ಮೈಸೂರಿನಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನ


ಮೈಸೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಂತಿನಗರದ ನಿವಾಸಿ ಅಯಾಜ್ ಖಾನ್, ರಾಜೀವ್ ನಗರದ ತೌಸಿಫ್ ಬೇಗ್, ಶೋಹೆಬ್ ಪಾಷ, ಶಾಂತಿನಗರದ ತೌಸಿಪ್ ಪಾಷ ಬಂಧಿತರು.
ನಗರದ ನಜರ್‌ಬಾದ್, ನರಸಿಂಹರಾಜ, ಕೃಷ್ಣರಾಜ, ಮಂಡಿ ಠಾಣೆ, ಕುವೆಂಪುನಗರ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನಗಳು ಮೇಲಿಂದ ಮೇಲೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಮೈಸೂರು ನಗರದ ಡಿ.ಸಿ.ಪಿ ಗೀತಪ್ರಸನ್ನ ರವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ.ಯ ಎ.ಸಿ.ಪಿ, ಸಿ.ಕೆ.ಅಶ್ವತ್ಥನಾರಾಯಣ ರವರ ನೇತೃತ್ವದಲ್ಲಿ ಸಿ.ಸಿ.ಬಿ. ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಜಗದೀಶ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿ ಸರಗಳ್ಳರಿಗಾಗಿ ಹುಡುಕಾಟ ಆರಂಭಿಸಲಾಗಿತ್ತು.
ಈ ನಡುವೆ ಜು.26ರಂದು ನಗರದ ರಾಜೀವನಗರದ ಶಿವಣ್ಣ ವೃತ್ತದ ಬಳಿ ನಾಲ್ವರು ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿರುವ ಬಗ್ಗೆ ಭಾತ್ಮಿದಾರರು ಮಾಹಿತಿ ನೀಡಿದ್ದರು. ಅದರಂತೆ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ನಜರ್‌ಬಾದ್, ನರಸಿಂಹರಾಜ, ಕೃಷ್ಣರಾಜ, ಮಂಡಿ ಠಾಣೆ, ಕುವೆಂಪುನಗರ ಹಾಗೂ ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದರಂತೆ ಒಟ್ಟು ಆರು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಈ ಸಂಬಂಧ ಆರೋಪಿಗಳ ವಶದಲ್ಲಿದ್ದ ಒಂದು ಮಹೇಂದ್ರ ಸೆಂಚೂರಿಯಾ ದ್ವಿಚಕ್ರ ವಾಹನ ಸೇರಿದಂತೆ ಎರಡು ದ್ವಿಚಕ್ರ ವಾಹನ ಹಾಗೂ 5.80ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಮೈಸೂರು ನಗರದಲ್ಲಿ ಈ ಹಿಂದೆ ನಡೆದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *