ಹಿಮಚ್ಛಾದಿತ ಪರ್ವತ ಏರುವುದು, ಈಜು, ಕುದುರೆ ಸವಾರಿ ಹೀಗೆ ಹಲವು ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೊಡಗಿನ ಹುಡುಗಿ ಟಿ.ಎನ್.ಭವಾನಿ ಇತ್ತೀಚೆಗೆ ಉತ್ತರಕಾಂಡ್ ಹಾಗೂ ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವುದರೊಂದಿಗೆ ದಕ್ಷಿಣಭಾರತವನ್ನು ಪ್ರತಿನಿಧಿಸಿದ ಮೊದಲ ಯುವತಿ ಎಂಬ ದಾಖಲೆ ಬರೆದಿದ್ದಾರೆ.
2020ರ ಫೆಬ್ರವರಿ ತಿಂಗಳಲ್ಲಿ ಉತ್ತರಾಖಂಡ್ನ ನಾರ್ಡಿಕ್ನಲ್ಲಿ ನಡೆದ ರಾಷ್ಟ್ರೀಯ ಸ್ಕೀಯಿಂಗ್ ಚಾಂಪಿಯನ್ ಶಿಪ್ ನ 10 ಮತ್ತು 15 ಕಿ.ಮೀ ಕ್ರಾಸ್ ಕಂಟ್ರಿಯಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸಿದ ಯುವತಿ ಎಂಬ ಪ್ರಶಂಸೆಗೆ ಪಾತ್ರವಾದರು.

ಆ ನಂತರ ಛಲಬಿಡದೆ ಮುನ್ನಡೆದ ಭವಾನಿ ಮಾರ್ಚ್ ತಿಂಗಳಲ್ಲಿ ಕಾಶ್ಮೀರದ ಗುಲ್ಮಾರ್ಗ್ನಲ್ಲಿ ನಡೆದ ನ್ಯಾಷನಲ್ ಕೇಲೋ ಇಂಡಿಯಾ ಮೀಟರ್ ಗೇಮ್ಸ್ನಲ್ಲಿ ಜೆಐಎಂ ಅಂಡ್ ಡಬ್ಲ್ಯೂಎಸ್ ಇನ್ಸೊಟ್ನ 10ಕಿ.ಮೀ. ಮತ್ತು 5ಕಿ.ಮೀ. ನಾರ್ಡಿಕ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಸ್ಕೀಯಿಂಗ್ ನಲ್ಲಿ ಪದಕ ಪಡೆದ ಮೊದಲ ದಕ್ಷಿಣ ಭಾರತದ ಯುವತಿ ಎಂಬ ದಾಖಲೆ ಬರೆದಿದ್ದಾರೆ.
ಇದಾದ ಬಳಿಕವೂ ಕಾಶ್ಮೀರದ ಗುಲ್ಮಾರ್ನಲ್ಲಿ ನಡೆದ ನ್ಯಾಷನಲ್ ಬಾಯತ್ಲನ್ ಚಾಂಪಿಯನ್ ಶಿಪ್ ನ 10ಕಿ.ಮೀ. ಸ್ಕೀಯಿಂಗ್ ಮತ್ತು ಶೂಟಿಂಗ್ ನಲ್ಲಿ ಸ್ಪರ್ಧಿಸಿ ಕರ್ನಾಟಕದ ಪತಾಕೆಯನ್ನು ಹಾರಿಸಿದ್ದಾರೆ.
ಸಾಮಾನ್ಯವಾಗಿ ಉತ್ತರಭಾರತದ ಹಿಮಚ್ಛಾದಿತ ಪ್ರದೇಶದಲ್ಲಿ ನಡೆಯುವ ಸ್ಕೀಯಿಂಗ್ ನ ವಿವಿಧ ಸ್ಪರ್ಧೆಗಳನ್ನು ದಕ್ಷಿಣ ಭಾರತದ ಸ್ಪರ್ಧಿಗಳು ಭಾಗವಹಿಸುವುದು ತೀರಾ ಅಪರೂಪವಾಗಿದ್ದು, ಈ ಪೈಕಿ ಭವಾನಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹಾಗೆನೋಡಿದರೆ ಭವಾನಿ ಅವರು ಈಗಾಗಲೇ ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬಂದಿದ್ದು, ನ್ಯೂಜಿಲ್ಯಾಂಡ್ನ ಜ್ವಾಲಾಮುಖಿ ಪರ್ವತವಾಗಿರುವ ಮೌಂಟ್ ರೂಪೇವ್ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತರಾಷ್ಟ್ರೀಯ ಸ್ಕೀಯಿಂಗ್ ಬೋಧಕರ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಇನ್ನಷ್ಟು ಹಾದಿ ಸುಗಮವಾಯಿತು.

ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರಿನ ಸೆಂಟ್ ಅ್ಯಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ.
ಪ್ರೌಢಶಾಲೆಯಿಂದಲೇ ಎನ್ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಿ ತರಬೆÉೀತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.
ಇನ್ನು ಜೋದ್ಫುರ್ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋಟ್ರ್ಸ್(ಎಬಿವಿಐಎಂಎಎಸ್)ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ (ಹೆಚ್ಎಂಐ)ನಲ್ಲಿ ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
2018ರಲ್ಲಿ ಯೂರೋಪ್ ದೇಶಗಳ ಪೈಕಿ ಎತ್ತರದ ಒಂದನೇ ಪರ್ವತ ಹಾಗೂ ರಷ್ಯಾದ ಅತಿ ಎತ್ತರದ ಹಿಮಚ್ಚಾದಿತ ಪರ್ವತ ಎಲ್ಬ್ರಸ್ನ್ನು ನಿರಂತರವಾಗಿ ಸುಮಾರು 8 ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿ ಬಂದಿದ್ದಾರೆ. ಪರ್ವತಾರೋಹಣ ಬಳಿಕ ಸ್ಕೀಯಿಂಗ್ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ತರಬೇತಿಯನ್ನು ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ಪಡೆದಿದಲ್ಲದೆ, ಹೆಚ್ಚಿನ ತರಬೇತಿಯನ್ನು 2019ರಲ್ಲಿ ನ್ಯೂಜಿಲ್ಯಾಂಡ್ನ ಮೌಂಟ್ ರೂಪೇವ್ನಲ್ಲಿ ಪಡೆದು ಬಂದಿರುವುದು ಗಮನಾರ್ಹವಾಗಿದೆ.