ಮೈಸೂರು: ಕೊರೊನಾ ಆತಂಕದಲ್ಲಿ ಕಾಲ ಕಳೆಯುವ ವೇಳೆಯಲ್ಲಿ ಕೇರಳದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ. ಹೀಗಾಗಿ ಕೇರಳ ಕರ್ನಾಟಕ ಗಡಿಭಾಗದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಕೇರಳದಿಂದ ರಾಜ್ಯಕ್ಕೆ ಆಗಮಿಸುವವರ ತಪಾಸಣೆ ನಡೆಸಲಾಗುತ್ತಿದೆ.
ಮೈಸೂರು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿಭಾಗವಾದ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಈಗಾಗಲೇ ಹದ್ದಿನ ಕಣ್ಣು ನೆಟ್ಟಿದ್ದು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಕೇರಳದಿಂದ ಬರುವ ವಾಹನಗಳನ್ನು ಪರಿಶೀಲಿಸಿ ತಪಾಸಣೆ ನಡೆಸಿ ಪ್ರಯಾಣಿಕರ RTPCR ನೆಗೆಟಿವ್ ಪರೀಕ್ಷಾ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ಬಸ್ ಸಂಚಾರಕ್ಕೆ ಅವಕಾಶ ಮಾಡಿ ಕೊಡದ ಕಾರಣದಿಂದ ವಾಹನಗಳಲ್ಲಿ ತೆರಳುವ ಪ್ರಯಾಣಿಕರನ್ನಷ್ಟೆ ತಪಾಸಣೆ ಮಾಡಲಾಗುತ್ತಿದ್ದು, ಎರಡು ಬಾರಿಯ ಲಸಿಕೆಯನ್ನು ಪಡೆದವರಿಗೆ ಹಾಗೂ ಎರಡು ವರ್ಷ ಒಳಪಟ್ಟ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಸದ್ಯ ಪ್ರವಾಸಿಗರನ್ನು ಹೊರತು ಪಡಿಸಿ ತುರ್ತು ಇರುವವರು ಮಾತ್ರ ಜಿಲ್ಲೆಯೊಳಗೆ ಬರುತ್ತಿದ್ದಾರೆ. ಉಳಿದಂತೆ ದಿನನಿತ್ಯ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ಗೂಡ್ಸ್ ಗಾಡಿಗಳು ಸಂಚರಿಸುತ್ತಿದ್ದು, ಎಲ್ಲ ವಾಹನಗಳ ಚಾಲಕರನ್ನು ತಪಾಸಣೆ ಮಾಡಿ ಕೊರೊನಾ ನೆಗೆಟಿವ್ ವರದಿಯ ದಾಖಲಾತಿ ಇದ್ದರೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಅನಗತ್ಯವಾಗಿ ಗಡಿಯಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕೇರಳದಲ್ಲಿ ಝೀಕಾ ಮಾತ್ರವಲ್ಲದೆ ಕೊರೊನಾ ಸೋಂಕು ಈ ಹಿಂದೆ ತಗ್ಗಿತ್ತಾದರೂ ಇದೀಗ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಬಹಳ ಎಚ್ಚರಿಕೆ ವಹಿಸಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಅವರು ಮುತುವರ್ಜಿ ವಹಿಸಿದ್ದು, ಕೋವಿಡ್ 19 ಕಾರ್ಯಪಡೆಯ ಸದಸ್ಯರಾದ ಉಮೇಶ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೌಮ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಝೀಕಾ ದತ್ತ ತೀವ್ರ ನಿಗಾವಹಿಸಿದ್ದಾರೆ.