ಕನ್ನಡ ದೇಗುಲದ ಹೊನ್ನಕಳಸ ಗದ್ಯಬ್ರಹ್ಮ ದೇಜಗೌ

ಜುಲೈ 6, ಖ್ಯಾತ ಸಾಹಿತಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ದೇಜಗೌ ಅವರ 103 ನೇ ಜನ್ಮದಿನೋತ್ಸವ. ಆ ನಿಮಿತ್ತ ಈ ಲೇಖನ…. ನಿಮ್ಮ ಓದಿಗಾಗಿ….

– ಟಿ. ಸತೀಶ್ ಜವರೇಗೌಡ, ಮಂಡ್ಯ

ಬಡತನ, ಹಸಿವು ಮತ್ತು ಅನಕ್ಷರತೆ ಇರುವ ಕಡೆಯಲ್ಲಿ ಅದಮ್ಯ ಸೃಜನಶೀಲತೆಯ ಸೆಲೆಯೊಂದು ಕುಡಿಯೊಡೆದು, ಅಪ್ರತಿಮವಾದ ಬೃಹತ್ ಸಾಧನೆಯ ಶಿಖರವಾಗಿ ಬೆಳೆದು ನಿಲ್ಲುತ್ತದೆ ಎಂಬುದಕ್ಕೆ ಸಾಕ್ಷಿಗಲ್ಲಾಗಿ ಕಾಣಸಿಗುವುದು ನಾಡೋಜ ಡಾ. ದೇಜಗೌ. ಅರ್ಥಾತ್ ದೇವೇಗೌಡ – ಜವರೇಗೌಡ.

ದೇಜಗೌ ಅಂದರೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಅಸ್ಮಿತೆಯ ಹೆಗ್ಗುರುತು. ಕನ್ನಡದ ಕುಲಾಧಿಪತಿ, ಕನ್ನಡದ ಭೀಷ್ಮ, ಕನ್ನಡದ ಕಟ್ಟಾಳು, ಕನ್ನಡದ ದಿಟ್ಟ ಹೋರಾಟಗಾರ, ಗದ್ಯ ಶಿಲ್ಪಿ, ಗದ್ಯ ಬ್ರಹ್ಮ ಎಂಬೆಲ್ಲ ವಿಶೇಷಣಗಳ ಗೌರವದ ಹೊಂಗರಿಗಳು ದೇಜಗೌ ಅವರ ಸಿರಿಮುಡಿಯ ಅಲಂಕರಿಸಿವೆ. ಇವೆಲ್ಲವೂ ಸುಖಾಸುಮ್ಮನೆ ಒಲಿದು ಬಂದವಲ್ಲ. ಕಠಿಣ ಪರಿಶ್ರಮದಕ್ಕೆ ಒಲಿದ ಬಂದ ‘ಸುಫಲ’ಗಳು. ಕಾಡುವ ಬಡತನದ ಹಾದಿಯುದ್ದಕ್ಕೂ ‘ಹೋರಾಟದ ಬದಕ’ನ್ನು  ‘ಬಾಳು’ತ್ತಲೇ ತಮ್ಮ ಸಾಧನೆಯ ಹೆಜ್ಜೆ ಗುರುತುಗಳನ್ನು ಒಡಮೂಡಿಸಿರುವ ದೇಜಗೌ ಹುಟ್ಟೂರು ಚಕ್ಕರೆ. ಆ ಕಾಲಕ್ಕೆ ಇದೊಂದು ಮೂಲಭೂತ ಸೌಕರ್ಯಗಳನ್ನು ಕಾಣದ ಕುಗ್ರಾಮ. ಅಂದು ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿತ್ತು. ಈಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ. ಇಡೀ ಹಳ್ಳಿಯೇ ಬೇಸಾಯವ ನಂಬಿ ಬದುಕುತ್ತಿದ್ದ ಕಾಲವದು. ಬಡ ಕೃಷಿಕ ಕುಟುಂಬದ ದೇವೇಗೌಡ ಮತ್ತು ಚನ್ನಮ್ಮ ಎಂಬ ಅನಕ್ಷರಸ್ಥ ದಂಪತಿಗಳೇ ದೇಜಗೌ ಹೆತ್ತವರು. 1918 ಜುಲೈ 6 ರಂದು ಜನನ. ಹಟ್ಟಿಯ ತುಂಬ ದಟ್ಟ ದ್ರಾರಿದ್ಯ, ಕಷ್ಟ ಕಾರ್ಪಣ್ಯ, ಕಡು ಸಂಕಟಗಳ ಆರ್ಭಟ. ದನಕರು – ಮೇಕೆಗಳ ಕಾಯುತ್ತಲೇ ಬೆಳೆದ ಇವರೇ, ಮುಂದೆ ‘ಕನ್ನಡ ಪ್ರಜ್ಞೆ’ಯ ಕಣಕಣದಲ್ಲೂ ಮೈದುಂಬಿಕೊಂಡು ‘ದೇಜಗೌ’ ಎಂಬ ತ್ರ್ಯಕ್ಷರ ಕಾವ್ಯನಾಮದ ಮೂಲಕ ತಮ್ಮ ಗುರು ಕುವೆಂಪುರಂತೆಯೇ ಕನ್ನಡ ಸಾರಸ್ವತ ಲೋಕದಲ್ಲಿ ಖ್ಯಾತರಾದದ್ದು ರೋಚಕ ಇತಿಹಾಸ. ಅವರ ಜೀವನ ದರ್ಶನ ಬೆರಗುಗೊಳಿಸುವಂತಹದ್ದು. ಪ್ರಜ್ವಲಮಾನವಾದ ‘ಕನ್ನಡ ದೀವಟಿಗೆ’ಯಾಗಿ ನುಡಿಗುಡಿಯ ಬೆಳಗಿದ ‘ದೇಜಗೌ’ ಎಂಬ ಈ ಬೆಳಕಿನ ಬದುಕು ಅಸಂಖ್ಯಾತ ತಿರುವುಗಳ ಹೋರಾಟದ ಹೆದ್ದಾರಿ.

ಬೇಸಾಯ ನಂಬಿದ ಕುಟುಂಬ. ಕಡು ಸಂಕಟದ ಕಡಲಲ್ಲಿ ಸಾಗುವ ಬಾಳ ನಾವೆ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದ ಕಾರಣ ದೇಜಗೌ ಅವರಿಗೆ ಶಾಲೆ ದೂರದ ಮಾತಾಯಿತು. ಕೃಷಿ ಕಾರ್ಯ ಮಾಡುವಾಗ ಅವರ ತಂದೆಗೆ ಉಂಟಾದ ಶಾಶ್ವತ ಕುರುಡತನವೂ ಇದಕ್ಕೆ ಮತ್ತೊಂದು ಬಲವಾದ ಕಾರಣ ಕೂಡ. ಇದರಿಂದಾಗಿ ಬಾಲಕ ದೇಜಗೌ ತಂದೆಗೆ ಕೃಷಿಯಲ್ಲಿ ನೆರವಾಗುತ್ತ ಆಡುಗಳ ಕಾಯಬೇಕಾಯಿತು. ‘ಶಾಲೆಗೆ ಹೋಗಬೇಕು, ಕಲಿಯಬೇಕು’ ಎಂಬ ಆಸೆ ಎದೆಯಲ್ಲಿ ಸದಾ ಕುಡಿಯೊಡೆಯುತಿತ್ತು. ಕಲಿಯುವ ಆಸಕ್ತಿ ಎದೆಯ ತಬ್ಬಿ ಹಬ್ಬಿದಂತೆ ಬೇಲಿಸಾಲಿನಲ್ಲಿ ಆಡುಗಳ ಮೇಯಲು ಬಿಟ್ಟು ಶಾಲೆಗೆ ಹೋಗಿ ತರಗತಿಯಲ್ಲಿ ಪಾಠ ಕೇಳಲು ಕೂತು ಬಿಡುತ್ತಿದ್ದರು. ಆಡುಗಳು ಯಾರದೋ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾರಣ, ಅವರ ನಿಂದನೆಯಿಂದ ಆಕ್ರೋಶಿತರಾದ ತಂದೆ ದೇವೇಗೌಡರ ಬೆತ್ತದ ರುಚಿ ಬಾಲಕ ದೇಜಗೌ ಅವರಿಗಾಯಿತು. ಇದನ್ನು ಕಂಡು ಮರುಗಿದ ಶಿಕ್ಷಕರಾದ ವೆಂಕಟರಾವ್ ಅಯ್ಯಂಗಾರ್ ಮತ್ತು ಮುಖ್ಯ  ಶಿಕ್ಷಕರಾದ ಎಚ್.ಕೆ. ವೀರಣ್ಣಗೌಡರು ಬಾಲಕ ದೇಜಗೌ ಅವರ ಕಲಿಕಾಸಕ್ತಿಗೆ ಒತ್ತಾಸೆಯಾಗಿ ನಿಂತು ಓದಿಗೆ ನೆರವಾದರು.

ಅವರ ತಂದೆಯ ಮನವೊಲಿಸಿ ಶಾಲೆಗೆ ದಾಖಲಿಸುವಂತೆ ಮಾಡಿದರು. ಇದು ಅವರ ಮುಂದಿನ ಸಾಧನೆಯ ಪಥದ ಪಯಣಕ್ಕೆ ನಾಂದಿಯಾಯಿತು. ಚಕ್ಕರೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಚನ್ನಪಟ್ಟಣದಲ್ಲಿ ಪ್ರೌಢಶಿಕ್ಷಣ ವ್ಯಾಸಂಗ ಮಾಡಿ, ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್ ಓದಿ ಮುಗಿಸಿದರು. ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ ಮತ್ತು ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಕುವೆಂಪು, ಬಿ.ಎಂ.ಶ್ರೀ., ತ‌.ಸು. ಶಾಮರಾಯ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ. ಶ್ರೀ. , ಎ.ಆರ್. ಕೃಷ್ಣಶಾಸ್ತ್ರಿ, ಡಿ.ಎಲ್. ನರಸಿಂಹಾಚಾರ್ ಅವರಂತಹ ಮಹಾಮೇಧಾವಿ ಗುರುಗಳ ಪಾಠ ಕೇಳುತ್ತ, ಅವರ ಗಾಢ ಪ್ರಭಾವಕ್ಕೆ ಒಳಗಾಗಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಿದರು. ಜ್ಞಾನಾಸಕ್ತರಾಗಿ ಕಲಿತ ವಿದ್ಯೆಯಿಂದ ಹೊಸ ಬದುಕಿನತ್ತ ಹೊರಳಿದರು. ಗುರು ಕುವೆಂಪು ಅವರ ದೆಸೆಯಿಂದ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಒಡನಾಟ ಬೆಳೆಯಿತು. ಅಲ್ಲಿನ ವಾತಾವರಣ ದೇಜಗೌ ಮೇಲೆ ಗಾಢವಾದ ಪ್ರಭಾವ ಬೀರಿತು. ಅವರ ವ್ಯಕ್ತಿತ್ವದ ಕವಚವಾಗಿರುವ ಸಾತ್ವಿಕ ಮತ್ತು ನೈತಿಕ ಗುಣ ಬೆಳೆದದ್ದು ಇಲ್ಲಿಂದಲೇ.

ಉನ್ನತ ಶಿಕ್ಷಣ ಗಳಿಸಿದ ಮೇಲೆ ಎಲ್ಲಾ ಹಳ್ಳಿಗರಂತೆಯೇ ಹೆತ್ತವರಾಸೆಯಂತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. 1943 ರಲ್ಲಿ ಬೆಂಗಳೂರಿನ ಸಚಿವಾಲಯದಲ್ಲಿ ದೇಜಗೌ ಗುಮಾಸ್ತರಾಗಿ ಸರ್ಕಾರಿ ನೌಕರಿಗೆ ಸೇರಿದರು. ಸಾಹಿತ್ಯಾಭ್ಯಾಸಿಯಾಗಿದ್ದ ದೇಜಗೌರಿಗೆ ಯಾಕೋ ಈ ಗುಮಾಸ್ತ ನೌಕರಿಯ ರಾಶಿ ಕಡತಗಳ ಒಡನಾಟ ಕಿರಿಕಿರಿಯಾಗಿ, ಏಕತಾನತೆ ಮತ್ತು ಯಾಂತ್ರಿಕತೆ ಅವರ ಜೀವನೋತ್ಸಾಹ ಕುಗ್ಗಿಸಿತು. ಮೂರು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಹೊಸ ಹುದ್ದೆಗಾಗಿ ಮನ ಹಂಬಲಿಸಿತು. ಆಗ ಅವರ ಅದೃಷ್ಟಕ್ಕೆ ಎರಡು ಹುದ್ದೆಗಳ ಅವಕಾಶ ಒದಗಿ ಬಂತು. ಅವೇ ಕನ್ನಡ ಅಧ್ಯಾಪಕ ಮತ್ತು ಸಬ್ ರಿಜಿಸ್ಟ್ರಾರ್ ಹುದ್ದೆಗಳು. ಆಗ ದೇಜಗೌ “ತಾವು ಸಬ್ ರಿಜಿಸ್ಟ್ರಾರ್ ಹುದ್ದೆಗೆ ಹೋದರೆ, ನಂಬಿದ ಮೌಲ್ಯಗಳ ಗಾಳಿಗೆ ತೂರಿ ಅಧಿಕಾರ ಸ್ಥಾನದ ಕಾರಣದಿಂದ ಲಂಚಕೋರನಾಗಬೇಕಾಗುತ್ತದೆ” ಎಂದರಿತು, ಕನ್ನಡ ಸಾಹಿತ್ಯವ ಕಲಿಸುವ ಅಧ್ಯಾಪಕ ಹುದ್ದೆ ಆಯ್ಕೆ ಮಾಡಿಕೊಂಡರು. ಮುಂದೆ  1946ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ದೇಜಗೌ ಅವರ ವೃತ್ತಿ ಬದುಕು ಹೊಸ ಚೈತನ್ಯದಿಂದ ಶುರುವಾಯಿತು. ಅದಾಗಲೇ ಕುವೆಂಪು ಅವರ ಪಾಠ, ಸಾಹಿತ್ಯದ ಓದು, ಭಾಷಣದ ಅಗಾಧ ಪ್ರಭಾವಕ್ಕೆ ಒಳಗಾಗಿದ್ದ ಅವರು, ‘ಭುವನದ ಭಾಗ್ಯ’ವೆಂಬಂತೆ ಮುಂದೆ ಕುವೆಂಪು ಅವರ ಆಹ್ವಾನದ ಮೇರೆಗೆ ಮೈಸೂರಿನ ಮಹಾರಾಜ ಕಾಲೇಜಿಗೆ ವರ್ಗವಾಗಿ ಬಂದರು. ಕುವೆಂಪು ಅವರ ಆಶೀರ್ವಾದದಿಂದ 1955ರಲ್ಲಿ ಉಪ ಪ್ರಾಧ್ಯಾಪಕ ಕೆಲಸದ ಜೊತೆಗೆ, ಪ್ರಕಟಣ ಶಾಖೆಯ ಒಪ್ಪೊತ್ತಿನ ಕಾರ್ಯದರ್ಶಿಯಾಗಿ ಮುಂದುವರಿದರು. ಈ ಪ್ರಕಟಣೆಯ ವಿಭಾಗವೇ ಮುಂದೆ ಕುವೆಂಪು ಅವರಿಂದ ‘ಪ್ರಸಾರಾಂಗ’ ಎಂದು ನಾಮಕರಣಗೊಂಡಿತು.

ಈ ಪ್ರಸಾರಂಗಕ್ಕೆ ಹೊಸ ಕಾಯಕಲ್ಪ ನೀಡಿದ ಕೀರ್ತಿ ದೇಜಗೌ ಅವರಿಗೆ ಸಲ್ಲುತ್ತದೆ. ಅಪಾರ ಪರಿಶ್ರಮದಿಂದ ದುಡಿದ ಅವರು, ಜನೋಪಯುಕ್ತ ಪ್ರಚಾರೋಪನ್ಯಾಸಗಳು ಮತ್ತು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಮುಂದೆ ಕುವೆಂಪು ಅವರ ಕಾಳಜಿಯಿಂದ ಪ್ರಸಾರಾಂಗದ ಖಾಯಂ ಕಾರ್ಯದರ್ಶಿ ಆದಮೇಲೆ, ಅದರ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದರು. ಪ್ರಸಾರಾಂಗದ ಆದಾಯ ಅಪಾರ ಪ್ರಮಾಣದಲ್ಲಿ ಇಮ್ಮಡಿಗೊಂಡಿತು. ಮೈಸೂರು ವಿವಿಯ ಪ್ರತಿಷ್ಠಿತ ‘ಪ್ರಬುದ್ಧ ಕರ್ನಾಟಕ’ದ ಸಂಪಾದಕರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿ, ಅದರ ಚಂದದಾರರ ಸಂಖ್ಯೆ ಹೆಚ್ಚಿಸಿದರು. ಕೇವಲ ಒಂದೇ ವರ್ಷದಲ್ಲಿ ಸಾವಿರ ರೂಗಳ ಬಂಡವಾಳದ ಪತ್ರಿಕೆಗೆ, ಬಂಡವಾಳ ವೃದ್ಧಿಗೊಂಡು ಎರಡು ಲಕ್ಷಗಳ ಇಡುಗಂಟು ದಕ್ಕಿತು.

