ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ ಈ ವಿಷಯವನ್ನು ಹೊರ ಹಾಕಿದ್ದಾರೆ.
ಕಾರ್ಯಕ್ರಮದ ಬಳಿಕ ಊಟೋಪಚಾರ ಮುಗಿಸಿ ರಾಜಭವನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. ತಮ್ಮ ಭಾಷಣದ ಆರಂಭದಿಂದಲೇ ತಮ್ಮ ಮತ್ತು ಪಕ್ಷದ ಒಡನಾಟವನ್ನು ಸ್ಮರಿಸುತ್ತಾ ಕಣ್ಣೀರಾದ ಅವರು ಮಾತು ಮುಂದುವರೆಸಿದರು.
ಅಂದಿನ ಪ್ರಧಾನಿ ವಾಜಪೇಯಿ ಅವರು ತಮ್ಮನ್ನು ಕೇಂದ್ರ ಸಚಿವ ಸಂಪುಟಕ್ಕೆ ಆಹ್ವಾನ ನೀಡಿದ್ದರಾದರೂ ನಾನು ಹೋಗಲಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವುದಾಗಿ ಹೇಳಿದ್ದೆ. ಅದರಂತೆ ಹಗಲು ರಾತ್ರಿ ಎನ್ನದೆ ಪಕ್ಷಕ್ಕೆ ದುಡಿದು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದೆ. ಅದರ ಬಗ್ಗೆ ನನಗೆ ತೃಪ್ತಿಯಿದೆ ಎಂದರು.
ನಾನು ತೀರ್ಮಾನ ಮಾಡಿದ್ದೇನೆ. ಎಲ್ಲರ ಅಪ್ಪಣೆ ಪಡೆದು ಊಟ ಮುಗಿಸಿ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ನಾನು ದುಃಖದಿಂದ ಅಲ್ಲ ಸಂತೋಷದಿಂದ ಎಂದು ಹೇಳುವ ಮೂಲಕ ಕಣ್ಣೀರಾದರು.
ಎಪ್ಪತೈದು ವರ್ಷ ತುಂಬಿದ ನಾಯಕರಿಗೆ ಅಧಿಕಾರ ನೀಡಬಾರದು ಎಂಬ ಪಕ್ಷದ ನಿಲುವು ಇದ್ದರೂ ಅದನ್ನು ಮೀರಿ ನನ್ನ ಮೇಲೆ ನಂಬಿಕೆಯಿಟ್ಟು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಭಾವುಕರಾದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ನಾನು ರಾಜ್ಯದ ಆಡಳಿತ ವಹಿಸಿ ಕೊಂಡಾಗಿನಿಂದ ಇಲ್ಲಿವರೆಗೆ ಎಲ್ಲ ಸಂದರ್ಭದಲ್ಲಿಯೂ ನಾನು ಅಗ್ನಿ ಪರೀಕ್ಷೆಯನ್ನು ಎದುರಿಸಿದ್ದೇನೆ. ನಾನು ಅಧಿಕಾರ ವಹಿಸಿಕೊಂಡಾಗ ರಾಜ್ಯದಲ್ಲಿ ಪ್ರವಾಹ ಎದುರಾಯಿತು. ನಾನು ಏಕಾಂಗಿಯಾಗಿ ಎಲ್ಲವನ್ನು ನಿಭಾಯಿಸಿದೆ. ನಂತರ ಕೊರೊನಾದಿಂದಾಗಿ ತೆರಿಗೆ ಸಂಗ್ರಹವಾಗಲಿಲ್ಲ. ಆದರೂ ಮಂತ್ರಿಮಂಡಲದ ಸದಸ್ಯರು, ಶಾಸಕರು, ಅಧಿಕಾರಿಗಳ ಸಹಕಾರದಿಂದ ಎಲ್ಲವನ್ನು ನಿಭಾಯಿಸಿದ್ದೇನೆ ಎಂದು ಹೇಳಿದರು. ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದರು.
ರಾಜಕೀಯ ಪ್ರವೇಶದ ಬಗ್ಗೆ ಮೆಲುಕು ಹಾಕಿದ ಅವರು ಶಿಕಾರಿ ಪುರದಲ್ಲಿ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅವರು ನಂತರ ಪುರಸಭೆ ಸದಸ್ಯರಾಗಿ ಬಳಿಕ ಅಧ್ಯಕ್ಷರಾದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಹಲ್ಲೆ ಮಾಡಿದವರು ಸತ್ತೇ ಹೋದ ಎಂದು ಹೊರಟು ಹೋದರು. ಆದರೆ ಬದುಕಿದ ಅವರು ಹೆಂಡತಿ ಮಕ್ಕಳ ಎದುರು ನಾನು ಬದುಕಿ ಇರುವ ತನಕ ರಾಜಕೀಯ ಸೇವೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಮೊದಲಿಗೆ ಬಿಜೆಪಿ ಕೇವಲ ಎರಡು ಸ್ಥಾನ ಮಾತ್ರ ಪಡೆದು ವಿಧಾನಸೌಧ ಪ್ರವೇಶ ಮಾಡಿದೆವು. ಈ ವೇಳೆ ಜತೆಗಿದ್ದ ವಸಂತ ಬಂಗೇರ ಅವರು ಪಕ್ಷವನ್ನು ಬಿಟ್ಟು ಹೋಗಿದ್ದರಿಂದ ನಾನು ಒಬ್ಬನೇ ಹೋರಾಡಬೇಕಾಯಿತು. ಅಲ್ಲಿಂದ ಇಲ್ಲಿವರೆಗೆ ಪಕ್ಷಕ್ಕಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾ ಬಂದಿದ್ದು ಅದರ ಫಲವಾಗಿ ಇವತ್ತು ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ನಾನು ದಲಿತರ, ರೈತರ, ಬಡವರ ಪರ ಹೋರಾಟ ಮಾಡುತ್ತಾ ಬಂದಿದ್ದು, ಜನ ಸೇರಿಸುವುದೇ ಕಷ್ಟವಾಗಿದ್ದ ಕಾಲದಲ್ಲಿ ಸೈಕಲ್ ನಲ್ಲಿಯೇ ಓಡಾಡಿ ಜನರನ್ನು ಸಂಘಟಿಸಿದ್ದು ಶಿವಮೊಗ್ಗದಲ್ಲಿ 60 ಸಾವಿರ ರೈತರನ್ನು ಸೇರಿಸಿ ಮಾಡಿದ ಸಮಾವೇಶನ್ನು ನೋಡಿದ ಕೇಂದ್ರದ ನಾಯಕ ರಾಜನಾಥ್ ಸಿಂಗ್ ಅವರು ಅಚ್ಚರಿ ಪಟ್ಟಿದ್ದರು ಎಂದು ಹೇಳುವ ಮೂಲಕ ಅಂದಿನ ಆ ಕ್ಷಣವನ್ನು ಸ್ಮರಿಸಿದರು.