ಮೈಸೂರು: ಕೋವಿಡ್ ಲಾಕ್ಡೌನ್ ವೇಳೆ ಪ್ರಾಣಿ ದತ್ತು ಸ್ವೀಕಾರಕ್ಕೆ ನೀಡಿದ್ದ ಕರೆಗೆ ಓಗೊಟ್ಟು ಪ್ರಾಣಿ ದತ್ತು ಸ್ವೀಕಾರ ಮಾಡಿದವರಿಗೆ ಚಿತ್ರನಟ ದರ್ಶನ್ ಪ್ರಶಂಸನಾ ಪತ್ರ ವಿತರಣೆ ಮಾಡಿದರು.

ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ನಟ ದರ್ಶನ್ ನೀಡಿದ್ದ ಕರೆಗೆ ಓಗೊಟ್ಟು, ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದ ಪ್ರಾಣಿಪ್ರಿಯರಿಗೆ ಖುದ್ದಾಗಿ ದರ್ಶನ್ ಆಗಮಿಸಿ ಪ್ರಶಂಸನಾ ಪತ್ರ ವಿತರಿಸಿದರು.

ಕೊರೊನಾ ಎರಡನೇ ಅಲೆ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಗಳಿಗೆ ನೆರವಾಗಲು ಜೂ.೫ರಂದು ದರ್ಶನ್ ಅವರು ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕರಿಸುವಂತೆ ರಾಜ್ಯದ ಜನತೆ ಹಾಗೂ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಇದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿ ರಾಜ್ಯದಲ್ಲಿರುವ ೯ ಮೃಗಾಲಗಳಿಗೆ ಒಟ್ಟು ೨ ಕೋಟಿ ರೂ. ಅಧಿಕ ದೇಣಿಗೆ ಸಂಗ್ರಹವಾಗಿತ್ತು. ಬಳಿಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರು, ಪ್ರಾಣಿಗಳನ್ನು ದತ್ತು ಪಡೆದ ಆಯ್ದ ಕೆಲವರಿಗೆ ದರ್ಶನ್ ಅವರಿಂದ ಪ್ರಶಂಸನ ಪತ್ರ ವಿತರಿಸಲಾಗುವುದು ಎಂದು ಹೇಳಿದ್ದರು.
ಅದರಂತೆ ಮಂಗಳವಾರ ಮೈಸೂರು ಮೃಗಾಲಯಕ್ಕೆ ಆಗಮಿಸಿದ ದರ್ಶನ್ ಆಯ್ದ ಹತ್ತು ಮಂದಿಗೆ ಪ್ರಶಂಸನ ಪತ್ರ ವಿತರಿಸಿದರು. ಮೃಗಾಲಯ ಪ್ರಾಣಿ ದತ್ತು ಸ್ವೀಕಾರ ಅಭಿಯಾನಕ್ಕೆ ಚಿತ್ರರಂಗದ ನಟ-ನಟಿಯರು ಕೈಜೋಡಿಸಿದ್ದು ವಿಶೇಷ.
ಉದ್ಯಮಿ ಗಂಗರಾಜ್, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೃಗಾಲಯ ಸಿಬ್ಬಂದಿ ರಾಜೇಗೌಡರು, ರಘು ಮತ್ತಿತರರು ಹಾಜರಿದ್ದರು.