ಇದು ದೇಜಗೌ ಅವರ ದಕ್ಷತೆಗೆ ಹಿಡಿದ ಕನ್ನಡಿ. ಕಸಾಪದ ಕನ್ನಡ ನಿಘಂಟು ಯೋಜನೆ ಮತ್ತು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಖಾಸಗಿ ಸಿಬ್ಬಂದಿ ಆಗುವ ಪ್ರಭಾವಶಾಲಿ ಹುದ್ದೆಯ ಆಹ್ವಾನ ಬೆಂಗಳೂರಿನ ಕಡೆಯಿಂದ ಬಂದಾಗ, ತಮ್ಮ ಗುರು ಕುವೆಂಪು ಅವರು “ನನ್ನನು ಬಿಟ್ಟು ಹೋಗುವೆಯಾ…?” ಎಂದು ಆರ್ದ್ರತೆಯಿಂದ ಕೇಳಿದಾಗ,  ಭಾವುಕರಾದ ದೇಜಗೌ ಈ ಎರಡೂ ಆಹ್ವಾನಗಳ ವಿನಯಪೂರ್ವಕಾಗಿ ನಿರಾಕರಿಸಿ, ಕೊನೆಗೆ ತಮ್ಮ ಆರಾಧ್ಯ ದೈವ ಕುವೆಂಪು ಅವರ ಜೊತೆಗೆ ಉಳಿಯುತ್ತಾರೆ. ಇದು ಅವರ ಗುರು-ಶಿಷ್ಯ ಪರಂಪರೆಯ ಬಾಂಧವ್ಯಕ್ಕೂ, ದೇಜಗೌ ಕುವೆಂಪು ಅವರೆಡೆಗೆ ಹೊಂದಿದ್ದ ಗೌರವಾಭಿಮಾನದ ಪ್ರೀತಿಗೂ ಸಾಕ್ಷಿ.

ಕುವೆಂಪು ಅವರ ‘ಮಾನಸ ಪುತ್ರ’ರಾಗಿ ಮೈಸೂರನ್ನು ತಮ್ಮ ‘ಕರ್ಮಭೂಮಿ’ಯಾಗಿಸಿಕೊಂಡ ಮೇಲೆ ದೇಜಗೌ ಅವರ ಕ್ರಿಯಾಶೀಲ ಮತ್ತು ರಚನಾತ್ಮಕ ಕಾಯಕ ಬದುಕು ಹೊಸ ಆಯಾಮದತ್ತ ಹೊರಳಿತು. ಮೈಸೂರು ವಿಶ್ವವಿದ್ಯಾನಿಲಯದ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಎಲ್ಲರೂ ನಿಬ್ಬೆರಗಾಗುವಂತೆ ಆ ಹುದ್ದೆಗಳ ಘನತೆಯ ಹೆಚ್ಚಿಸಿದರು. ಮೈಸೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ, ಪುಸ್ತಕ ಪ್ರಕಟಣೆಗಳ ವಿಭಾಗದ ಕಾರ್ಯದರ್ಶಿ, ಪರೀಕ್ಷಾಧಿಕಾರಿ ಮತ್ತು ಪ್ರಿಂಟಿಂಗ್ ಪ್ರೆಸ್ ನ ಕಾರ್ಯನಿರ್ವಾಹಕ ಅಧಿಕಾರಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ, ಸ್ನಾತಕೋತ್ತರ ವಸತಿ ನಿಲಯದ ಮೇಲ್ವಿಚಾರಕ, ಕಲಾ ವಿಭಾಗದ ಡೀನ್, ವಿವಿಯ ಸಿಂಡಿಕೇಟ್ ಸದಸ್ಯ, ‘ಜ್ಞಾನಗಂಗೋತ್ರಿ’ಯ ಸಂಪಾದಕ ಸಮಿತಿ ಅಧ್ಯಕ್ಷ, ‘ಕನ್ನಡ ನಿಘಂಟು’ ವಿನ ಉಪಾಧ್ಯಕ್ಷ, ‘ಕನ್ನಡ ವಿಶ್ವಕೋಶ’ದ ಪ್ರಧಾನ ಸಂಪಾದಕ, ‘ಪ್ರಬುದ್ಧ ಕರ್ನಾಟಕ’ದ ಸಂಪಾದಕ, ಬಳಿಕ ಪ್ರಧಾನ ಸಂಪಾದಕ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಎರಡು ಅವಧಿಗೆ ಕುಲಪತಿ…ಹೀಗೆ ಹಲವು ಮಹತ್ವದ ಹುದ್ದೆಗಳನ್ನು ಅರ್ಹತಾದಾಯಕವಾಗಿ ಪಡೆದೆ ನಿರ್ಹಿಸಿದರು. ಕುವೆಂಪು ಅವರು ‘ಭೌದ್ಧಿಕ’ವಾಗಿ ಕಟ್ಟಿದ ಮೈಸೂರು ವಿವಿಯನ್ನು ದೇಜಗೌ ‘ಭೌದ್ಧಿಕ ಮತ್ತು ಭೌತಿಕ’ವಾಗಿ ಸುಭದ್ರವಾಗಿ ಸರ್ವ ವಿಧದಲ್ಲಿಯೂ ಕಟ್ಟಿ ಬೆಳೆಸಿದರು. ಶತಮಾನದ ಪರಂಪರೆಯ ಮೈಸೂರು ವಿಶ್ವವಿದ್ಯಾನಿಲಯದ ಇಂದಿನ ಶ್ರೇಷ್ಠತೆ ಮತ್ತು ಔನ್ನತ್ಯಕ್ಕೆ ಅವರ ಚಿಂತನೆ, ದೂರದೃಷ್ಟಿ, ಪರಿಶ್ರಮವೇ ಕಾರಣವೆಂಬುದು ನಿತ್ಯ ಸತ್ಯ.

ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಮೇಲೆ ಆಡಳಿತ ಯಂತ್ರವ ರಚನಾತ್ಮಕಗೊಳಿಸುವ ಭಾಗವಾಗಿ, 1956 ರಲ್ಲಿ ದೇಜಗೌ ಅವರನ್ನು ವಿವಿಯ ಪರೀಕ್ಷಾಧಿಕಾರಿಯಾಗಿ ನೇಮಿಸಿದರು.  ತುಂಬಾ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡಿ,  ಪರೀಕ್ಷಾ ಸುಧಾರಣೆಗಳ ಜೊತೆಗೆ ಪರೀಕ್ಷಾ ಗೌಪ್ಯತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದರು. ಇದರಿಂದಾಗಿ ಪರೀಕ್ಷೆಗಳಲ್ಲಿ ‘ಪಾರದರ್ಶಕತೆ’ ಸಾಧ್ಯವಾಯಿತು.  ಮುದ್ರಣ ಮತ್ತು ಸ್ಟೇಷನರಿ ವಿಭಾಗವನ್ನೂ ತೆರೆದರು. ಈ ಮಧ್ಯೆ ನಡೆದ ಕೆಲವು ಪೂರ್ವಾಗ್ರಹ ಪೀಡಿತ ಮನಸ್ಸುಗಳಿಂದ ಅಹಿತಕರ  ಘಟನೆಗಳು ನಡೆದ ಕಾರಣ, 1960ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾಗಿ ತೆರಳಿದರು. ನಡುವೆ ಕುವೆಂಪು ಅವರ ಒತ್ತಾಸೆಯ ಫಲವಾಗಿ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಯಿತು. ಆಗ, ಕುವೆಂಪು ಕಾರಣದಿಂದಾಗಿ ಮತ್ತೆ ಮೈಸೂರು ವಿವಿಗೆ ಮರಳಿ ಕನ್ನಡ ಪ್ರಾಧ್ಯಾಪಕರಾಗಿ ಮುಂದುವರಿದರು. ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿ ಕನ್ನಡ ಸ್ನಾತಕೋತ್ತರ ಕೇಂದ್ರ ತೆರೆದು ಕಾರ್ಯಾರಂಭ ಮಾಡಿದರು. ಮುಂದೆ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿಸಿ, ಇದರ ಮೊದಲ ನಿರ್ದೇಶಕರಾಗಿ ಭದ್ರವಾದ ಅಡಿಪಾಯ ಹಾಕಿದರು. ಪ್ರಾಚೀನ ಗ್ರಂಥಗಳ ಶಾಸ್ತ್ರೀಯ ಪ್ರಕಟಣೆ ಮಾಡಿದರು. ಬೋಧನೆ, ಸಂಶೋಧನೆ, ಸಂಪಾದನೆ ಒಳಗೊಂಡ ರಚನಾತ್ಮಕ ನೆಲೆಯಲ್ಲಿ ಸಾಗುವಂತೆ ಕನ್ನಡ ಅಧ್ಯಯನ ಸಂಸ್ಥೆಯನ್ನು ರೂಪಿಸಿದರು. ಇದಕ್ಕೆ ಸಹಕಾರ ನೀಡಿದವರು ಅಂದಿನ ಕುಲಪತಿ ಡಾ.ಕೆ.ಎಂ. ಶ್ರೀಮಾಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದೇಜಗೌ ಕೈಗೊಂಡ ‘ನೂತನ ಮಾದರಿ’ಯೇ, ಮುಂದೆ ಸ್ಥಾಪನೆಯಾದ ನಮ್ಮ ನಾಡಿನ ಎಲ್ಲ ವಿವಿಗಳಿಗೂ ಆದರ್ಶ ‘ಮಾದರಿ’ಯಾಗಿ ಉಳಿದಿದೆ.

ವಿವಿಯಲ್ಲಿ ಬಲವಾಗಿ ಕನ್ನಡ ವಿಭಾಗ ಕಟ್ಟುವ ಭಾಗವಾಗಿ ದೇಜಗೌ ಅವರು ಪ್ರಾಚ್ಯ ಸಂಶೋಧನಾ ವಿಭಾಗದಲ್ಲಿನ ಸಂಪಾದನಾ ವಿಭಾಗ ಮತ್ತು ಕನ್ನಡ ಹಸ್ತಪ್ರತಿಗಳನ್ನು ಕನ್ನಡ ಅಧ್ಯಯನ ಸಂಸ್ಥೆಗೆ ತಂದರು. ಸಂಸ್ಥೆಯಲ್ಲಿ ಪಠ್ಯಪುಸ್ತಕ ನಿರ್ಮಾಣ ಮತ್ತು ಭಾಷಾಂತರ ವಿಭಾಗ, ಭಾಷಾಶಾಸ್ತ್ರ ಮತ್ತು ಜಾನಪದ ವಿಭಾಗಗಳನ್ನು ತೆರೆದರು. ತಮಗೆ ಬಂದ ಪ್ರಶಸ್ತಿಯ ಹಣದಿಂದ ‌’ಜಾನಪದ ವಸ್ತು ಸಂಗ್ರಹಾಲಯ’ ಸ್ಥಾಪಿಸಿ, ತಮ್ಮ ಶ್ರೀಮತಿಯವರ ಅಪರೂಪದ ಒಡವೆಗಳು ಮತ್ತು ಮನೆಯಲ್ಲಿನ ಅಮೂಲ್ಯವಾದ ವಸ್ತುಗಳನ್ನು ಈ ಸಂಗ್ರಹಾಲಯಕ್ಕೆ ನೀಡಿದ ದೇಜಗೌ ಉದಾರ ಹೃದಯವಂತಿಕೆಗೆ ಎಣೆಯಿಲ್ಲ. ಇದಕ್ಕೆ ಡಾ. ಜೀಶಂಪರಂತಹ ಜಾನಪದ ವಿದ್ವಾಂಸರು ಹೆಗಲೆಣಿಯಾಗಿ ನಿಂತರು. ಇದು ದಕ್ಷಿಣ ಏಷ್ಯಾದಲ್ಲೇ ‘ಅತ್ಯುತ್ತಮ ಜಾನಪದ ವಸ್ತು ಸಂಗ್ರಹಾಲಯ’ ಎಂಬ ಖ್ಯಾತಿ ಪಡೆದಿದೆ1969 ನವೆಂಬರ್ 1 ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಗಮನಾರ್ಹ. ಜ್ಞಾನದ ಶರಧಿ ದೇಜಗೌ ಕುಲಪತಿಯಾಗಿ ನೇಮಕಗೊಂಡರು. ಕುಗ್ರಾಮದ ಹಳ್ಳಿಯ ಬಡರೈತನ ಮಗ ಕುಲಪತಿಯಂತಹ ಉನ್ನತ ಹುದ್ದೆ ಅಲಂಕರಿಸಿದ್ದು ಆ ಕಾಲಕ್ಕೆ ಸಂಚಲನ ಸೃಷ್ಟಿಸುವಂತದ್ದು.  ಇಲ್ಲಿಂದ ವಿವಿಯ ‘ಶುಕ್ರದೆಸೆ’ ಆರಂಭವಾಯಿತು. ದೇಜಗೌ ಅವರ ದೂರದೃಷ್ಟಿಯ ಆಡಳಿತದ ಫಲವಾಗಿ ಆಡಳಿತಾಂಗ, ಬೋಧನಾಂಗ, ಪ್ರಸಾರಾಂಗ ಸಮಗ್ರವಾಗಿ ಅಭಿವೃದ್ಧಿ ಸಾಧಿಸಿದವು.

ಕುವೆಂಪು ಅವರು ಕಲಪತಿಯಾಗಿದ್ದ ಅವಧಿಯಲ್ಲಿ ಪರಿವರ್ತನೆಯ ಪಥದತ್ತ ಹೊರಳಿದ್ದ ಮೈಸೂರು ವಿವಿ, ದೇಜಗೌ ಕುಲಪತಿಯಾದ ಅವಧಿಯಲ್ಲಿ ತನ್ನ ಅಭಿವೃದ್ಧಿಯ ವೇಗ ಹೆಚ್ಚಿಸಿಕೊಂಡು ಸಂಪನ್ನತೆಯಿಂದ ಬೆಳೆದು ದೇಶದ ಶ್ರೇಷ್ಠ ವಿಶ್ವವಿದ್ಯಾನಿಲಯವಾಯಿತು. ದೇಜಗೌ ಅವರಲ್ಲಿ ಅಖಂಡ ಕನ್ನಡ ಪ್ರೇಮಿ, ದಕ್ಷ ಆಡಳಿತಗಾರ, ಶಿಕ್ಷಣ ತಜ್ಞ, ಪಾಂಡಿತ್ಯಪೂರ್ಣ ಘನ ವಿದ್ವಾಂಸ, ಸೃಜನಶೀಲ ಸಾಹಿತಿ ಹುದುಗಿದ್ದ ಪರಿಣಾಮವಾಗಿ ವಿವಿಯ   ಪ್ರಗತಿ ಔನ್ನತ್ಯವ ಸಾಧಿಸಿತು. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಕ್ರಿಯಾಶೀಲತೆ ತಂದರು. ಇವರ ಆಡಳಿತದ ಅವಧಿಯಲ್ಲಿ ವಿವಿಯ ಆಡಳಿತವೆಲ್ಲವೂ ‘ಕನ್ನಡಮಯ’ ವಾಯಿತು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಬಹುದಿನಗಳ ಸಮಸ್ಯೆ ಬಗೆಹರಿಸಿದರು. ತೋಟಗಾರಿಕಾ ಇಲಾಖೆಯ ಕಾರ್ಯಕ್ಷಮತೆಯ ಚುರುಕುಗೊಳಿಸಿ ಗಂಗೋತ್ರಿಯ ‘ಹಸಿರೀಕರಣ’ಗೊಳಿಸಿದರು. ಲಲಿತಾ ಕಲಾ ಕಾಲೇಜು ತೆರೆದರು. ಬೃಹತ್ ಮುದ್ರಾಣಾಲಯ ಆರಂಭಿಸಿದರು. ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ, ಮಂಗಳೂರು  ಮತ್ತು ಶಿವಮೊಗ್ಗದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿದರು. ಇವು ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿವಿ, ಮಂಗಳೂರು ವಿವಿ ಮತ್ತು ಕುವೆಂಪು ವಿವಿಯಾಗಿ ಬೆಳೆದದ್ದು ಇತಿಹಾಸ. ಇದಕ್ಕೆ ‘ದೂರಗಾಮಿ’ ಮನದ ದೇಜಗೌ ಹಾಕಿದ ಅಡಿಗಲ್ಲೇ ಕಾರಣವಾಯಿತು.

