ಮೈಸೂರು: ಹಿಂದಿನ ಯಾವ ಪ್ರಧಾನಿಯೂ ನರೇಂದ್ರ ಮೋದಿಯವರಂತೆ ಸ್ವ ಇಮೇಜ್ ಬಿಲ್ಡ್ ಮಾಡಿಕೊಳ್ಳಲಿಲ್ಲ. ಅವರ ಪ್ರಚಾರ ಪ್ರಿಯತೆ ಉತ್ತುಂಗಗೇರಿದೆ. ಲಸಿಕೆ ವಿಚಾರದಲ್ಲಿಯೂ ಪ್ರಚಾರ ಪಡೆಯುತ್ತಿರುವುದು ಮಾತ್ರ ನಾಚಿಕೆಗೇಡು ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.
ಮೋದಿ ಆಕರ್ಷಕ ವ್ಯಕ್ತಿ. ಅದ್ಭುತ ಭಾಷಣಕಾರ. ಆದರೆ ಬಿಜೆಪಿಯೇತರ ಸಿಎಂಗಳನ್ನು ಮೋದಿಯವರಷ್ಟು ಕೆಟ್ಟದಾಗಿ ಯಾರೂ ನಡೆಸಿಕೊಂಡಿಲ್ಲ. ಸಿದ್ದರಾಮಯ್ಯಸರ್ಕಾರವನ್ನು ಶೇ. ೧೦ ಕಮಿಷನ್ ಸರ್ಕಾರ ಎಂದು ಟೀಕಿಸಿದರು. ಪಶ್ಚಿಮ ಬಂಗಾ ಚುನಾವಣೆ ವೇಳೆ ಮಮತಾ ಬ್ಯಾನರ್ಜಿ ವ್ಹೀಲ್ ಚೇರಿನಲ್ಲಿದ್ದರೂ ಅಪಹಾಸ್ಯ ಮಾಡಿದರು. ಆದರೆ ಜನರು ತಿರಸ್ಕರಿಸಿದರು. ತಮಿಳುನಾಡಿನಲ್ಲೂ ಸ್ಟಾಲಿನ್ಗೂ ಜನ ಬೆಂಬಲ ದೊರೆಯಿತು ಎಂದರು.

ಕೊರೊನಾ ಲಸಿಕೆ ಸಿಗದೇ ಜನರು ಪರದಾಡುತ್ತಿದ್ದಾರೆ. ಲಸಿಕೆ ಪಡೆಯಲು ಜನರು ಕೇಂದ್ರಗಳ ಮುಂದೆ ಸರತಿ ಸಾಲು. ಅಗತ್ಯ ದಾಸ್ತಾನು ಇಲ್ಲದಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಪ್ರಚಾರ ತೆಗೆದುಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಟೀಕಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಶಿಕ್ಷಣ ಸಂಸ್ಥೆಗಳಿಗೆ ಜಾಹೀರಾತು ಪ್ರಕಟಿಸಲು ಸೂಚಿಸಲಾಗಿದೆ. ಲಸಿಕೆ ಪಡೆದ ಪತ್ರದಲ್ಲೂ ಮೋದಿ ಭಾವಚಿತ್ರವಿದೆ. ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ ಕೊಡುವುದಾಗಿ ಹೇಳಿರುವುದು ಅಸಾಧ್ಯ ಎಂದರು.

ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿದ ಮೇಲೆ ಲಸಿಕೆ ಕಾರ್ಯಕ್ಕೆ ಚುರುಕು ಬಂದಿತು. ಅನಂತರ ರಾಜ್ಯಗಳ ಖರೀದಿಗೂ ಅನುಮತಿ ನೀಡಿದರು. ಆದರೆ ಮುಖ್ಯಮಂತ್ರಿಗಳ ಮನವಿಗೆ ವಿದೇಶಿ ಕಂಪನಿಯವರು ಕ್ಯಾರೇ ಅನ್ನಲಿಲ್ಲ.
ದೇಶದಲ್ಲಿ ೧೩೬.೬೪ ಕೋಟಿ ಜನರಿದ್ದಾರೆ. ಜುಲೈ ೨೧ರವರೆಗೆ ದೇಶದ ಲಸಿಕೆ ಸಾಧನೆ ಶೇ.೫, ೧೮ರಿಂದ ೪೪ ವರ್ಷ ೧೨.೨ ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಇದು ಸಮಾಧಾನ ಸಂಗತಿ. ಅಮೆರಿಕದಲ್ಲಿ ಎರಡು ಡೋಸ್ ಸೇರಿ ಶೇ. ೪೭ ಜನರಿಗೆ ಲಸಿಕೆ ಹಾಕಲಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಭಾರತ ಭೇಟಿ ವೇಳೆ ೨೫ ಮಿಲಿಯನ್ ಡಾಲರ್ ಕೊಡುವುದಾಗಿ ಘೋಷಿಸಿದ್ದಾರೆ. ನಾವು ಶಬರಮತಿ ಆಶ್ರಮ ಶುದ್ಧೀಕರಣಕ್ಕೆ ೧೭೦೦ ಕೋಟಿ ರೂ. ವಿನಿಯೋಗಿಸುತ್ತಿzವೆ ಎಂದರು.
ಕೊರೊನಾ ವೇಳೆ ಮೋದಿಯವರದು ಟ್ರ್ಯಾಕ್ ಟ್ರೇಸ್ ಟ್ರೀಟ್ ಪ್ರಸಿದ್ಧ ಘೋಷಣೆ. ಆದರೆ ಸಕಾಲದಲ್ಲಿ ಆಕ್ಸಿಜನ್ ಲಭ್ಯವಾಗಲಿಲ್ಲ. ಬೆಡ್ ಇಲ್ಲದೇ ಜನರು ತೊಂದರೆ ಅನುಭವಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯದ ಕೊರತೆ ಇರುವಾಗ ಟ್ರೀಟ್ ಮಾಡುವುದೇ ಹೇಗೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ವಕ್ತಾರ ಎಚ್.ಎ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಉಪಾಧ್ಯಕ್ಷ ಡಾ.ರಾಜರಾಂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.