ಜಯಮಾರ್ತಂಡ ವೃತ್ತದ ಬಲಭಾಗದಲ್ಲಿರುವ ಟೆಂಟ್ಗಳಲ್ಲಿ ಗಜಪಡೆಯು ಮೋಜಿನಾಟವನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ. ಯಾವುದೇ ಲೋಪವಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ಆನೆಗಳ ಯೋಗಾಕ್ಷೇಮ ಮಾಡಲಾಗುತ್ತಿದೆ.

ಮಾವುತರು, ಕಾವಾಡಿಗಳು, ಡಿಸಿಎಫ್ ಕರಿಕಾಳನ್, ಪಶುವೈದ್ಯ ಡಾ.ರಮೇಶ್, ಸಹಾಯಕ ರಂಗರಾಜು ಸೇರಿ ಹಲವರು ದಿನದ 24 ಗಂಟೆಯೂ ಆನೆಗಳ ಸೇವೆಯಲ್ಲಿ ನಿರತರಾಗಿದ್ದಾರೆ.
ನಿತ್ಯ ಮಜ್ಜನ: ಈ ವರ್ಷದ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿರುವುದರಿಂದ ಗಜಪಡೆ ತಾಲೀಮು ಅರಮನೆ ಆವರಣದಲ್ಲಿಯೇ ನಡೆಯುತ್ತಿದೆ. ನಿತ್ಯ ಬೆಳಿಗ್ಗೆ ಸಂಜೆ ಎರಡು ಬಾರಿ ತಾಲೀಮು ನಡೆಸಲಾಗುತ್ತಿದೆ. ಆನೆಗಳಿಗೆ ಮೂರು ಬಾರಿ ಮಜ್ಜನ ಮಾಡಿಸಲಾಗುತ್ತದೆ.

ಅಂಬಾರಿ ಆನೆ ಅಭಿಮನ್ಯು ಮೊದಲು ಅರಮನೆ ಆವರಣದಲ್ಲಿರುವ ತೊಟ್ಟಿಯಲ್ಲಿ ಸ್ನಾನಕ್ಕೆ ಆಗಮಿಸಿದರೆ, ನಂತರದಲ್ಲಿ ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರ, ವಿಕ್ರಮ, ಕಾವೇರಿ ಆನೆಗಳು ಸಾಲು ಸಾಲಾಗಿ ನೀರಿಗೆ ಮೈಯೊಡ್ಡುತ್ತವೆ.

ಸ್ನಾನದ ವೇಳೆ ಮಾವುತರೊಂದಿಗೆ ಆನೆಗಳ ನೀರಿನಾಟ ಕಾಣುವುದೇ ಅಂದ. ಅಂಗಾತ ಮಲಗಿ ಕಾವಾಡಿ ಮೈ ಉಚ್ಚುಯುವಾಗ ಸಹಕರಿಸುತ್ತವೆ. ಸೊಂಡಿಲಿನಿಂದ ನೀರು ಹಿಡಿದು ಮೈಮೇಲೆ ಎರಚಿಕೊಳ್ಳುತ್ತ ಖುಷಿಗೊಳ್ಳುತ್ತದೆ. ಸ್ನಾನ ಮುಗಿದ ನಂತರ ಗಾಂಭೀರ್ಯದಿಂದ ಟೆಂಟಿನತ್ತ ಹೆಜ್ಜೆ ಹಾಕುತ್ತವೆ.

ಮೂರು ಬಾರಿ ಸ್ನಾನ: ಬೆಳಿಗ್ಗೆ 6 ಗಂಟೆಯಿಂದಲೇ ಮಾವುತರು, ಕಾವಾಡಿಗಳು ಕೆಲಸ ಶುರು ಮಾಡುತ್ತಾರೆ. ಸ್ನಾನ ಮಾಡಿಸಿ ತಾಲೀಮಿಗೆ ಹೊರಡುತ್ತಾರೆ. ಮುಗಿದ ಬಳಿಕ ಮೈ ಮೇಲೆ ನೀರು ಹಾಕುತ್ತಾರೆ. ಮತ್ತೆ ಮಧ್ಯಾಹ್ನ 12 ಗಂಟೆಗೆ ಎರಡನೇ ಬಾರಿ ಸ್ನಾನ ಮಾಡಿಸಲಾಗುತ್ತದೆ. ಸಂಜೆ ತಾಲೀಮಿಗೂ ಮುನ್ನ ಸ್ನಾನ ಮಾಡಿಸಲಾಗುತ್ತದೆ. ನಿತ್ಯ ಮೂರು ಬಾರಿ ಸ್ನಾನ ಮಾಡಿಸಲಾಗುತ್ತದೆ.