ಮಾನಸ ಗಂಗೋತ್ರಿಯಲ್ಲಿ ಮಾನವಿಕ ವಿಭಾಗದ ಕಟ್ಟಡಗಳ ಪೂರ್ಣಗೊಳಿಸಿದರು. ಸರ್ಕಾರದ ಸುಪರ್ದಿಯಲ್ಲಿ ಜೀವ ಕಳೆದುಕೊಂಡಿದ್ದ ‘ವಿಶ್ವಕೋಶ’ದ ಬೃಹತ್ ಯೋಜನೆಯನ್ನು ಮೈಸೂರು ವಿವಿಯ ಕನ್ನಡ ವಿಭಾಗಕ್ಕೆ ತಂದು ಮರು ಜೀವ ಕೊಟ್ಟರು. ನಾಡಿನ ವಿದ್ವಾಂಸರ ಸಂಯೋಜನೆಯಲ್ಲಿ ವಿಶ್ವಕೋಶದ ಸಂಪುಟಗಳು ನಿಗದಿತ ಕಾಲಾವಧಿಯಲ್ಲಿ ಸಿದ್ಧಗೊಂಡವು. ದೇಜಗೌ ಅವರ ಈ ಕನಸನ್ನು ಸಾಕಾರಗೊಳಿಸಲು ನೆರವಾದವರು ಅಂದಿನ ವಿದ್ಯಾಮಂತ್ರಿ ಮಂಡ್ಯದ ಕೆ.ವಿ. ಶಂಕರಗೌಡರು. ಕುವೆಂಪುರಿಂದ ‘ನಿತ್ಯ ಸಚಿವ’ ಎಂದು ಬಿರುದಾಂಕಿತ ಗೌರವಕ್ಕೆ ಪಾತ್ರರಾಗಿದ್ದ ಶಂಕರಗೌಡರ ಸಮಾಜಮುಖಿ ಮತ್ತು ಜನಪರ ಮನೋಭಾವ ದೇಜಗೌ ಅವರು ವಿವಿಯ ಬಲಗೊಳಿಸಲು ಮತ್ತು ಕನ್ನಡದ ಕೆಲಸ ಮಾಡಲು ಪೂರಕವಾಗಿ ನಿಂತಿತು. ಆರು ವರ್ಷಗಳ ಕಾಲ ಎರಡು ಅವಧಿಗೆ ಕುಲಪತಿ ಆಗಿದ್ದ ದೇಜಗೌ, ತಮ್ಮ ಆಡಳಿತದವಧಿಯಲ್ಲಿ ವಿವಿಯ ವಿವಿಧ 24ವಿಷಯ ವಿಭಾಗಗಳನ್ನು 48 ವಿಭಾಗಗಳಾಗಿ ದ್ವಿಗುಣಗೊಳಿಸಿದರೆಂದರೆ, ಅವರ ಆಡಳಿತ ವೈಖರಿಯ ಕ್ಷಿಪ್ರ ವೇಗ ಯಾವ ರೀತಿ ಕ್ರಿಯಾತ್ಮಕವಾಗಿತ್ತು ಎಂಬುದನ್ನು ಗಮನಿಸಬಹುದು.

“ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಹೊಸ ಹೊಸ ವಿಷಯಗಳ ಕಲಿಯಬೇಕು ಮತ್ತು ವಿದೇಶದಲ್ಲಿ ಕಲಿಯುವುದನ್ನು ತಾವಿರುವೆಡೆಯೇ ಕಲಿಯಬೇಕು” ಎಂದು ಪ್ರತಿಪಾದಿಸುತ್ತಿದ್ದ ದೇಜಗೌ ಅವರ ಮುಂಗಾಣ್ಕೆಯ ಆಲೋಚನಾ ಕ್ರಮ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗೆ ಬುನಾದಿ ಹಾಕಿತು.  ಜಾನಪದ, ಭಾಷಾಂತರ, ಜೈನ ಸಿದ್ಧಾಂತ, ಭಾರತೀಯ ಸಾಹಿತ್ಯ, ಪ್ರಾಕೃತ, ರಷ್ಯನ್ ಮತ್ತು ಜರ್ಮನ್ ಡಿಪ್ಲೊಮಾ ಕೋರ್ಸ್ ಗಳ ಪ್ರಾರಂಭವಾದದ್ದು ದೇಜಗೌ ಅವರ ‘ವಿಶ್ವಾತ್ಮಕ ನೋಟ’ದ ಫಲಶೃತಿ. ಉನ್ನತ ಶಿಕ್ಷಣದ ಸಾರ್ವತ್ರೀಕರಣದ ಧ್ಯೇಯದೊಂದಿಗೆ ಅಂಚೆ ಮತ್ತು ತೆರಪಿನ ಶಿಕ್ಷಣಕ್ಕೆ ನೂತನ ‘ಕಾಯಕಲ್ಪ’ ಅಂದು ನೀಡಿದ ಪರಿಣಾಮವಾಗಿ, ಇಂದು ಕರ್ನಾಟಕ ರಾಜ್ಯದ ಏಕೈಕ ಬೃಹತ್ ದೂರ ಶಿಕ್ಷಣ ನೀಡುವ ಮುಕ್ತ ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಆವರಣದಲ್ಲಿ ತಲೆಯೆತ್ತಿ ಕಾರ್ಯನಿರ್ವಹಣೆ ಮಾಡುತ್ತಿದೆ. ಉನ್ನತ ಶಿಕ್ಷಣಕಾಂಕ್ಷಿ ಬಡವರ, ಮಹಿಳೆಯರ ಹಾಗೂ ಉದ್ಯೋಗಸ್ಥರ ಪಾಲಿಗೆ ‘ವರದಾನ’ವಾಗಿದೆ. ದೈಹಿಕ ಶಿಕ್ಷಣ ವಿದ್ಯಾಲಯ, ಇದರಲ್ಲಿಯೇ ಸ್ನಾತಕೋತ್ತರ ತರಗತಿಗಳ ಪ್ರಾರಂಭ,  ಏಷ್ಯಾದಲ್ಲಿಯೇ ಪ್ರಪ್ರಥಮ ಬಾರಿಗೆ ಪತ್ರಿಕೋದ್ಯಮ ವಿಭಾಗ ಆರಂಭಿಸಿದ ಕೀರ್ತಿ ದೇಜಗೌ ಅವರಿಗೆ ಸಲ್ಲುತ್ತದೆ. ಗೃಹ ವಿಜ್ಞಾನ, ಗ್ರಂಥಾಲಯ ವಿಜ್ಞಾನ,  ಕಾನೂನು ಶಾಸ್ತ್ರ, ಅಪರಾಧ ಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಆಯುರ್ವೇದ, ಕೈಗಾರಿಕಾ ರಸಾಯನ ಶಾಸ್ತ್ರ, ಕೃಷಿ ಅರ್ಥಶಾಸ್ತ್ರ ಮೊದಲಾದ ವಿಶಿಷ್ಟ ವಿಭಾಗಗಳನ್ನು ತೆರೆದು ಜ್ಞಾನ ದಾಹಿಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯ ವ್ಯಾಪ್ತಿ ಮತ್ತು ಕೀರ್ತಿಯನ್ನು ಜಾಗತಿಕ ನೆಲೆಯಲ್ಲಿ ಎತ್ತಿಹಿಡಿದ ದೇಜಗೌ ಓರ್ವ ಅನಭವಿ ‘ಶೈಕ್ಷಣಿಕ ತಜ್ಞ’ ಎಂಬುದಕ್ಕೆ ಪುರಾವೆಗಳಾಗಿವೆ.

ಆಡಳಿತಾತ್ಮಕವಾಗಿ ದೇಜಗೌ ಹೇಗೆ ಸಮರ್ಥರೊ ಅದಕ್ಕೂ ಮಿಗಿಲಾಗಿ ಪರಮ ಶ್ರೇಷ್ಠ ಪ್ರಧ್ಯಾಕರೂ ಕೂಡ. ಆಳವಾದ ವಿಷಯ ಜ್ಞಾನ, ಪ್ರಬುದ್ಧ ಭಾಷಾ ಪ್ರೌಢಿಮೆ, ಆಕರ್ಷಕ ಅಭಿವ್ಯಕ್ತಿ ಕಲೆಯ ಅವರು ‘ವಿದ್ಯಾರ್ಥಿ ಪ್ರಿಯ’ ಕನ್ನಡ ಮೇಷ್ಟ್ರು. ಬೋಧನಾ ಕಲೆ ಅವರಿಗೆ ಕರಗತವಾಗಿತ್ತು. ತಮ್ಮ ಪಾಂಡಿತ್ಯಪೂರ್ಣ ಬೋಧನೆಯಿಂದ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು. ಜೊತೆಗೆ ವಿದ್ಯಾರ್ಥಿಗಳಲ್ಲಿ  ಸಂಶೋಧನೆಯ ಬಗ್ಗೆ ಆಸಕ್ತಿ ಹಾಗೂ ಒಲವು ಬೆಳಸುವ ಮೂಲಕ ತಾವೊಬ್ಬ ಉತ್ತಮ ಸಂಶೋಧನಾ ಮಾರ್ಗದರ್ಶಕರಾಗಿಯೂ ‘ಸೈ’ ಅನಿಸಿಕೊಂಡವರು. ಡಾ. ಹೆಚ್.ಜೆ. ಲಕ್ಕಪ್ಪಗೌಡ, ಡಾ. ಜೀ.ಶಂ. ಪರಮಶಿವಯ್ಯ, ಡಾ. ಬಿ.ನಂ. ಚಂದ್ರಯ್ಯ, ಡಾ. ಡಿ.ಕೆ. ರಾಜೇಂದ್ರ, ಡಾ. ತೀ.ನಂ. ಶಂಕರನಾರಾಯಣ ಮೊದಲಾದ ಶಿಷ್ಯರಿಗೆ ಸಂಶೋಧನಾ ಮಾರ್ಗದರ್ಶಕರಾಗಿ, ಅವರು ನಾಡಿನ ಮಹತ್ವಪೂರ್ಣ ಸಾಹಿತಿ ಮತ್ತು ಅವರ ಕೃತಿಗಳ ಮೇಲೆ ಪ್ರಬಂಧ ರಚಿಸಿ ಪಿಎಚ್.ಡಿ. ಪದವಿ‌ ಪಡೆಯಲು ನೆರವಾಗಿದ್ದಾರೆ. ಇವರೆಲ್ಲರೂ ಮುಂದೆ ‘ಸಾಹಿತ್ಯ ಲೋಕದ ದಿಗ್ಗಜ’ರಾಗಿ ಬೆಳೆದರು ಎಂಬುದು ದಾಖಲಾರ್ಹ. ಅಧ್ಯಯನ, ಬೋಧನೆ ಮತ್ತು ಸಂಶೋಧನೆ ದೇಜಗೌ ಅವರ ವೃತ್ತಿ ಜೀವನದ ನಿತ್ಯ ಮಂತ್ರಗಳಾಗಿದ್ದವು. ಆದರ್ಶ ಪ್ರಾಧ್ಯಾಪಕರಾಗಿ  ಇತರರಿಗೂ ಮಾದರಿಯಾಗಿ ‘ಗುರುತನವ’ ಕಾಯ್ದುಕೊಂಡರು.

ಕನ್ನಡ ಸಾರಸ್ವತ ಲೋಕದ ದೈತ್ಯ ಪ್ರತಿಭಾಶಾಲಿ ‘ಘನವಿದ್ವಾಂಸ’ರೆಂಬ ಖ್ಯಾತಿ  ದೇಜಗೌ ಅವರಿಗೆ ಬಹುಬೇಗನೆ ಒಲಿದು ಬಂದಿತ್ತು. ನಾಡಿನ ವಿದ್ವತ್ ಪರಂಪರೆಯ ಸರಸ್ವತಿ ಪುತ್ರರಲ್ಲಿ ಅಗ್ರಗಣ್ಯರಾಗಿರುವ ದೇಜಗೌ ವಿದ್ಯಾರ್ಥಿ ಜೀವನದಿಂದಲೇ ವಿಸ್ತಾರವಾದ  ಓದಿನ ತೆಕ್ಕೆಗೆ ಬಿದ್ದವರು. ಆಂತರಿಕ‌ ಮತ್ತು ಬಾಹ್ಯ ಪ್ರೇರಣೆಗಳು‌ ಬರವಣಿಗೆಯ ಕಾಯಕಕ್ಕೆ ಶ್ರದ್ಧೆಯಿಂದ ತೊಡಗಿಸಿದ್ದವು. ದೇಜಗೌ ಅವರ ಪತ್ನಿ‌ ಶ್ರೀಮತಿ‌ ಸಾವಿತ್ರಮ್ಮ ಹಾಗೂ ಗುರು ಕುವೆಂಪು ಅವರ ಕರುಣೆ ಮತ್ತು ಪ್ರೇರಣೆ ಸಹ ಇಂಬು ನೀಡಿತು. ಹಾಗೆಯೇ, ಅವರು ದಿನವು ತಪ್ಪದೇ ಡೈರಿ ಬರೆಯುತ್ತಿದ್ದ ಹವ್ಯಾಸವೂ ಇದ್ದ ಕಾರಣ, ಇದು ಸಾಹಿತ್ಯದ ಬೇಸಾಯಕ್ಕೆ ಮೂಲವಾಗಿ ಒದಗಿಬಂದಿತು. ಇದರಿಂದಾಗಿ ಬರವಣಿಗೆ ತಪಸ್ಸಾಗಿ ಪರಿಣಮಿಸಿತು. ಎದೆಯ ಒಳಗುದಿಯಾಗಿ ಉಕ್ಕಿತು. ವಿಚಾರ ವಿನಿಮಯದ ಸಾಧನವಾಯಿತು. ಶಕ್ತ ಅಭಿವ್ಯಕ್ತಿಯ ಮಾಧ್ಯಮವಾಯಿತು. ಧ್ಯಾನಸ್ಥರಾಗಿ ಬರೆಯಲು ಕೂತ ಪರಿಣಾಮ ನಲವತ್ತು ಸಾವಿರ ಪುಟಗಳಷ್ಟು ಸಾಹಿತ್ಯ ಸೃಜಿಸಲ್ಪಟ್ಟು ‘ಗದ್ಯ ಶಿಲ್ಪಿ’ ಮತ್ತು ‘ಗದ್ಯ ಬ್ರಹ್ಮ’ ಎಂಬ‌ ಗೌರವ ಅರಸಿ ಬಂದು, ಎಂದಿಗೂ ಬಿಡದಂತೆ ದೇಜಗೌ ಹೆಸರಿಗಂಟಿಕೊಂಡಿತು. ಇವರ ವಿಚಾರಶೀಲ ಸೊಗಸಾದ ಆಕರ್ಷಕ ಬರಹ ಶೈಲಿ ಅನನ್ಯ. ನಾಡಿನ ಅಪಾರ ಸಹೃದಯರ ಮನಸೂರೆ ಮಾಡಿದೆ.

ಸಹಜವಾಗಿಯೇ ಓದಿಸಿಕೊಳ್ಳುವ ಗುಣ ಅನುಭವ ಜನ್ಯವಾದ ಇವರ ಬರವಣಿಗೆಯಲ್ಲಿ ಹಾಸುಹೊಕ್ಕಾಗಿದೆ. ಕವನ, ವಚನ – ಸೂಕ್ತಿ – ಚುಟುಕುಗಳು, ಕತೆ, ಕಾದಂಬರಿ, ನಾಟಕ, ಅನುವಾದ, ಆತ್ಮಕತೆ, ಪ್ರವಾಸ, ಜಾನಪದ, ಜೀವನ ಚರಿತ್ರೆ, ವ್ಯಕ್ತಿ ಚಿತ್ರ, ಮಕ್ಕಳ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಶಿಕ್ಷಣ ಸಾಹಿತ್ಯ, ಪ್ರಬಂಧ – ಹರಟೆ, ಮುನ್ನುಡಿ, ಸಂಪಾದನೆ ಸೇರಿದಂತೆ ಸಾಹಿತ್ಯದ ಬಹುಮುಖಿ ಪ್ರಕಾರದಲ್ಲಿಯೂ ಕೃಷಿ ಮಾಡಿರುವ ಅಗ್ಗಳಿಕೆ ದೇಜಗೌ ಅವರದ್ದು.  ಮುನ್ನೂರಕ್ಕೂ ಅಧಿಕ ಕೃತಿ ರತ್ನಗಳು ಅವರ ಲೇಖನಿಯಿಂದ ‘ಹದ’ಗೊಂಡು ‘ಪದ’ವಾಗರಳಿ ಕನ್ನಡ ಸರಸ್ವತಿಯ ಕಿರೀಟದಲ್ಲಿ ವಜ್ರ ಸದೃಶವಾಗಿ ಅನುಗಾಲವೂ ಮಿನುಗಿವೆ.

ಹಾಗೆ ನೋಡಿದರೆ, ದೇಜಗೌ ಸಾಹಿತ್ಯ ಕೃಷಿಗೆ ತೊಡಗಿದ್ದೆ ತುಂಬ ತಡವಾಗಿ ಎಂಬುದು ಆಸಕ್ತಿದಾಯಕ ಮತ್ತು ಕುತೂಹಲಕಾರಿ. ಅವರು ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಗೆ ತೊಡಗಿದವರಲ್ಲ. ಬದಲಿಗೆ ಸಚಿವಾಲಯದ ಗುಮಾಸ್ತ ಹುದ್ದೆ ತೊರೆದು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರಾಗಿ ಬಂದ ಮೇಲೆ ಬರವಣಿಗೆಯತ್ತ ವಾಲಿದರು. “ಕನ್ನಡ ಅಧ್ಯಾಪಕನಾದವನು ಅಷ್ಟಿಷ್ಟಾದರೂ ಬರೆಯದಿದ್ದರೆ, ಅವನು ಆ ಜಾಗದಲ್ಲಿರುವ ಅರ್ಹತೆ ಕಳೆದುಕೊಳ್ಳತ್ತಾನೆಂಬ ನಂಬಿಕೆ (ಮೂಢನಂಬಿಕೆ ಇರಬಹುದೆ?)-ಯೊಂದೇ ‘ವಿತ್ ನೊರಿಗ್ರೆಟ್ಸ್’ ಎಂಬ ಗ್ರಂಥವನ್ನು ಭಾಷಾಂತರಿಸಲು ಕಾರಣವಾಯಿತು” ಎಂದು ತಮ್ಮ ಆತ್ಮಕತೆ ‘ಹೋರಾಟದ ಹಾದಿಯಲ್ಲಿ’ ದೇಜಗೌ ದಾಖಲಿಸಿದ್ದಾರೆ. ಹಿಂದೆಲ್ಲ ಸಾಮಾನ್ಯವಾಗಿ ಹೊಸ ಬರಹಗಾರ ಸಾಹಿತ್ಯ ಕ್ಷೇತ್ರದಲ್ಲಿ ತೊಡಗುತ್ತಿದದ್ದು ಕಾವ್ಯ ಅಥವಾ ಕತೆಯ ಪ್ರಕಾರದ ಮೂಲಕ. ಆದರೆ, ದೇಜಗೌ ‘ಅನುವಾದ’ದ ಮೂಲಕ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ವಿಶೇಷ.

