ಹೋಂಡಾ ಆ್ಯಕ್ಟಿವಾಕ್ಕೆ ಗುದ್ದಿದ ಬುಲೆಟ್ ಸವಾರ : ಸ್ಥಳದಲ್ಲೇ ವೃದ್ಧ ಸಾವು;


ಮೈಸೂರು,ಸೆ.7:- ಅತಿವೇಗದಿಂದ ಬಂದ ಬುಲೆಟ್ ಬೈಕ್ ಸವಾರನೋರ್ವ ಹೋಂಡಾ ಆ್ಯಕ್ಟಿವಾದಲ್ಲಿ ಹೋಗುತ್ತಿದ್ದ ವೃದ್ಧರೋರ್ವರಿಗೆ ಗುದ್ದಿದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಇಂದು ಬೆಳಿಗ್ಗೆ ಮೈಸೂರು ಅರಸು ರಸ್ತೆಯಲ್ಲಿ ನಡೆದಿದೆ.
ಮೃತರನ್ನು ದೇವರಾಜ ಮೊಹಲ್ಲಾ ನಿವಾಸಿ ರಾಘವೇಂದ್ರ ಗಾರ್ಮೆಂಟ್ಸ್ ಮಾಲೀಕ ಸತ್ಯಪ್ಪ(70)ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆ ದೇವರಾಜ ಮೊಹಲ್ಲಾದಿಂದ ಬೆಳಿಗ್ಗೆ ಬಟ್ಟೆ ಮಳಿಗೆ ತೆರೆಯಲು ಅರಸು ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಅಜಾಗರೂಕತೆ ಮತ್ತು ಅತಿವೇಗದಿಂದ ಬುಲೆಟ್ ಬೈಕ್ ನಲ್ಲಿ ಬಂದ ಸವಾರ ಇವರು ಚಲಿಸುತ್ತಿದ್ದ ಹೋಂಡಾ ಆ್ಯಕ್ಟಿವಾಕ್ಕೆ ಗುದ್ದಿದ್ದು ಅವರು ವಾಹನದಿಂದ ಕೆಳಕ್ಕೆ ಬಿದ್ದಿದ್ದು ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುನಿಯಪ್ಪ, ಸಿಬ್ಬಂದಿಗಳಾದ ಡಾ.ಲಿಂಗರಾಜು, ರವಿ, ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಲೆಟ್ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೆ.ಆರ್.ವೃತ್ತದ ಕಡೆಯಿಂದ ಅತಿವೇಗದಲ್ಲಿ ವಾಹನ ಸವಾರರು ಬರುತ್ತಿದ್ದು, ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *