರ ಕುಶಾಲನಗರದ ಕಲಾ ಭವನಕ್ಕೆ ಆಗಮಿಸಿ ಕಲಾವಿದರಿಗೆ ಮತ್ತು ದೇವಾಲಯದ ಸ್ವಚ್ಛತಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಜಿ.ಪಂ. ಮಾಜಿ ಸದಸ್ಯೆ ಮಂಜುಳಾ, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚರಣ್, ಪ.ಪಂ. ಸದಸ್ಯ ಅಮೃತ್ ರಾಜ್, ಪ್ರಮುಖರಾದ ಗಣಿಪ್ರಸಾದ್, ನಾರಾಯಣ್, ಪ್ರವೀಣ್ ಸೇರಿದಂತೆ ಹಲವರು ಇದ್ದರು.