ಅನ್ಯ ಭಾಷೆಯ ಮಹತ್ವದ ಮತ್ತು ಸತ್ವಯುತವಾದ ಕೃತಿಗಳು ಕನ್ನಡ ಭಾಷೆಗೆ ಅನುವಾದವಾಗಬೇಕೆಂದು ಸದಾ ಪ್ರತಿಪಾದಿಸುತ್ತಿದ್ದ ಅವರು, ಜವಹರಲಾಲ್ ನೆಹರುರವರ ಕಿರಿಯ ತಂಗಿ ಕೃಷ್ಣಾ ಹತೀಸಿಂಗರ ‘ವಿತ್ ನೊರಿಗ್ರೆಟ್ಸ್’ ಕೃತಿಯನ್ನು 1944ರಲ್ಲಿ ‘ನೆನಪು ಕಹಿಯಲ್ಲ’ ಎಂಬ ಹೆಸರಿನಲ್ಲಿ ಕನ್ನಡಿಸಿದರು. ಇದೇ ಅವರ ಮೊದಲ ಕೃತಿ. ಆಗ ದೇಜಗೌ ಅವರಿಗೆ 31ರ ತಾರುಣ್ಯ. ಈ ಕೃತಿ ಅವರ ಮಿತ್ರರ ಮತ್ತು ಜನರ ಮೆಚ್ಚುಗೆಗೂ ಪ್ರೋತ್ಸಾಹಕ್ಕೂ ಒಳಾಗಾಯಿತು. ಮತ್ತಷ್ಟು ಅನ್ಯ ಭಾಷೆಯ ಬೃಹತ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಲು   ಉತ್ತೇಜನ ದೊರಕಿತು. ಜೊತೆಗೆ, ಬರಹದ ಚೈತನ್ಯ ಇಮ್ಮಡಿಗೊಂಡಿತು.

ದೇಜಗೌ ಅವರ ಚಿಕ್ಕ ಮಾವ ಟಿ. ಮಾದಯ್ಯಗೌಡರು ಮೈಸೂರು ರಾಜ್ಯದ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ಒತ್ತಾಸೆಯಿಂದಾಗಿ ದೇಜಗೌ ‘ಪುಸ್ತಕ ಪ್ರಪಂಚ’ದ ಸಂಪಾದಕ ಮಂಡಲಿ ಸೇರುವಂತಾಯಿತು. ಈ ಮಾಸಿಕಕ್ಕೆ ಲೇಖನಗಳ ಕೊರತೆ ಉಂಟಾದಾಗ ಅವರೇ ಬರೆಯಬೇಕಿತ್ತು. ಪ್ರಧಾನ ಸಂಪಾದಕರಾಗಿದ್ದ ಜಿ. ಹನುಮಂತರಾಯರ ಪ್ರೇರಣೆ ಪೂರಕವಾಗಿ ನಿಂತಿತು. ಆಕಾಶವಾಣಿಯ ಉಪನಿರ್ದೇಶಕರೂ ಗೆಳೆಯರೂ ಆಗಿದ್ದ ಡಿ. ರಾಜಗೋಪಾಲರು ಆಗಾಗ ಭಾಷಣ ಮಾಡಲು ಅವಕಾಶ ಕೊಡುತ್ತಿದ್ದ ಕಾರಣ, ದೇಜಗೌ ಅವರ ಬರವಣಿಗೆಯ ಕಾರ್ಯ ಚುರುಕುಗೊಂಡಿತು.

ಆಕಾಶವಾಣಿ ವತಿಯಿಂದ ಕೊಡುತ್ತಿದ್ದ ಆಗಿನ ಕಾಲದ ಸೂಕ್ತ ಸಂಭಾನೆ ಸಂಸಾರ ನಿರ್ವಹಣೆಗೂ ಸಹಕಾರಿಯಾಗುತ್ತಿದ್ದರಿಂದ ಬರವಣಿಗೆಯ ಬಲವಾಗಿ ಅಪ್ಪಿದರು. ಇದು ಮತ್ತೂ ಉಸಿರಾದದ್ದು ಕುವೆಂಪು ಅವರು ದೇಜಗೌರನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಮೈಸೂರಿನ ಮಹಾರಾಜ ಕಾಲೇಜಿಗೆ ಕರೆತಂದ ಮೇಲೆ. ಕುವೆಂಪು ತಮ್ಮ ಕನ್ನಡ  ಕೈಂಕರ್ಯಕ್ಕೆ ದೇಜಗೌ ಅವರನ್ನು ಜೊತೆಗಿರಿಸಿಕೊಂಡ ಬಳಿಕ, ಅವರಲ್ಲಿ ‘ಸಾಹಿತಿ’ ಆಗಬೇಕೆಂಬ ಹಂಬಲ ಮೊಳೆಯತೊಡಗುತ್ತದೆ. ಕುವೆಂಪು ಅವರ ಕೃತಿಗಳ‌ ಕರುಡು ತಿದ್ದುತ್ತಾ ತಿದ್ದುತ್ತಾ ಶುದ್ಧ ‌ಕನ್ನಡವನ್ನು ತಮ್ಮದಾಗಿಸಿಕೊಂಡರು.

ಮುಂದೆ ವಿಶ್ವವಿದ್ಯಾನಿಲಯದ ಹಲವು ಮಹತ್ತರ ಹುದ್ದೆಗಳ ಅಪಾರ ಜವಾಬ್ದಾರಿ ಮತ್ತು ಸಂಸಾರದ ಜಂಜಾಟದ ನಡುವೆಯೂ ಸಾಹಿತ್ಯ ಕೃಷಿ ಆಮೆಗತಿಯಲ್ಲಿ ಸಾಗಿದರೂ ಸ್ಥಗಿತಗೊಳ್ಳುವುದಿಲ್ಲ. ‘ಬರವಣಿಗೆಯ ಚಟ’ ದೇಜಗೌ ಅವರಿಗೆ ಅಂಟಿಕೊಂಡಿದ್ದರಿಂದ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಅವರ ಲೇಖನಿ ಕ್ತಿಯಾಶೀಲವಾಗುತ್ತಿತ್ತು. ಮಧ್ಯರಾತ್ರಿವರೆಗೆ, ಕೆಲವೊಮ್ಮೆ ಮುಂಜಾನೆಯ ವರೆಗೂ ಬರೆಯಲು ಪಟ್ಟಾಗಿ ಕೂರುತ್ತಿದ್ದರು. ಸಾಹಿತ್ಯ ಸೃಷ್ಟಿಯ ಸೃಜನಶೀಲ ಕಾರ್ಯ ಸರಾಗವಾಗತೊಡಗಿತು. ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಪ್ರಕಟಣೆ ಶುರುವಾದ ಮೇಲೆ ಬರವಣಿಗೆಯ ವೇಗ ಉತ್ಕರ್ಷಕ್ಕೇರಿತು.  ಮೊದಲಿನಿಂದಲೂ ದೇಜಗೌ ಅವರಿಗೆ ಅನುವಾದ ಸಾಹಿತ್ಯದತ್ತ ವಿಶೇಷ ಒಲವಿತ್ತು. “ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಸಾಹಿತ್ಯದ ಮಟ್ಟವನ್ನು ಎತ್ತರಿಸುವ ನಿಟ್ಟಿನಿಂದ ಭಾಷಾಂತರ ಭಾವಾನುವಾದ ಅತ್ಯಗತ್ಯವೆಂಬುದು” ದೇಜಗೌ ಅವರ ಸ್ಪಷ್ಟ ಅಭಿಮತವಾಗಿತ್ತು. ಜೊತೆಗೆ, ” ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳೆಲ್ಲ ಕನ್ನಡಕ್ಕೆ ಬಂದಾಗ ಕನ್ನಡ ಸಾಹಿತ್ಯ ಇಂಗ್ಲಿಷ್ ಸಾಹಿತ್ಯವನ್ನು ಮೀರಿಸಬಲ್ಲದು” ಎಂಬ ದೃಢವಾದ ನಂಬಿಕೆ ಅವರಲಿದ್ದ ಕಾರಣ, ಜೇನ್ ಆಸ್ಟಿನ್ ಅವರ ‘ಫ್ರೈಡ್ ಅಂಡ್ ಪ್ರಿಜುಡಿಸ್’ ಕಾದಂಬರಿಯನ್ನು ‘ಹಮ್ಮು ಬಿಮ್ಮು’  ಹೆಸರಿನಲ್ಲಿ ಭಾಷಾಂತರಿಸಿದರು. ಈ ಕೃತಿಗೆ ಈ ಹೆಸರನ್ನು ಸೂಚಿಸಿದವರು‌ ಕುವೆಂಪು ಎಂಬುದು ವಿಶೇಷ.

ದೇಜಗೌ ಅವರ ಸಾಹಿತ್ಯದ ಕೃಷಿಯ ಮೇಲೆ ಆರಾಧ್ಯ ದೈವ ಕುವೆಂಪು ಪ್ರೇರಣೆ ಮತ್ತು ಪ್ರಭಾವ ಅಪಾರ. ಅವರ ಸಲಹೆಯ ಮೇರೆಗೆ ರಷ್ಯಾದ ಮಹತ್ವದ ಲೇಖಕ ಟಾಲ್ ಸ್ಟಾಯ್ ರ ಎಲ್ಲಾ ಕೃತಿಗಳನ್ನು ಕನ್ನಡಿಸಬೇಕೆಂಬ ಮಹತ್ತಕಾಂಕ್ಷೆಯಿಂದ ಮುನ್ನುಗಿದರು. ‘ಪುನರುತ್ಥಾನ’, ‘ಯುದ್ಧ ಮತ್ತು ಶಾಂತಿ’, ‘ಅನ್ನಾಕರೆನಿನಾ’ ಭಾಷಾಂತರಗೊಂಡು ಕನ್ನಡದ ಸಾಹಿತ್ಯ ಸಾಗರವ ಮತ್ತಷ್ಟು ಮೈದುಂಬಿಸಿದವು. ದೇಜಗೌ ಅನುವಾದಗಳಲ್ಲಿ ‘ಯುದ್ಧ ಮತ್ತು‌ಶಾಂತಿ’ ಕುವೆಂಪು ಅವರಿಗೆ ಪ್ರಿಯವಾದ ಕೃತಿ. ಒಟ್ಟಾರೆ, ಕನ್ನಡದಲ್ಲಿ ಅನುವಾದ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ದೇಜಗೌ ಕೊಡುಗೆ ಗಮನಾರ್ಹವಾಗಿದೆ.

ದೇಜಗೌ ಅವರ ಅಚ್ಚು ಮೆಚ್ಚಿನ ಸಾಹಿತ್ಯ ಪ್ರಕಾರವೆಂದರೆ ‘ಜೀವನ ಚರಿತ್ರೆ’. ಈ ಪ್ರಕಾರದ ಕೃಷಿಗೆ ಬೇಕಾದ ಸಂಶೋಧನಾ ಸಾಮಗ್ರಿ ಅವರ ಬಳಿ ವಿಪುಲವಾಗಿದ್ದುದರಿಂದ 30 ಕ್ಕೂ ಅಧಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇಷ್ಟೊಂದು ವೈವಿಧ್ಯಮಯವಾದ ಜೀವನ ಚರಿತ್ರೆಗಳನ್ನು ಕನ್ನಡದಲ್ಲಿ ರಚಿಸಿದವರು ‘ದೇಜಗೌ ಒಬ್ಬರೇ’ ಎಂದರೂ ಅತಿಶಯೋಕ್ತಿಯಲ್ಲ. ಇತರ ಭಾರತೀಯ ಭಾಷೆಗಳಲ್ಲಿಯೂ ದೇಜಗೌ ರೀತಿಯಲ್ಲಿ ಒಬ್ಬನೇ ಲೇಖಕನಿಂದ ಈ ಪ್ರಮಾಣದ  ಜೀವನ ಚರಿತ್ರೆಗಳು ರಚನೆಯಾಗಿರುವುದು ವಿರಳಾತಿ ವಿರಳ. ಅಮೆರಿಕಾ ಗಾಂಧಿ, ಕರ್ನಾಟಕದ ರೂವಾರಿ, ಕ್ರಾಂತಿಕಾರಿ ಡಾ. ಅಂಬೇಡ್ಕರ್, ತೀನಂಶ್ರೀ, ದಾರಿದೀಪಗಳು, ನಿತ್ಯ ಸಚಿವ, ಬಸವ ಬೆಳಕು, ಬೂಕರ್ ಟಿ ವಾಷಿಂಗ್ಟನ್, ವಿಚಾರವಾದಿ ಪೆರಿಯಾರ್, ಸಮಾಜವಾದಿ ಲೋಹಿಯಾ, ನಾರಾಯಣ ಗುರು, ಜ್ಯೋತಿರಾವ್ ಫುಲೆ ಪ್ರಮುಖ ಜೀವನ ಚರಿತ್ರೆಗಳು ಎಲ್ಲಾ ವಯೋಮಾನದ ಓದುಗರಿಂದ ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ.

ನಾಡಿನ ಜಾನಪದ ಸಂಪತ್ತನ್ನು ಸಮೃದ್ಧವಾಗಿ ಕಟ್ಟಿ ಬೆಳೆಸಿದ ಕೀರ್ತಿ ದೇಜಗೌ ಬೆನ್ನಿಗಿದೆ. ‘ಜಾನಪದ’ ವಿಷಯ ಅವರ ಹೃದಯಕ್ಕೆ ಅತ್ಯಾಪ್ತವಾದದ್ದು. ಅವರ ವಿದ್ವತ್ಪೂರ್ಣವಾದ ಸಂಶೋಧನೆಯ ಭರ್ಜರಿ ಫಸಲಾಗಿ ಜಾನಪದ ಸೌಂದರ್ಯ, ಜಾನಪದ ಅಧ್ಯಯನ, ಜಾನಪದ ವಾಹಿನಿ, ಜಾನಪದ ಗೀತಾಂಜಲಿ ಪ್ರಕಟಗೊಂಡಿವೆ. ಎಲ್ಲಾ ಕಾಲಕ್ಕೂ ಸಲ್ಲುವ ಮಹತ್ವದ ಜಾನಪದೀಯ ಕೃತಿಗಳಾಗಿ ನಿಲ್ಲುವಲ್ಲಿ ದೇಜಗೌ ಅವರ ಪರಿಶ್ರಮ ಅಮೂಲ್ಯವಾದದ್ದು. ಸಂಶೋಧನೆ, ಸಂಪಾದನೆ ಮತ್ತು ವಿಮರ್ಶೆಯಲ್ಲಿ ಸಹ‌ ಅವರದ್ದು ‘ಪಳಗಿದ ಲೇಖನಿ’. ಪಂಪ, ಹರಿಹರ, ಕುಮಾರವ್ಯಾಸ, ಕನಕದಾಸ, ನಂಜುಂಡ, ಸರ್ವಜ್ಞ, ಷಡಕ್ಷರದೇವ, ಬಸವಣ್ಣ, ಕುವೆಂಪು ಅವರನ್ನು ಕುರಿತು ವಿಮರ್ಶಾ ಗ್ರಂಥಗಳು ಪ್ರಕಟವಾಗಿವೆ. ಕಬ್ಬಿಗರ ಕಾವ, ಧರ್ಮಾಮೃತ ಸಂಗ್ರಹ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಲೀಲಾವತಿ ಪ್ರಬಂಧ, ರುಕ್ಮಾಂಗದ ಚರಿತ್ರೆ, ಜೈಮಿನಿ ಭಾರತ ಸಂಗ್ರಹಗಳನ್ನು ಸಂಪಾದಿಸಿದ್ದಲದೆ, ಸಾವಿರಾರು ಪುಟಗಳ ಪಾಂಡಿತ್ಯಪೂರ್ಣವಾದ ವಿಮರ್ಶೆಯನ್ನು ಬರೆದಿದ್ದಾರೆ. ‘ಗದ್ಯ ಶೈಲಿ’ಯ ವಿವಿಧ ಮಗ್ಗಲುಗಳನ್ನು ವಿವೇಚಿಸಿ ಕುರಿತು ದೇಜಗೌ ಬರೆದಿರುವ ಈ ಗ್ರಂಥ ಕನ್ನಡದಲ್ಲಿ ಲಭ್ಯವಿರುವ ಗ್ರಂಥಗಳಲ್ಲಿಯೇ ಅಪರೂಪದ್ದಾಗಿದೆ.

