ಮೈಸೂರು, ಆಗಸ್ಟ್. 07. :- ಕೋವಿಡ್ 3ನೇ ಅಲೆ ಬಂದರೂ ಜಿಲ್ಲಾಡಳಿತ ಅದನ್ನು ಎದುರಿಸುವ ಸಲುವಾಗಿ ಹಲವಾರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಶನಿವಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸಂಭಾವ್ಯ ಕೋವಿಡ್ 3ನೇ ಅಲೆಯು ಮಕ್ಕಳಿಗೆ ಕಾಣಿಸಿಕೊಳ್ಳುತ್ತದೆ ಎಂಬ ತಜ್ಞರ ಸಲಹೆಯಂತೆ ಚೆಲುವಾಂಬ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮಕ್ಕಳಿಗಾಗಿ ಮೀಸಲಿಡಲಾಗಿದೆ ಎಂದರು.

ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸಲು ಸರ್ಕಾರವು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಕೋವಿಡ್ ಬಗ್ಗೆ ಜನರಿಗೆ ಮಾಧ್ಯಮದ ಮುಖಾಂತರ ಜಾಗೃತಿಯನ್ನು ವೈದ್ಯಾಧಿಕಾರಿಗಳು ಮೂಡಿಸುತ್ತಿದ್ದಾರೆ. ಜನರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಮೈಸೂರು ಜನತೆ ಕೋವಿಡ್ ಮೊದಲ ಅಲೆಯಲ್ಲಿ ಹಾಗೂ ಎರಡನೆ ಅಲೆಯಲ್ಲಿ ಸರ್ಕಾರದ ನಿಯಮಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಹೆಚ್ಚು ಜನರು ಸಣ್ಣ ಜ್ವರ ಕಾಣಿಸಿಕೊಂಡರೂ ಭಯದಿಂದ ಕೂಡಲೇ ಆಕ್ಸಿಜನ್ ಬೆಡ್, ರೆಮ್ಡಿಸಿವಿರ್ ಔಷಧಿ ಕೇಳುತ್ತಿದ್ದರು. ಹೀಗಾಗಿ ಅವರ ಭಯವನ್ನು ಕಡಿಮೆ ಮಾಡುವ ಕೆಲಸವಾಗಬೇಕು ಎಂದರು.
ಮೈಸೂರು ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ಶೇ.80ರಷ್ಟು ಲಸಿಕೆ ನೀಡಲಾಗಿದೆ. ಶೇ.100 ರಷ್ಟು ಲಸಿಕೆಯನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 5 ಸಾವಿರ ಕೋವಿಡ್ ಪ್ರಕರಣಗಳು ಒಟ್ಟಿಗೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲೆಯ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಅಕ್ಕಪಕ್ಕದ ರಾಜ್ಯದ ಜನರಿಂದ ಕೋವಿಡ್ ಹೆಚ್ಚಾಗಬಾರದೆಂಬ ಕಾರಣದಿಂದ ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರುವ ಮೂಲಕ ಜಿಲ್ಲೆಯೊಳಗೆ ಬರಬೇಕಿದೆ. ನಾವೆಲ್ಲರೂ ಸರ್ಕಾರದ ಒಂದು ಭಾಗವಾಗಿದ್ದು, ವಿಕೆಂಡ್ ಕರ್ಫ್ಯೂ ಅನ್ನು ಅಂಗಡಿಯವರು ಪಾಲಿಸಲೇಬೇಕು. ನಾವೆಲ್ಲ ಸರ್ಕಾರದ ಭಾಗವಾಗಿರುವುದರಿಂದ ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಹೆಚ್.ಪಿ.ಮಂಜುನಾಥ್, ಎಲ್. ನಾಗೇಂದ್ರ, ಹರ್ಷವರ್ಧನ್, ವಿಧಾನ ಪರಿಷತ್ತಿನ ಸದಸ್ಯ ಸಂದೇಶ್ ನಾಗರಾಜ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಪ್ರಭಾರ ಮಹಾಪೌರರಾದ ಅನ್ವರ್ ಬೇಗ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.