‘ಬೆಂಗಳೂರು ಕೆಂಪೇಗೌಡ’ ಮತ್ತು ‘ಕಡುಗಲಿ ಕುಮಾರರಾಮ’ ದೇಜಗೌರ ಸಾಹಿತ್ಯ ಸೃಷ್ಟಿ ಕಾರ್ಯದ ಪ್ರಾರಂಭದಲ್ಲಿ ರಚಿತವಾದ ಐತಿಹಾಸಿಕ ಕಾದಂಬರಿಗಳು. ಆ ಬಳಿಕ‌ ಕಾದಂಬರಿ ಸೃಜಿಸುವ ಆಸಕ್ತಿ ಅವರಲ್ಲೇಕೊ ಕ್ಷೀಣವಾಗಿಬಿಡುತ್ತದೆ‌. ಕೆನೆ, ತೆನೆ, ಬೆರಕೆ ಸೊಪ್ಪು, ದಾರಿ, ಮಲ್ಲಿಗೆ ದಂಡೆ, ಬುತ್ತಿ ಅವರ ಮಹತ್ವದ ಪ್ರಬಂಧ ಸಂಕಲನಗಳು. ತಿರುಗೇಟು, ಲಂಕೇಶ್ವರಿ ಮತ್ತು ವಿಷವೃಕ್ಷ ನಾಟಕ ಪ್ರಕಾರಕ್ಕೆ ಸೇರಿದವು. ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದ ದೇಜಗೌ, ಮಕ್ಕಳಿಗೂ ಸಾಹಿತ್ಯ ರಚಿಸಿರುವುದು ಅಭಿನಂದನಾರ್ಹ. ಓರ್ವ ಸಾಹಿತ್ಯ ದಿಗ್ಗಜರಾಗಿ ಅನಾದರ ಮತ್ತು ಉಪೇಕ್ಷೆಗೆ ಒಳಗಾಗಿದ್ದ  ‘ಮಕ್ಕಳ ಸಾಹಿತ್ಯ’ ಕುರಿತು ಹಲವು ಸ್ವಾರಸ್ಯಕರ ಪುಸ್ತಕಗಳನ್ನು ರಚಿಸಿದರು.

ಆಲ್ ಬರ್ಟ್ ಐನ್ ಸ್ಟೀನ್, ಋಷಿ ಕವಿ ರವೀಂದ್ರರು, ಕನ್ನಡ ನಾಡಿನ ಕವಿ, ನಮ್ಮ ನೆಹರು, ಮೇಡಂ ಕ್ಯೂರಿ, ವಿವೇಕಾನಂದರು, ಗೋಪಾಲಕೃಷ್ಣ ಗೋಖಲೆ, ಮಕ್ಕಳ ಏಕಲವ್ಯ, ಮಕ್ಕಳ ಶೂದ್ರ ತಪಸ್ವಿ ಮುಂತಾದ ಕೃತಿಗಳು ಮಕ್ಕಳ ಓದುವ ಅಭಿರುಚಿಗೆ ಪೂರಕವಾಗಿವೆ. ದೇಶದ ಶ್ರೇಷ್ಠ ಶಿಕ್ಷಣ ತಜ್ಞರಾಗಿರುವ ದೇಜಗೌ ತಮ್ಮ ಮೂರು ದಶಕದ ಶೈಕ್ಷಣಿಕ ಅನುಭವಗಳ ನೆಲೆಯಲ್ಲಿ ಮಥಿಸಲ್ಪಟ್ಟ ವಿಚಾರಧಾರೆಯನ್ನು ‘ಕೆಲವು ಶೈಕ್ಷಣಿಕ ವಿಚಾರಗಳು’, ‘ವಿದ್ಯಾಪೀಠಗಳು’, ‘ಮಂಡ್ಯ ಜಿಲ್ಲೆ ಶೈಕ್ಷಣಿಕ ಅಭಿವೃದ್ಧಿ’, ‘ಪುಸ್ತಕ ಪ್ರಪಂಚ’ಗಳಲ್ಲಿ ಮನಗಾಣಬಹುದು. ದೇಜಗೌ ಅದ್ವೀತಿಯ ಕನ್ನಡ ಪ್ರೇಮಿಯಾಗಿ, ಕನ್ನಡವ ಉಸಿರಾಡುತ್ತಿದ್ದರೂ ಪರಭಾಷಾ ದ್ವೇಷಿಯಾಗಿರಲಿಲ್ಲ. “ವಿಶ್ವದ ಜ್ಞಾನ ಪಡೆಯಲು ಆಂಗ್ಲ ಭಾಷೆ ಸಹ ಬೇಕು” ಎಂಬುದು ಅವರ ಪ್ರತಿಪಾದನೆಯಾಗಿತ್ತು. ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದ ಅವರು ‘Culture, Education and Society’, ‘A Study of Village Names of Mysore District’, ‘Studies in Karnataka Culture and Folklore’ ಪುಸ್ತಕಗಳನ್ನು ರಚಿಸಿರುವುದು ಗಮನಾರ್ಹ.

ಕುವೆಂಪು ದೇಜಗೌ ಅವರ ಆರಾಧ್ಯ ದೈವ. ಅವರ ಇಬ್ಬರ ನಡುವಿನ ಬಾಂಧವ್ಯ ಮತ್ತು ವಾತ್ಸಲ್ಯ ಎಣೆಯಿಲ್ಲದ್ದು. ಕುವೆಂಪು ಮತ್ತು ಅವರ ಸಾಹಿತ್ಯವನ್ನು ಕುರಿತು ಎರಡೂವರೆ ಸಾವಿರಕ್ಕೂ ಮೀರಿದ ಪುಟಗಳ ವ್ಯಾಖ್ಯಾನ ಮತ್ತು ವಿಮರ್ಶೆಯನ್ನು ಬರೆದಿದ್ದಾರೆ. ಕುವೆಂಪು ಸಾಹಿತ್ಯ ಕುರಿತು ದೇಜಗೌರಷ್ಟು ಯಾವ ಸಾಹಿತಿಯೂ ಗ್ರಂಥ ರಚಿಸಿಲ್ಲ. ಕುವೆಂಪು ಅವರ ಶಿಕ್ಷಣ ತತ್ವವಿಚಾರಗಳು, ಕುವೆಂಪು ದರ್ಶನ ಮತ್ತು ಸಂದೇಶ, ಕುವೆಂಪು ವಿಶ್ವಮಾನವ ಸಂದೇಶ, ಕುವೆಂಪು ಶೈಲಿ, ಕುವೆಂಪು ಸಾಹಿತ್ಯದಲ್ಲಿ ಮಕ್ಕಳು, ಕುವೆಂಪು ಸಾಹಿತ್ಯದಲ್ಲಿ ರೈತ, ರಾಷ್ಟ್ರಕವಿ ಭಾಷಣಗಳು, ವಿಚಾರ ಕ್ರಾಂತಿಗೆ ಕುವೆಂಪು ಕರೆ,  ರಾಮಾಯಣ ದರ್ಶನಂ ವಚನ ಚಂದ್ರಿಕೆ, ಕುವೆಂಪು ಸಾಹಿತ್ಯ – ಕೆಲವು ಅಧ್ಯಯನಗಳು, ಕುವೆಂಪು ಅವರ ಕೊನೆಯ ದಿನಗಳು, ಯುಗದ ಕವಿಗೆ ನಮನ, ಕುವೆಂಪು ಮತ್ತು ವಿಭೂತಿ ಪುರುಷರು, ಕುವೆಂಪು ನಿಘಂಟು ಇತ್ಯಾದಿ ಗ್ರಂಥಗಳು ಕುವೆಂಪು ಸಾಹಿತ್ಯ ದರ್ಶನ ಮಾಡಿಸುತ್ತವೆ. ಕುವೆಂಪು ನಂತರ ದೇಜಗೌ ಆರಾಧಿಸುವ ಮಹಾಪುರುಷ ಬಸವೇಶ್ವರರು. ಇವರನ್ನು ಕುರಿತು ಸುಮಾರು ಒಂದು ಸಾವಿರ ಪುಟಗಳಷ್ಟು  ವ್ಯಾಖ್ಯಾನ ಬರೆದಿದ್ದಾರೆ. ವಚನಗಳಲ್ಲಿ ವೈಚಾರಿಕತೆ, ಶರಣ ಪಥ,  ಚಿಂತನ ತರಂಗ ದೇಜಗೌ ಅವರ ಇತರ ಮೌಲಿಕ ಕೃತಿಗಳಾಗಿವೆ.

ಪ್ರವಾಸ ಸಾಹಿತ್ಯ ರಚನೆಯಲ್ಲಿಯೂ ಕೂಡ ದೇಜಗೌ ಅವರ ಪ್ರತಿಭೆಯ ದರ್ಶನ ಕಾಣಬಹುದು. ಆಫ್ರಿಕಾ ಯಾತ್ರೆ, ಪ್ರವಾಸಿಯ ದಿನಚರಿ, ಯೇಸು ವಿಭೀಷಣರ ನಾಡಿನಲ್ಲಿ, ವಿದೇಶದಲ್ಲಿ ನಾಲ್ಕು ವಾರ, ವಿಸ್ಮಯಗಳ ನಾಡಿನಲ್ಲಿ, ನಿಚ್ಚ ಹಸುರಿನ ನಾಡಿನಲ್ಲಿ, ಜಗತ್ತಿನ ನಡುನೆತ್ತಿಯ ಮೇಲೆ ಹಳದಿ ಕಲ್ಲಿನ ಉದ್ಯಾನ ಪ್ರವಾಸ ಕಥನಗಳು “ದೇಶ ಸುತ್ತು ಕೋಶ ಓದು” ಎಂಬ ಲೋಕೋಕ್ತಿಗೆ  ಕನ್ನಡಿಯಾಗಿವೆ. ಓದುಗರಿಗೆ ಕೂತಲ್ಲಿಯೇ ಆ ದೇಶಗಳ ದರುಶನ ಮಾಡಿಸುತ್ತವೆ. ಹಿರಿಯ ಮತ್ತು ಕಿರಿಯ ತಲೆಮಾರಿನ ಬರಹಗಾರರ ವಿವಿಧ ಪ್ರಕಾರದ ಪುಸ್ತಕಗಳಿಗೆ ಬರೆದ ‘ಮುನ್ನುಡಿ’ಗಳ ಮೂರು ಬೃಹತ್ ಸಂಪುಟ ಹೊರಬಂದಿವೆ.

ಇವು ದೇಜಗೌ ಅವರ ವಿಮರ್ಶಾ ದೃಷ್ಟಿಯ ದ್ಯೋತಕ. ‘ಹೋರಾಟದ ಬದುಕು’ ಇವರ ಮಹತ್ವದ ಆತ್ಮಕಥೆ. ಅವರ ಬದುಕಿನ ಹೋರಾಟ ಮತ್ತು ಸಾಧಿಸಿದ ಔನ್ನತ್ಯವನ್ನು ಮನದಟ್ಟು ಮಾಡಿಸುವ ಮಹತ್ವದ ಕೃತಿ. ಹಲವು ಮಂದಿಗೆ ಸಾಧಿಸಲು ‘ಪ್ರೇರಣೆ’ ನೀಡಿರುವ ಕೃತಿಯ ವಸ್ತುನಿಷ್ಠ ನಿರೂಪಣೆ ಯಾರಿಗೆ ಆದರೂ ಇಷ್ಟವಾಗಬಲ್ಲದು. ಇದರಲ್ಲಿಯ ‘ತಪ್ಪೊಪ್ಪಿಗೆ’ ಎಂಬ ಅಧ್ಯಾಯವೇ ದೇಜಗೌ ಅವರೊಳಗಿನ ‘ಋಜುತ್ವ’ವನ್ನು ಬಿಂಬಿಸುತ್ತದೆ. ಆತ್ಮರತಿಯ ಗುಣವಿಲ್ಲದ ಪ್ರಾಮಾಣಿಕ ಅಭಿವ್ಯಕ್ತಿಯ ಕಾರಣಕ್ಕೆ ಆತ್ಮಕತೆಗಳ ಸಾಲಿನಲ್ಲಿ ತನ್ನ ಪ್ರಭುತ್ವ ಸಾಧಿಸಿದೆ. ನೆನಪಿನ ಬುತ್ತಿ, ಕುಲಪತಿಯ ದಿನಚರಿ, ಪತ್ರ ಸಾಹಿತ್ಯ, ಕುಲಪತಿಯ ಭಾಷಣಗಳು ದೇಜಗೌ ಅವರ ವೃತ್ತಿ ಜೀವನದ ಅನುಭವಗಳ ತೆರೆದಿಡುತ್ತವೆ. ಗ್ರಂಥ ಸಂಪಾದನೆಯಲ್ಲಿ ‘ತಜ್ಞತೆ’ ಹೊಂದಿರುವ ಅವರು ಗಂಗೋತ್ರಿ, ಸಿರಿಯೊಡಲು, ಸುವರ್ಣ ಮಂಡ್ಯ, ಕುವೆಂಪು ಅವರ ‘ಸಹ್ಯಾದ್ರಿ’, ಕೆ.ವಿ. ಶಂಕರಗೌಡರ ‘ಕಬ್ಬಿನ ಹಾಲು’, ಪುತಿನರ ‘ಯದುಗಿರಿಯ ವೀಣೆ’  ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ.

ತಮ್ಮ ಗುರು ಕುವೆಂಪು ರೀತಿಯಲ್ಲಿ ಸಾಹಿತ್ಯದ ಸರ್ವ ಪ್ರಕಾರದಲ್ಲಿ ಅದ್ವಿತೀಯ ವ್ಯವಸಾಯ ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಸಂಪನ್ನಗೊಳಿಸಿದ್ದಾರೆ. ದೇಜಗೌರ ಸಾಹಿತ್ಯ ಕೊಡುಗೆ ಶಿಖರ ಸದೃಶವಾದ ದ್ದು. ಅನುಗಾಲವೂ ಕನ್ನಡದ ಅಂತರ್ಜಲವ ಒಸರುವ ಅವರ ಸಾಹಿತ್ಯ ಕರುನಾಡಿನ ಉದ್ದಗಲಕ್ಕೂ ಹಸಿರು ಹಾದಿ ನಿರ್ಮಿಸಿದೆ.   ದೇಜಗೌ ಒಬ್ಬ ಅಪ್ರತಿಮ ಕೆಚ್ಚೆದೆಯ ಕನ್ನಡದ ಅತ್ಯುಗ್ರ ಹೋರಾಟಗಾರರು. “ಕನ್ನಡಕ್ಕೆ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎಂಬ ಕುವೆಂಪು ಅವರ ಮಾತಿಗೆ ಕಟಿಬದ್ಧರಾಗಿ ನಾಡು ಮತ್ತು ನುಡಿಗಾಗಿ ಹೋರಾಟ ಮಾಡಿದ ದೇಜಗೌ ಎಂದೂ ಸ್ಥಾವರ ಸಾಹಿತಿಯಾಗಷ್ಟೇ ಉಳಿಯಲಿಲ್ಲ. ಪ್ರಖರ ಜಂಗಮಶೀಲ ಸಾಹಿತಿ ಮತ್ತು ಕನ್ನಡ ಸೇನಾನಿಯಾಗಿ ಕೊಂಚವೂ ವಿರಮಿಸದೆ ‘ಸಮಗ್ರ’ವಾಗಿ ಕನ್ನಡ ಕಟ್ಟಿದವರು. ‘ಕನ್ನಡ’ವನ್ನೇ ಅನುಗಾಲವೂ ‘ಉಸಿರಾ’ಡುತ್ತಿದ್ದ ಅವರದ್ದು ಉಗ್ರ ಹೋರಾಟದ ಸ್ವರೂಪ. ಗುರಿ ತಲುಪುವ ವರೆಗೂ ರಾಜೀಯ ಪ್ರಶ್ನೆಯೇ ಇಲ್ಲ. ಬಿಎಂಶ್ರೀ ಮತ್ತು ಕುವೆಂಪು ಅವರ ‘ಕನ್ನಡ ಪ್ರಜ್ಞೆ’ ಅವರೊಂದಿಗೆ ಹಾಸುಹೊಕ್ಕಾಗಿತ್ತು.

ಕನ್ನಡ ಸೇವೆ ಮತ್ತ ಗುರು ಸೇವೆ ಅವರ ಧ್ಯೇಯವಾಗಿತ್ತು. ಎರಡೂವರೆ ಸಾವಿರ ಸುದೀರ್ಘ ಪರಂಪರೆಯ ಇತಿಹಾಸ ಹಾಗೂ ಪ್ರಾಚೀನತೆಯನ್ನು ಕನ್ನಡ ಹೊಂದಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳಿ ತಮಿಳು ಭಾಷೆಗೆ ಮೊದಲು ಶಾಸ್ತ್ರೀಯ ಸ್ಥಾನ ಮಾನ ನೀಡಿದಾಗ, ಇದನ್ನು ಪ್ರಬಲವಾಗಿ ವಿರೋಧಿಸಿ ಹಾಗೂ ದೊರಕಿಸಿಕೊಡಲು ತಮ್ಮ ತೊಂಬತ್ತರ ವೃದ್ಧಾಪ್ಯದಲ್ಲೂ ಐದು ಬಾರಿ ಏಕಾಂಗಿ ಉಪವಾಸ ಸತ್ಯಾಗ್ರಹ ಮಾಡಿದ ಕನ್ನಡ ಕಟ್ಟಾಳು. ‘ಕನ್ನಡಕ್ಕೆ ಏಕೆ ಶಾಸ್ತ್ರೀಯ ಭಾಷಾ ಸ್ಥಾನ ನೀಡಬೇಕು?’ ಎಂಬುದಕ್ಕೆ ಆಧಾರಗಳ ಒದಗಿಸಿ ಮನದಟ್ಟು ಮಾಡಿದ್ದಲ್ಲದೆ ರಾಜ್ಯ ಸರ್ಕಾರ, ಸಾಹಿತಿಗಳು, ಕನ್ನಡ ಹೋರಾಟಗಾರರು ಮತ್ತು ಸಮಸ್ತ ಕನ್ನಡಿಗರ ಹುರಿದಂಬಿಸಿ ಹೋರಾಟದ ಕಿಚ್ಚನ್ನು ಇಮ್ಮಡಿಯಾಗಿಸಿದ ದೇಜಗೌ, ಕೊನೆಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ – ಮಾನ ದೊರಕಿಸಿಕೊಟ್ಟರು. ಅವರು ಹಠ ತೊಟ್ಟು ಕೆಚ್ಚೆದೆಯ ಹೋರಾಟ ಮಾಡದೆ ಹೋಗಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ‘ಗಗನ ಕುಸುಮ’ವಾಗಿರುತ್ತಿತ್ತು.

ಕನ್ನಡದ ಸಾರ್ವಭೌಮತ್ವ ಎತ್ತಿಹಿಡಿಯಲು ಸದಾ ಕಂಕಣ ಬದ್ಧರಾಗಿದ್ದ ದೇಜಗೌ ನಾಡು – ನುಡಿಯ ವಿಷಯದಲ್ಲಿಯೂ ಹೋರಾಟದ ಬದುಕು ನಡೆಸಿದವರು. ಕನ್ನಡದ ಸರ್ವಾಂಗೀಣ ಬೆಳವಣಿಗೆಯ ಭಾಗವಾಗಿ ರೂಪಿಸಿದ  ಯೋಜನೆಗಳು, ಹೊಂದಿದ್ದ ದೂರದೃಷ್ಟಿ, ಪ್ರಗತಿಪರ ನೋಟ, ಚಿಂತನೆಗಳು ಸಾರ್ವಕಾಲಿಕವಾದವು. ಆಡಳಿತದಲ್ಲಿ ಕನ್ನಡ ಕಡ್ಡಾಯ ಜಾರಿಯಾಗಲು ಶ್ರಮಿಸಿದವರು. “ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು” ಎಂದು ಪ್ರತಿಪಾದಿಸಿ ನಿರಂತರ ಹೋರಾಟ ಮಾಡಿದ ‘ಕನ್ನಡ ಭೀಷ್ಮ’.  “ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ಇರಬೇಕು” ಎಂದು ಆಗ್ರಹಿಸಿದ್ದರ ಪರಿಣಾಮವಾಗಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳು ಮತ್ತು ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಾಗುವಂತೆ ಮಾಡಿದ್ದು ಇದೇ ನಮ್ಮ ದೇಜಗೌ ಅವರ ದಣಿವರಿಯದ ಹೋರಾಟ. ಇದಕ್ಕೆ ಕನ್ನಡ ಜನತೆ ಸದಾ ಋಣಿಯಾಗಿರಬೇಕು. ಕಾವೇರಿ ಚಳವಳಿಯಲ್ಲಿ ಸದಾ ಸಕ್ರಿಯ ರಾಗಿದ್ದ ದೇಜಗೌ, ನಾನು ನಮ್ಮ ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನಡೆಸಿದ ‘ಕಾವೇರಿಗಾಗಿ ಕಾವ್ಯ ಚಳವಳಿ’ಯ ನೇತೃತ್ವ ವಹಿಸಿದ್ದು ನನ್ನ  ಜೀವನದ ಅವಿಸ್ಮರಣೀಯ ಸಂಗತಿ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ಹಲವು ಕನ್ನಡ ನಾಡು ಮತ್ತು ನುಡಿ ಪರವಾದ ಸಂಘಟನೆಗಳಿಗೆ ‘ಮಾತೃ’ ಮತ್ತು ‘ಗುರು’ವಾಗಿದ್ದು ಮಾರ್ಗದರ್ಶಿದರು. ಕನ್ನಡ ವಿಚಾರದಲ್ಲಿ ತುಂಬ ಗಟ್ಟಿಯಾದ ನಿಲುವು ಹೊಂದಿದ್ದ ದೇಜಗೌ “ಸಾಧುಗೆ ಸಾಧು…” ಎಂಬ ಶಾಸನೋಕ್ತಿಯಂತೆ ಇದ್ದ ಕನ್ನಡದ ಚೈತನ್ಯ ಶಕ್ತಿ ಮತ್ತು ಮಹಾಗುರು.

ಕನ್ನಡ ನೆಲ, ಜಲ, ಭಾಷೆಯ ವಿಚಾರದಲ್ಲಿ  ಸಣ್ಣ ಧಕ್ಕೆಯಾದರೂ ಸದಾ ಕಹಳೆ ಮೊಳಗಿಸುತ್ತಿದ್ದ ದೇಜಗೌ ಕನ್ನಡದ ಮಹಾತಪಸ್ವಿ. ಕನ್ನಡದ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ವಿಧಾನಸೌಧ ಅಲೆದು, ವಿಳಂಬ ನೀತಿಯ ಕಟುವಾಗಿ ಖಂಡಿಸಿ,  ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಿ‌ ಪಟ್ಟು ಬಿಡದೆ ಮಾಡಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿ.‌ನಾರಾಯಣ ಅಧ್ಯಕ್ಷರಾಗಿದ್ದಾಗ 1970 ರಲ್ಲಿ ಬೆಂಗಳೂರಿನ‌ಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ದೇಜಗೌ ಅಧ್ಯಕ್ಷತೆಯಲ್ಲಿ ನಡೆಯಿತು. ಆಗ ಅವರಿಗೆ 51 ವರ್ಷಗಳ ವಯೋಮಾನ. ಅಂದಿನ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ಸಮ್ಮೇಳನದ ವೇದಿಕೆಯಲ್ಲಿದ್ದರು. ಕನ್ನಡದ ಬಗ್ಗೆ ಅಚಲ ನಿಲುವು ಹೊಂದಿದ್ದ ದೇಜಗೌ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸರ್ಕಾರದ ಮುಂದೆ ಮೂರು ಒತ್ತಾಯಗಳನ್ನಿಟ್ಟರು.

“ಕನ್ನಡವನ್ನು ಸರ್ವ ಮಾಧ್ಯಮ ಮಾಡಿ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೆಲಸ ಕೊಡಿ, ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ” ಇವೆ ಆ ಮೂರು ಒತ್ತಾಯಗಳು. ತಾವು ಬದುಕಿರುವ ತನಕ ಇವುಗಳ ಜಾರಿಗಾಗಿ ಒತ್ತಾಯಿಸುತ್ತಲೇ ಇದ್ದರು. ಕನ್ನಡದ ವಿಷಯದಲ್ಲಿ ಅನ್ಯಾಯವಾದಾಗ ಸುಮ್ಮನೆ ಕೂರದ ಜಾಯಮಾನವಲ್ಲ. ಸಿಡಿದೇಳುವ ಪ್ರವೃತ್ತಿ ಸದಾ ಜಾಗೃತವಾಗಿರುತ್ತಿತ್ತು. ಆದರೂ ಈ ಒತ್ತಾಯಗಳು ಇನ್ನೂ ಜಾರಿಯಾಗಿಲ್ಲದಿರುವುದು ನಾಡಿನ ದುರಂತ.

ನಾಡು ಮತ್ತು ನುಡಿ ಕುರಿತ ಅವರ  ಒಲವು ಮತ್ತು ನಿಲುವುಗಳು ವಿಶಿಷ್ಟವಾದವು. ಜೊತೆಗೆ ಅವರ ಚಿಂತನೆಗಳು ಸರ್ವ ಮಾನ್ಯವಾದವು. “ಮಹಾಕಾವ್ಯ ಮತ್ತು ವಚನಗಳಲ್ಲಿ ಕನ್ನಡದ ವಿಶೇಷತೆ ಹಾಗೂ ಅನ್ಯನತೆ ಇದೆ” ಎಂದು ಗುರುತಿಸಿ ಪ್ರಚುರಪಡಿಸುತ್ತಿದ್ದ ರೀತಿಯಲ್ಲಿ ಅವರ ಸೂಕ್ಷ್ಮತೆಯಿತ್ತು. ಅಧಿಕಾರಶಾಹಿಯ ಕನ್ನಡ ವಿರೋಧಿ ಪ್ರವೃತ್ತಿಯನ್ನು ಸದಾ ಖಂಡಿಸಿ ಚಾಟಿ ಬೀಸುತ್ತಿದ್ದ ಅವರು, “ಅಧಿಕಾರಿಗಳು ಕನ್ನಡದಲ್ಲಿ ಕಲಿಯಬೇಕು, ಟಿಪ್ಪಣಿ ಬರೆಯಬೇಕು, ಆದೇಶಗಳನ್ನು ಹೊರಡಿಸಬೇಕು” ಎಂದು ಆಗ್ರಹಿಸುತ್ತಿದ್ದರು. ಕನ್ನಡದ ಅಸ್ಮಿತೆಯ ಉಳಿವಿಗಾಗಿರುವ ಅವರ ವಿಚಾರಶೀಲತೆ ಬಹುಮುಖ್ಯವಾದವು. “ಕರ್ನಾಟಕದಲ್ಲಿ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆಯಬೇಕು. ಗಡಿಯಲ್ಲಿ ಕನ್ನಡ ಚಟುವಟಿಕೆಗಳು ನಿರಂತರ ಕೈಗೊಳ್ಳಬೇಕು. ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಬೇಕು. ಮಾತೃ ಭಾಷೆ ಬಿಟ್ಟು ಬೇರೆ ಭಾಷೆಗಳಿಂದ ಜ್ಞಾನ ಲಭಿಸುವುದಿಲ್ಲ. ಆದ್ದರಿಂದ, ಮಾತೃಭಾಷೆಯಾದ ಕನ್ನಡದ ಮೂಲಕ ಶಿಕ್ಷಣ ದೊರೆಯಬೇಕು. ಆದರೆ, ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯಿರಿ. ಎಷ್ಟು ಭಾಷೆ ಕಲಿಯಲು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ. ಧರ್ಮ ಮತ್ತು ಜಾತಿ ಜನಮನವನ್ನು ಒಗ್ಗೂಡಿಸುವುದಿಲ್ಲ. ಕನ್ನಡ ಭಾಷೆ ಮಾತ್ರ ‘ಏಕತೆ’ ಬೆಳೆಸಬಲ್ಲದು” ಎಂಬ ಮಾತು ಅಕ್ಷರಶಃ ಸತ್ಯ.

ಕುವೆಂಪು ಅವರಂತೆಯೇ ದೇಜಗೌರಲ್ಲಿ ಸಾಮಾಜಿಕ ಕಾಳಜಿಯ ತೊರೆ ಎಂದೂ ಬತ್ತದೆ ಹರಿಯುತ್ತಿತ್ತು.   ಸಾಮಾಜಿಕ ರೋಗಗಳಾದ ಜಾತೀಯತೆ, ಭ್ರಷ್ಟಾಚಾರ, ಮೌಢ್ಯತೆಯ ವಿರುದ್ಧ ಕುದಿಯುತ್ತಿದ್ದರು. ರಾಜಕಾರಣಿಗಳು ಮತ್ತು ಮಠಗಳು ಒಂದೇ ಜಾತಿಗೆ ಮೀಸಲಾಗುತ್ತಿರುವ ಬಗ್ಗೆ, ಕೋಮುವಾರ ವಿದ್ಯಾಸಂಸ್ಥೆಗಳನ್ನು ತೆರೆದು ಜಾತಿಯನ್ನು ಭೂತಾಕಾರವಾಗಿ ಬೆಳೆಸುತ್ತಿದ್ದಾರೆ” ಎಂದು ಕಿಡಿಕಾರುತ್ತಿದ್ದರು. ಜಾತಿಯ ವಿಷ ಬೀಜ ಬಿತ್ತುವವರ ಮತ್ತು ಭ್ರಷ್ಟಾಚಾರ ಪೋಷಿಸುವವರ ಬಗ್ಗೆ ಅವರ ಆಕ್ರೋಶ ಜ್ವಾಲಾಮುಖಿಯ ಸ್ವರೂಪ ತಾಳುತ್ತಿತ್ತು. ಜಾತಿಯ ಅರ್ಬುದ ರೋಗ ಸಾಹಿತ್ಯ, ಪತ್ರಿಕಾ ಕ್ಷೇತ್ರಗಳಿಗೂ‌ ಹರಡಿ, ಸಾಹಿತ್ಯ ಕೃತಿಯ ಮೌಲ್ಯವನ್ನು ಜಾತೀಯತೆಯ ಮೇಲೆ ನಿರ್ಧರಿಸಲಾಗುತ್ತಿರುವ, ಇಲ್ಲಿಯೂ ಗುಂಪುಗುಳಿತನ, ಭ್ರಷ್ಟಾಚಾರ, ಅತ್ಯಾಚಾರ, ವ್ಯಭಿಚಾರ ಹೆಚ್ಚಾಗಿರುವ ಕುರಿತು ‌ಅಸಹನೆಯಿತ್ತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಗುಂಪುಗಾರಿಕೆಯ ಕಂಡು ಸಿಟ್ಟುಗೇಳುತ್ತಿದ್ದ ದೇಜಗೌ “ಕವಿಗೆ ಕವಿ ಕರುಬದೆ ಮುನಿಯದೆ ಮಣಿದು ಮರೆಯುವ ತನಕ ಸಾಹಿತ್ಯ ಕ್ಷೇತ್ರ  ಹಸನಾಗುವುದಿಲ್ಲ. ಲೋಕದ ದೌರ್ಬಲ್ಯವನ್ನೆಲ್ಲ ತೊಳೆಯಬೇಕಾದ ಗಂಗೆಯೇ ಕಶ್ಮಲೆಯಾದರೆ ಗತಿಯೇನು? ಲಿಂಗನಾಮ ಮುದ್ರಾದಿ ಲಾಂಛನಗಳ ಹಾವಳಿ ನಿಲ್ಲುವ ತನಕ ಲೋಕ ಕಲ್ಯಾಣಕಾರಿಯಾದ ಸಾಹಿತ್ಯ ನಿರ್ಮಾಣ ಸಾಧ್ಯವಾಗದು” ಎನ್ನುತ್ತಿದ್ದರು.

ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘ ಸಂಸ್ಥೆಗಳ ಕಟ್ಟಿ ಬೆಳೆಸುವಲ್ಲಿ ದೇಜಗೌ ಅವರ ಶಕ್ತಿ ದೈತ್ಯ ಸ್ವರೂಪದ್ದು. ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ಪರಿಷತ್ತು, ಭಾರತೀಯ ಸ್ಥಳನಾಮ ಸಂಸ್ಥೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಅಧ್ಯಾಪಕ ಪರಿಷತ್ತು, ಕುವೆಂಪು ಕನ್ನಡ ಅದ್ಯಯನ ಸಂಸ್ಥೆ, ಕೆ.ವಿ. ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಭಾರತೀಯ ಸ್ಥಳನಾಮಗಳು ಪರಿಷತ್ತು ಸೇರಿದಂತೆ ಹಲವು ಸಂಘಟನೆಗಳ ಸೃಷ್ಟಿಕರ್ತರು. ಮಾತ್ರವಲ್ಲ, ಇವುಗಳ ಪ್ರಾರಂಭಿಕ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲವಾಗಿ ದುಡಿದು ಉತ್ತಮ ಅಡಿಪಾಯ ಹಾಕಿದ್ದಾರೆ. ನಾಡು ಮತ್ತು ನುಡಿಯ ಪರವಾಗಿ ಕಾರ್ಯ ನಿರ್ವಹಿಸಲು ಸನ್ನದ್ದುಗೊಳಿಸಿ ಹೋಗಿದ್ದಾರೆ. ಈ ಎಲ್ಲಾ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದಿವೆ.

ರಾಜ್ಯ ಸರ್ಕಾರವು ಕುವೆಂಪು ಭಾಷಾ ಪ್ರಾಧಿಕಾರ ಮತ್ತು ಕರ್ನಾಟಕ ಬಾಲವಿಕಾಸ  ಅಕಾಡೆಮಿ ಸ್ಥಾಪಿಸಿದ್ದು ದೇಜಗೌ ಅವರ ಹೋರಾಟದ ಫಲವೇ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ರಚನೆಗೆ ಕಾರಣರಾದುದ್ದಲ್ಲದೆ, ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರಕವಿ ಆಯ್ಕೆ ಸಮಿತಿ ಸೇರಿದಂತೆ ವಿವಿಧ ಪ್ರಶಸ್ತಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಲವಾರು ಗಣ್ಯರ ಅಭಿನಂದನ ಸಮಿತಿಯ ‌ಅಧ್ಯಕ್ಷರಾಗಿ, ಅಭಿನಂದನ ಗ್ರಂಥದ ಸಂಪಾದಕರಾಗಿ ದುಡಿದಿದ್ದಾರೆ. ಎಲ್ಲರಿಗೂ ದೇಜಗೌ ಬೇಕು. ಎಲ್ಲೆಡೆ ಸರ್ವ ಮಾನ್ಯರು. ಹಾಗಾಗಿ, ಕನ್ನಡ ಕಾಯಕಕ್ಕೆ ನಾಡಿನ ಉದ್ದಗಲಕ್ಕೂ ಸಂಚರಿಸುತ್ತಿದ್ದರು. ಕುಲಪತಿ ಆಗಿದ್ದಾಗ, ಆನಂತರದ ನಿವೃತ್ತಿಯ ಜೀವನದಲ್ಲಿ ಅವರೆಂದೂ ವಿರಮಿಸುವ ಗೋಜಿಗೆ ಹೋಗಲಿಲ್ಲ. ಬಸವಣ್ಣನ ಕಾಯಕ ತತ್ವಕ್ಕೆ ತಮ್ಮನ್ನು ‘ಒಳಗು’ ಮಾಡಿಕೊಂಡಿದ್ದರು. ಕೂತು ಸವೆಯದೆ ದುಡಿದು ಸವೆಯುವ ಇಚ್ಛಾಶಕ್ತಿ ಇದ್ದ ಕಾರಣ ವರ್ಷವಿಡೀ ಅಸಂಖ್ಯಾತ ಸಾಹಿತ್ಯದ ಸಮಾರಂಭಗಳು ಕಾಯುತ್ತಿದ್ದವು.

ಅವರದ್ದು ಉದ್ಘಾಟನೆಯೋ ಅಧ್ಯಕ್ಷತೆಯೋ ಪ್ರಶಸ್ತಿ ಪ್ರದಾನವೋ ಪುಸ್ತಕ ಬಿಡುಗಡೆಯೋ ಜವಾಬ್ದಾರಿ ಇದ್ದೇ ಇರುತ್ತಿತ್ತು. ನಾನಾ ಅಕಾಡೆಮಿಗಳ, ಪ್ರಾಧಿಕಾರಗಳ, ವಿಶ್ವವಿದ್ಯಾಲಯದ ಪರಿಷತ್ತಿನ, ಸಂಘ ಸಂಸ್ಥೆಗಳ ವಿವಿಧ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು. ಎಲ್ಲಿಗೆ ಹೋದರೂ ಪೂರ್ವ ತಯಾರಿ ಸಾಮಾನ್ಯ. ಭಾಷಣದ ಸಿದ್ಧತೆಗೆ ನಿರಂತರ ಅಧ್ಯಯನ ಕೂಡ ನಡೆಯುತ್ತಿತ್ತು. ಹಿರಿಯ ಅಥವಾ ಕಿರಿಯ ಬರಹಗಾರರ ಪುಸ್ತಕವೇ ಆಗಲಿ ಆಳವಾಗಿ ಓದಿಯೇ ‘ವಿಮರ್ಶಾತ್ಮಕ ಮುನ್ನುಡಿ’ ಬರೆಯುವ ಮನೋವೃತ್ತಿ ರೂಢಿಸಿಕೊಂಡಿದ್ದರು. ಸದಾ ಒಂದಲ್ಲ ಒಂದು ಅಭಿನಂದನ ಗ್ರಂಥಕೆ ಲೇಖನ ಬರೆಯುವದಂತೂ ಇದ್ದೇ ಇತ್ತು. ಸಮಾರಂಭಗಳಿಗೆ ಸಕಾಲಕ್ಕೆ ಹಾಜರಾಗುತ್ತಿದ್ದರು. ಸ್ವಯಯ ಶಿಸ್ತು ಅವರ ಪ್ರತಿ ಮಾತು ಮತ್ತು ನಡೆಯಲ್ಲಿ ಎದ್ದುಕಾಣುತ್ತಿತ್ತು.

ಗಾಂಧಿಯವರ “ಸರಳ ಜೀವನ ಉದಾತ್ತ ಚಿಂತನೆ”ಯ ಆರಾಧಕರಾಗಿ ತಮ್ಮ ತಂದೆ ನಡೆದ ಸತ್ಯದ ಪಥದ ಪಯಣಿಗರಾಗಿದ್ದ ದೇಜಗೌ ಎಂದರೆ ಹಳ್ಳಿಗಾಡಿನ ಮಾಗಿದ ಜೀವ. ಶುಭ್ರ ಶ್ವೇತ ಸರಳ ಉಡುಪಿನ ಮಾನವಾತವಾದಿ. ಪ್ರಖರ ವೈಚಾರಿಕತೆಯ ದೀವಟಿಗೆ. ಸಾದಾ ಸೀದಾ ವ್ಯಕ್ತಿತ್ವ. ಶೋಕಿತನದ ಹಿಡಿತಕ್ಕೆ ಸಿಲುಕುವ ಜಾಯಮಾನವಿರಲಿಲ್ಲ. ಮಿತ ಬಯಕೆಗಳ ಗಡಿಯ ಎಂದೂ ದಾಟಿದವರಲ್ಲ. ದೊಡ್ಡ ವಿದ್ವಾಂಸರಾದರೂ ನಿರ್ಗವಿ. ಆತ್ಮಗೌರವಕ್ಕೆ ಕೊಂಚ ಮುಕ್ಕಾದರೂ ಸಿಡಿಯುವ ಸ್ವಾಭಿಮಾನಿ. ಹಠಮಾರಿತನವಿದ್ದರೂ ಅದು ಪ್ರತಿಪಾದಿಸುವ ಆದರ್ಶ ಮತ್ತು ಮೌಲ್ಯಗಳಿಗಾಗಿ. ಯಾರ ಮೇಲಾದರೂ ಅಸಮಾಧಾನ, ಅತೃಪ್ತಿ, ಅಸಹನೆ, ಸಿಟ್ಟು, ಸಿಡುಕಿದ್ದರೆ ಕೂಡಲೇ ವ್ಯಕ್ತಪಡಿಸಿಬಿಡುತ್ತಿದ್ದರು. ‘ಮುಖದಲ್ಲಿ ನಗೆ ಮನದಲ್ಲಿ ಹಗೆ’ಯ ಕುತ್ಸಿತ ಭಾವ ಹೊಂದಿರಲಿಲ್ಲ. ಥಳುಕು ಬಳುಕಿನಿಂದ ಬಲು ದೂರ.

ಯಾರೇ ತಪ್ಪು ಮಾಡಿದರೂ ,’ಛೀಮಾರಿ’ ಹಾಕುತ್ತಿದ್ದರು. ವ್ಯವಸ್ಥೆಯ ಜೊತೆಗೆ ‌ರಾಜೀಯಾದವರಲ್ಲ. ಎಲ್ಲಾ ವರ್ಗದ ಬಡಜನರ, ಮಕ್ಕಳ, ಮಹಿಳೆಯರ ಮೇಲಿನ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಕುದಿಯುತ್ತಿದ್ದರು. ಹೆಂಗರುಳಿನ‌ ಅವರಲ್ಲಿ ಭಾವುಕತೆ, ಕರುಣೆ, ಅಹಿಂಸೆ, ಪರೋಪಕಾರಿ ಗುಣಗಳು ಅಪಾರವಾಗಿದ್ದವು. ನಾಡಿನ ತುಂಬಾ ಅಸಂಖ್ಯಾ ಪ್ರತಿಭಾವಂತರನ್ನು ಧರ್ಮ ಮತ್ತು ಜಾತ್ಯಾತೀತವಾಗಿ ಬೆಳೆಸಿದ್ದಾರೆ. ಇದ್ದಕ್ಕಾಗಿ ಹಲವು ಬಾರಿ ಸ್ವಜಾತಿಯವರಿಂದಲೂ ಟೀಕೆಗೆ ಒಳಗಾದದ್ದು, ಅಪಾಯಕ್ಕೆ ತುತ್ತಾದದ್ದು ಇದೆ. ಇಳಿವಯಸ್ಸಿನಲ್ಲೂ  ಕನ್ನಡದ ಕೆಲಸವೆಂದರೆ ತರುಣೋತ್ಸಾಹದಿಂದ ಭಾಗವಹಿಸುತ್ತಿದ್ದ ಅವರ ಕನ್ನಡ ಬದ್ಧತೆ ಅನುಕರಣ ಯೋಗ್ಯ. ಯಾವುದೇ ಚಳವಳಿಯಾಗಲಿ ಕರೆದರೆ ಮಾತ್ರವಲ್ಲ ಸ್ವಪ್ರೇರಿತರಾಗಿ ನೇತೃತ್ವ ವಹಿಸುತ್ತಿದ್ದರು.

  ಶ್ರೇಷ್ಠ ಶಿಕ್ಷಣ ತಜ್ಞರು, ಉತ್ತಮ ವಾಗ್ಮಿ ಮತ್ತು ಚಿಂತಕರೂ ಆಗಿದ್ದ ದೇಜಗೌ ಅವರ ವಿಚಾರ ಪ್ರಚಾರದ ದಂಡಯಾತ್ರೆ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ – ವಿದೇಶಗಳಲ್ಲಿಯೂ ತನ್ನ ಪಾರಮ್ಯತೆಯ ಸಾಧಿಸಿತ್ತು. ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ನ ಅಧ್ಯಕ್ಷ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಸಂಸ್ಥೆಯ ತುಳುನಿಘಂಟು ಸಮಿತಿಯ ಸದಸ್ಯ, ಕರ್ನಾಟಕ ಪ್ರಿ-ಯೂನಿವರ್ಸಿಟಿ ಬೋರ್ಡ್ ನ ಅಧ್ಯಕ್ಷ, ಕುರುಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಒರಿಯಂಟಲ್ ಸಮ್ಮೇಳನದ ದ್ರಾವಿಡ ವಿಭಾಗದ ಅಧ್ಯಕ್ಷತೆ, ಕಲ್ಕತ್ತಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಸಾಕ್ಷರತ ಸಮ್ಮೇಳನದ ಉದ್ಘಾಟನೆ, ಕೊಲಂಬೋದಲ್ಲಿ ನಡೆದ ವಿಶ್ವವಿದ್ಯಾನಿಲಯ ವಯಸ್ಕರ ಶಿಕ್ಷಣ ಕುರಿತ‌ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗಿ, ‘ಪುಸ್ತಕ ಪ್ರಪಂಚ’ದ ಪ್ರಧಾನ ಸಂಪಾದಕತ್ವ, ಬಸವ ಸಮಿತಿಯ ಕಾರ್ಯನಿರ್ವಾಹಕ ಸಮಿತಿಯ ಪ್ರಾರಂಭದಿಂದಲೂ ಸದಸ್ಯ, ಕನ್ನಡ ಕಾವಲು ಮತ್ತು ಗಡಿ ಸಮಿತಿಯ ಸದಸ್ಯ, ಮೈಸೂರು ವಿವಿಯ ಸಹಕಾರ ಸಂಘದ ಅಧ್ಯಕ್ಷ, ‘ಕನಕ ಸಂಪುಟ’ದ ಪ್ರಧಾನ ಸಂಪಾದಕ, ಪ್ರಾದೇಶಿಕ ಸಿನಿಮಾ ಪ್ರಾಮಾಣೀಕರಣ ಸಮಿತಿಯ ಸದಸ್ಯ,  ಡಾ.ಬಿ.ಆರ್. ಅಂಬೇಡ್ಕರ್ ಸಾಹಿತ್ಯ ಭಾಷಾಂತರ ಮಂಡಳಿಯ ಪರಿಶೀಲನಾ ಸಮಿತಿಯ ಸದಸ್ಯ, ಇಂಡೊ – ಡ್ಯಾನಿಶ್ ಸಂಸ್ಕೃತಿ ಸಂಘದ ಅಧ್ಯಕ್ಷ ಇತ್ಯಾದಿ ಜವಾಬ್ದಾರಿಯ ಹೊತ್ತು, ಯೋಜಿತ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡಿದ ದೇಜಗೌ ‘ಧೀಶಕ್ತಿ’ಗೆ ಎಣೆಯುಂಟೆ? ಇದು ‘ಕನ್ನಡದ ಶಿಖರ’.

ಎಲ್ಲಿ ನಿಂತರೂ ಕನ್ನಡದ ಹಿರಿಮೆ – ಗರಿಮೆಯ ಕಾಣಿಸುವ, ಸಾರುವ ಪ್ರಖರ ಸೂರ್ಯ. ಕನ್ನಡ ಪರಿಚಾರಿಕೆ ಮಾಡುತ್ತಲೇ ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯದ ಅನನ್ಯತೆಯ ಹಿರಿದಾಗಿಸುವ ಅನರ್ಘ್ಯ ರತ್ನ. ಬರೆಯುವ ಕಾಯಕವನ್ನು ವ್ರತದಂತೆ ಪರಿಭಾವಿಸಿದವರು ದೇಜಗೌ. ಈ ಬರವಣಿಗೆ ಜೀವ ಮತ್ತು ಜೀವನದ ಉಸಿರಾಗಿತ್ತು.   ಇವರು ಬರೆದ ಪುಸ್ತಕಗಳ ಸಂಖ್ಯೆ ದಾಖಲೆ ಸ್ಥಾಪಿಸಿವೆ. ಇವು ಪರಿಮಾಣದ ದೃಷ್ಟಿಯಿಂದ ಮಾತ್ರವಲ್ಲ, ಗುಣದ ದೃಷ್ಟಿಯಿಂದ ಸಹ ಮೌಲ್ಯ ಕಾಯ್ದುಕೊಂಡಿವೆ.  ನೇರ, ನಿಷ್ಠುರ, ದಿಟ್ಟ ನಡೆ ಮತ್ತು ನುಡಿಯ  ‘ಕನ್ನಡ ಕಾಯಕ ಯೋಗಿ’ ದೇಜಗೌ ಯಾವ ಪ್ರಶಸ್ತಿ, ಪುರಸ್ಕಾರ, ಬಿರುದು, ಪದವಿಗಳಿಗೂ ಹಾತೊರೆದವರಲ್ಲ. ಬೆನ್ನುಹತ್ತಿ ಹೋದವರಲ್ಲ. ಅಂಗಲಾಚಿದವರಲ್ಲ. ಲಾಭಿ ಮಾಡಿದವರಲ್ಲ. ಕುವೆಂಪು ದಾರಿಯಲ್ಲಿಯೇ ಸಾಗಿದವರು. ಅವರ ದಣಿವರಿಯದ ಅದ್ವೀತಿಯ ಸಾಹಿತ್ಯ ಕೃಷಿ ಮತ್ತು ಕನ್ನಡ ಕಟ್ಟುವ ಪ್ರಾಮಾಣಿಕ ಕೆಲಸಕ್ಕೆ, ಮಾಡಿದ ಅಸೀಮಾ ಸಾಧನೆಗಾಗಿ ಸಂದಾಯವಾದ ಪ್ರಶಸ್ತಿ ಮತ್ತು ಬಿರುದುಗಳು ಅಪಾರ. ಈ ಎಲ್ಲಾ ಪ್ರಶಸ್ತಿಗಳು ಅವರ ಅರಸಿ ಬಂದು ಮುಡಿಗೇರಿದವು. 

ಭಾರತ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ ಪ್ರಶಸ್ತಿ’, ಕರ್ನಾಟಕ ಸರ್ಕಾರದ ಅತ್ಯುನ್ನತ ನಾಗರಿಕ ಶ್ರೇಷ್ಠ ಪ್ರಶಸ್ತಿಯಾದ ‘ಕರ್ನಾಟಕ ರತ್ನ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕುವೆಂಪು ಭಾಷಾ ಪ್ರಾಧಿಕಾರದ ಗೌರವ ಪ್ರಶಸ್ತಿ, ತಿರುವಾಂಕೂರಿನ ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವ, ಮಾಸ್ತಿ ಪ್ರಶಸ್ತಿ, ಡಾ. ಜಚನಿ ವಿಚಾರ ಸಾಹಿತ್ಯ ಪ್ರಶಸ್ತಿ, ಅನಕೃ ನಿರ್ಮಾಣ್ ಪ್ರಶಸ್ತಿ, ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕೆ.ವಿ. ಶಂಕರಗೌಡ ಸಮಾಜ ಸೇವಾ ಪ್ರಶಸ್ತಿ,  ಬಸವ ರಾಷ್ಟ್ರೀಯ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಸೇರಿದಂತೆ ‘ಕನ್ನಡದ ಜ್ಞಾನಪೀಠ ಪ್ರಶಸ್ತಿ’ ಎಂದೇ ಕರೆಯಲ್ಪಡುವ ಕನ್ನಡ ಸಾಹಿತ್ಯ ಪರಿಷತ್ತಿನ ಅಗ್ರ ಪ್ರಶಸ್ತಿಯಾದ ಮೊಟ್ಟಮೊದಲ ‘ನೃಪತುಂಗ ಪ್ರಶಸ್ತಿ’ ದೇಜಗೌ ಅವರಿಗೆ ಲಭಿಸಿವೆ. ಕರ್ನಾಟಕ ಸರ್ಕಾರ ‘ಶತಮಾನದ ಹೊಸ್ತಿಲಲ್ಲಿ ದೇಜಗೌ’ ಎಂಬ ಸಮಾರಂಭವನ್ನು ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿ ಗೌರವಿಸಿದೆ. ಇದರಲ್ಲಿ ಮುಖ್ಯಮಂತ್ರಿ, ಇತರ ಮಂತ್ರಿಗಳು, ಡಾ. ಚೆನ್ನವೀರ ಕಣವಿ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲುಬುರ್ಗಿ, ಡಾ. ಕೆ.ಎಸ್. ನಿಸಾರ್ ಅಹಮದ್, ಡಾ. ಗುರುಲಿಂಗ ಕಾಪಸೆ ಮೊದಲಾದ ಗಣ್ಯರ ಉಪಸ್ಥಿತಿ ಇತ್ತು. ಮೈಸೂರಿಗೆ  ಆಗಮಿಸುತ್ತಿದ್ದ ಹಲವು ಮುಖ್ಯಮಂತ್ರಿಗಳು ತಮ್ಮ ಅಧಿಕಾರದವಧಿಯಲ್ಲಿ ಒಮ್ಮೆಯಾದರೂ ದೇಜಗೌ ಭೇಟಿಯಾಗುತ್ತಿದ್ದರು ಎಂಬುದು ಅವರ ವ್ಯಕ್ತಿತ್ವದ ಶಕ್ತಿಯ ಪರಿಚಯಿಸುತ್ತದೆ‌.

ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ ಕೂಡ ದೇಜಗೌ ಅವರ ಮುಡಿಗೇರಿದೆ. ಕನ್ನಡದಲ್ಲಿ ಈವರೆಗೆ ಯಾವ ಸಾಹಿತಿಗೂ ಅರ್ಪಣೆಯಾಗದಷ್ಟು ‘ಅಭಿನಂದನ ಗ್ರಂಥಗಳು’ ದೇಜಗೌ ಅವರಿಗೆ ಅರ್ಪಣೆಯಾಗಿರುವುದು ವಿಶೇಷ. ಶ್ರೀಕೃಷ್ಣ ಆಲನಹಳ್ಳಿ ಸಂಪಾದಕತ್ವದ ‘ಅಂತಃಕರಣ’, ಕೆ.ವಿ. ಶಂಕರಗೌಡ ಸಂಪಾದಕತ್ವದ ‘ರಸಷಷ್ಟಿ’, ಕವಿ ಪುತಿನ ನೇತೃತ್ವದ ಅಭಿನಂದನ ಸಮಿತಿಯ ಡಾ. ಡಿ.ಕೆ. ರಾಜೇಂದ್ರ ಮತ್ತು ಡಾ. ಹ.ಕ. ರಾಜೇಗೌಡ ಸಂಪಾದಕತ್ವದ ‘ಅಮೃತ ವರ್ಷ’, ಎಂ.ಆರ್. ಸಣ್ಣರಾಮೇಗೌಡರ ಸಂಪಾದಕತ್ವದ ‘ಎಪ್ಪತ್ತರ ಹೊಸ್ತಿಲಲ್ಲಿ ದೇಜಗೌ’, ಪ್ರೊ. ಕೆ. ಭೈರವಮೂರ್ತಿ ಸಂಪಾದಕತ್ವದ ‘ಕಾಯಕ ವಿಭೂತಿ’, ಡಾ. ಹಾ.ಮ. ನಾಯಕ ಸಂಪಾದಕತ್ವದ ‘ದೇಜಗೌ ಬದುಕು ಮತ್ತು ಬರಹ’ ಅಭಿನಂದನ ಗ್ರಂಥಗಳು ಮುಖ್ಯವಾಗಿದ್ದು, ಇವೆಲ್ಲವೂ ದೇಜಗೌ ಅವರ ಮೇಲೆ ಪ್ರೀತಿಯ ಮಳೆಗೆರೆದಿವೆ. 

ಇವಲ್ಲದೇ ‘ಅಪೂರ್ವ’, ‘ನಮ್ಮ ನಾಡೋಜ’, ‘ಪದ್ಮಶ್ರೀ ದೇಜಗೌ’, ‘ಕನ್ನಡ ಕಣ್ಮಣಿ’, ‘ಕನ್ನಡ ಸೇನಾನಿ’, ‘ಕರ್ಮಯೋಗಿ’, ‘ದೇಜಗೌ ೭೫ ಸಂದರ್ಶನ’, ‘ದೇಜಗೌ ವ್ಯಕ್ತಿ ಮತ್ತು ಕೃತಿ’, ‘ಕುಲಪತಿಯ ಸಾಧನೆಗಳು’, ‘ಗುಡಿಸಲಿನಿಂದ ಗಂಗೋತ್ರಿಗೆ’, ‘ದೇಜಗೌ ವ್ಯಕ್ತಿ – ಶಕ್ತಿ’, ಡಾ. ಮಳಲಿ ವಸಂತಕುಮಾರ್ ‌ಅವರು ಸಂಪಾದಿಸಿರುವ ‘ಕನ್ನಡ ದೀಪ’ ಎಂಎ ಕಾವ್ಯ ಗೌರವ ಕೃತಿ ಮತ್ತು ಡಾ. ಜಿ.ಎಸ್. ಭಟ್ಟರ ‘ಕರ್ನಾಟಕ ರತ್ನ ದೇ. ಜವರೇಗೌಡ’ ಕೃತಿಗಳು ದೇಜಗೌ ಅವರಿಗೆ ನಾಡು ಸಲ್ಲಿಸಿದ ಅಖಂಡ ಗೌರವ ಮತ್ತು ಪ್ರೀತ್ಯಾಭಿಮಾನದ ಪ್ರತೀಕ. ಇದಕ್ಕೆಲ್ಲ ಕಳಶವಿಟ್ಟಂತೆ ದೇಜಗೌ ಅವರ ಜೀವನ, ಸಾಹಿತ್ಯ, ಹೋರಾಟ, ಚಿಂತನೆ, ಶೈಕ್ಷಣಿಕ ವಿಚಾರಗಳನ್ನು ಕುರಿತು ನಾಲ್ಕು ಸಂಶೋಧನಾ ಪ್ರಬಂಧಗಳು ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸಲ್ಲಿಸಲ್ಪಟ್ಟು ಡಾಕ್ಟರೇಟ್ ಪದವಿ ಪಡೆದಿವೆ. 1969ರಲ್ಲಿ ‘ಪುಸ್ತಕ ಪ್ರಪಂಚ’ವು ದೇಜಗೌ ವಿಶೇಷ ಸಂಚಿಕೆಯಾಗಿ ಹೊರಬಂದಿತ್ತು. ಇದು ದೇಜಗೌ ಅವರಿಗೆ ದೊರೆತ ವಿಶೇಷ ಗೌರವ. 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1976 ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಒಲಿದಿವೆ.

ನಾಡೋಜ ಡಾ. ದೇಜಗೌ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ್ದರೂ ಕೂಡ ಕುಟುಂಬವ ನಿರ್ಲಕ್ಷಿಸದೆ, ಅದರ ತುಂಬು ಪ್ರೀತಿಯ ಸವಿ ಸವಿದವರು. ಸಾವಿತ್ರಮ್ಮ ಅವರು ದೇಜಗೌ ಅವರ ಶ್ರೀಮತಿ. ಅಂತಃಕರಣವುಳ್ಳ ಸುಸಂಸ್ಕೃತ ವ್ಯಕ್ತಿತ್ವದವರು. ದೇಜಗೌ ಜೊತೆಗೆ ಅನೋನ್ಯ ದಾಂಪತ್ಯ ಜೀವನ ನಡೆಸುತ್ತ, ಕೌಟುಂಬಿಕ ಜವಾಬ್ದಾರಿಯ ಹೊತ್ತು ಎಲ್ಲವನ್ನೂ ಸಂಭಾಳಿಸಿದ ಕುಶಾಗ್ರಮತಿ. ದೇಜಗೌ ಅವರ ಅಖಂಡ ಸಾಧನೆಯ ‘ಬೆನ್ನ‌ ಹಿಂದಿನ ಬೆಳಕು’ ಸಾವಿತ್ರಮ್ಮ. ಯಾವಾಗಲೂ ದೇಜಗೌ ಸಾವಿತ್ರಮ್ಮ ಅವರನ್ನು “ನನ್ನ ಮಹಾತಾಯಿ” ಎಂದು ಸ್ಮರಿಸುತ್ತಿದ್ದರು. ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ಅಪಾರ ನೋವು ಅನುಭವಿಸಿದರು. ಅವರ ಅಗಲಿಕೆ ಸೃಷ್ಟಿಸಿದ ಶೂನ್ಯತೆ ಕಾಡಿದ ಪರಿಗೆ ದುಃಖದ ಕಡಲಿನಲ್ಲಿ ದೇಜಗೌ ಕೆಲಕಾಲ ಮುಳುಗಿಹೋಗಿದ್ದರು. ಅದು ಹೇಗೋ ಸಾವರಿಸಿಕೊಂಡು ಮತ್ತೆ ಜೀವನ್ಮುಖಿಯಾದರು. ಸಾವಿತ್ರಮ್ಮ ಅವರನ್ನು ಅಪಾರವಾಗಿ ಪ್ರೀತಿಸಿ ಆರಾಧಿಸುತ್ತಿದ್ದ ದೇಜಗೌ, ಅವರ ನೆನೆದು ಆಗಾಗ ಕಣ್ಣೀರಾಗುತ್ತಿದ್ದರು.

ಅವರ ನೆನಪಿನಲ್ಲಿ ಪ್ರಶಸ್ತಿ ಸ್ಥಾಪಿಸಿದ ದೇಜಗೌ, ಪ್ರತಿ ವರ್ಷ ಸಾಧಕ ಮಹಿಳೆಯೋರ್ವರಿಗೆ ತಮ್ಮ ಟ್ರಸ್ಟ್ ವತಿಯಿಂದ ಗೌರವಿಸುವ ಮೂಲಕ ಆದರ್ಶವಾದ ಮಾದರಿಯೊಂದನ್ನು ಸಮಾಜಕ್ಕೆ ನೀಡಿದರು. ಶ್ರೀಮತಿ ಸಾವಿತ್ರಮ್ಮ ಅವರು ನಿಧನರಾದ ದಿನವೇ, ಅಂದರೆ 2016 ಮೇ 30 ರಂದು ನಿಧನರಾದರು. ಅವರ ಅದ್ವಿತೀಯ ಸಾಧನೆಯ ಹೆಜ್ಜೆ ಗುರುತುಗಳನ್ನು ಜನಮಾನಸದಲ್ಲಿ ಮೂಡಿಸಿರುವ ದೇಜಗೌ ನಿತ್ಯ ಸ್ಮರಣೀಯರು. ಇವರ ಮಗ ಪ್ರೊ. ಜೆ. ಶಶಿಧರ್ ಪ್ರಸಾದ್ ಅವರು‌ ಮೈಸೂರು ವಿಶ್ವವಿದ್ಯಾನಿಲಯದ ‌ಕುಲಪತಿಯಾಗಿ ಕಾರ್ಯನಿರ್ಹಿಸಿದ್ದು ಗಮನಾರ್ಹ. ತಂದೆ ಮತ್ತು ಮಗ ಇಬ್ಬರೂ ಒಂದೇ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಅಲಂಕರಿಸಿದ್ದು ದೇಶದ ಯಾವ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇಲ್ಲ ಎಂಬುದು ವಿಶೇಷ.

ಕನ್ನಡ ನಾಡು ಕಂಡ ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ದಿಗ್ಗಜರೂ ಅಸೀಮಾ ದೈತ್ಯ ಪ್ರತಿಭಾಸಂಪನ್ನಶೀಲರೂ ಮಹಾಮೇಧಾವಿ ವಿದ್ವಾಂಸರೂ ಆದಂತಹ ನಾಡೋಜ ಡಾ. ದೇಜಗೌ ಅವರ ಜೊತೆಗೆ ನನ್ನ ಒಡನಾಟ ಬರೋಬ್ಬರಿ ಒಂದೂವರೆ ದಶಕದ್ದು. ನನ್ನ ‘ಕುಹೂ ಕುಹೂ ಕೋಗಿಲೆ’ ಮಕ್ಕಳ ಕವನ ಚೊಚ್ಚಲ ಸಂಕಲನಕ್ಕೆ ಶುಭ ಹಾರೈಕೆ ನುಡಿ ಬರೆದ್ದು ಆಶೀರ್ವಾದಿಸಿದ್ದರು. ಅವರು ಕಾಲವಾಗುವ ಕೆಲವು ತಿಂಗಳುಗಳ ಮುನ್ನ ‘ದಿವ್ಯ ದೀವಿಗೆ’ ಹನಿಗವಿತೆಗಳ ಸಂಕಲನಕ್ಕೂ ಮುನ್ನುಡಿ ಬರೆದಿದ್ದಾರೆ. ಇದು ಅವರ ಜೀವಿತಾವಧಿಯ ಕೊನೆಯ ಮುನ್ನುಡಿ. ನನ್ನ ‘ಜೀವನ್ಮುಖಿ’ ಕೃತಿ ಮತ್ತು ನನ್ನ ಅಣ್ಣ ಟಿ. ಸುರೇಶ್ ಅವರ ಸಂಪಾದಕತ್ವದ ‘ಜೀವನ್ಮುಖಿ’ ಪತ್ರಿಕೆಯ ಲೋಕಾರ್ಪಣೆ ಮಾಡಿದ್ದು ನಮ್ಮ ಬದುಕಿನ ಪುಣ್ಯ. ಜೊತೆಗೆ ನನ್ನ ಅಣ್ಣ ಸ್ಥಾಪಿಸಿರುವ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ನೆರವೇರಿಸಿದ್ದು ದೇಜಗೌ ಅವರೇ.

ಈಗ ನಮ್ಮ ಪತ್ರಿಕೆ ಮತ್ತು ವೇದಿಕೆಗೆ ದಶಮಾನೋತ್ಸವದ ಸಂಭ್ರಮ. ಈ ಹೊತ್ತಿನಲ್ಲಿ ಅವರ ಇಲಗಕದುರುವಿಕೆ ಕಾಡುತ್ತದೆ. ನನ್ನ ಜೀವನ, ವೃತ್ತಿ , ಸಾಹಿತ್ಯ ಮತ್ತು ಸಂಘಟನೆಯ ಮೇಲೆ ಅವರ ಪ್ರಭಾವ ವರ್ಣನಾತೀತ. ನನ್ನಂತಹ ಸಾವಿರಾರು ಯುವ ಬರಹಗಾರರ ಪ್ರೊತ್ಸಾಹಿಸಿ ಬೆಳೆಸಿದ್ದಾರೆ. ನಾನು ಸಂಘಟಿಸುವ ಯಾವುದೇ ಸಾಹಿತ್ಯದ  ಕಾರ್ಯಕ್ರಮಕ್ಕಾದರೂ ಯಾವುದೇ ಸಬೂಬು ಹೇಳದೆ ಬಂದು ನನ್ನ ಕನ್ನಡ ಕೆಲಸಗಳಲ್ಲಿ ಭಾಗಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿ ಹುರಿದುಂಬಿಸುತ್ತಿದ್ದ ಬಗ್ಗೆ ನನ್ನೊಳಗೆ ಹಸಿರಾಗಿದೆ. ನನ್ನ ‘ಮಾನಸಿಕ ಗುರು’ವಾಗಿರುವ ದೇಜಗೌ ಕನ್ನಡ ಕಟ್ಟುವ ನನ್ನ ಬದ್ದತೆಗೆ ಮಹಾಮಾರ್ಗ. ಕನ್ನಡ ಸ್ನಾತಕೋತ್ತರ ಪದವಿ ಪಡೆದ ಮೇಲೆ ಉನ್ನತ ವ್ಯಾಸಂಗ ಸ್ಥಗಿತಗೊಳಿಸಿದ್ದ ನಾನು, ಇಂದು ಪಿಎಚ್.ಡಿ. ಮಾಡಲು ಕಾರಣಕರ್ತರು ದೇಜಗೌ ಎಂಬುದು ಅಭಿಮಾನದ ವಿಷಯ. ದೇಜಗೌ ಜೊತೆಗೆ ಸನ್ಮಾನಿತರಾಗುವ ಅದೃಷ್ಟ ನನ್ನ ಪಾಲಿಗೊಮ್ಮೆ ಸಿಕ್ಕಿದ್ದು ಮಾತ್ರವಲ್ಲದೇ, ಅವರಿಂದಲೂ ಸನ್ಮಾನಿತರಾಗಿರುವ ಭುವನದ ಭಾಗ್ಯ ಹಲವು ಬಾರಿ ಒದಗಿಬಂದದ್ದನ್ನು ಎಂದೂ ಮರೆಯಲಾಗದು. ಅವರ ಜೊತೆಗಿನ ಆಪ್ತವಾದ ಒಡನಾಟ ಮನದಲ್ಲಿ ಸದಾಕಾಲವೂ ಹಸಿರಾಗಿದೆ. ‘ನನ್ನೊಳಗಿನ ದೇಜಗೌ’ ಸದಾ ಅಮರ, ಅಜರಾಮರ.

Leave a Reply

Your email address will not be published. Required fields are marked *