ಮೈಸೂರು: ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಜನ ಬೆಚ್ಚಿಬಿದ್ದಿದ್ದ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರಲ್ಲಿ ಒಬ್ಬ (17 ವರ್ಷ) ಅಪ್ರಾಪ್ತನು ಇರುವುದಾಗಿ ಡಿಜಿಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೆಲವೊಂದು ಮಾಹಿತಿ ನೀಡಿದ ಅವರು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಪೊಲೀಸರು ಟೆಕ್ನಿಕಲ್, ಸೈಂಟಿಫಿಕ್ ಸಾಕ್ಷ್ಯ ಗಳ ಮೂಲಕ ಪತ್ತೆಹಚ್ಚಿದ್ದು, ಪ್ರಕರಣ ಭೇದಿಸಿದ ಪೊಲೀಸರಿಗೆ ಐದು ಲಕ್ಷ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಬಂಧಿತರು ಕಾರ್ಪೆಂಟರಿ, ವೈರಿಂಗ್ ಮೊದಲಾದ ಕೆಲಸ ಮಾಡುತ್ತಿದ್ದು, ಯಾವುದೇ ಕಾಲೇಜು ವಿದ್ಯಾರ್ಥಿಗಳಲ್ಲ. ಅವರು ತಮಿಳುನಾಡಿನ ತಿರಪೂರಿನವರಾಗಿದ್ದು, ಕೆಲವರು ಕ್ರಿಮಿನಲ್ ಚಟುವಟಿಕೆ ಹೊಂದಿದವರಾಗಿದ್ದಾರೆ. ತಮಿಳುನಾಡಿನಿಂದ ತರಕಾರಿ ಕೊಂಡೊಯ್ಯಲು ಮೈಸೂರಿನ ಬಂಡೀಪಾಳ್ಯಕ್ಕೆ ಬರುತ್ತಿದ್ದ ಡ್ರೈವರ್ ಜತೆಗೆ ಇವರು ತರಕಾರಿ ಕೊಂಡೊಯ್ಯಲು ಬರುತ್ತಿದ್ದರು. ಹೀಗೆ ಬಂದವರು ಚಾಮುಂಡಿಬೆಟ್ಟ ತಪ್ಪಲಿನ ಲಲಿತಾದ್ರಿ ಪುರದ ಬಳಿಯ ನಿರ್ಜನ ಪ್ರದೇಶದಲ್ಲಿ ಹೆಂಡ ಸೇವಿಸಿ ಪಾರ್ಟಿ ಮಾಡಿ ಹೋಗುತ್ತಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕಾಮುಕರು ಈ ಹಿಂದೆ ಮೈಸೂರಿಗೆ ಬಂದಾಗ ಪಾರ್ಟಿ ಮಾಡುತ್ತಿದ್ದಂತೆ ಅಂದು ಅಂದರೆ ಆ.24ರಂದು ಮಂಗಳವಾರ ಚಾಮುಂಡಿಬೆಟ್ಟ ತಪ್ಪಲಿನ ಲಲಿತಾದ್ರಿ ಪುರದ ಬಳಿಯ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಸೇವಿಸುತ್ತಾ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ಅಂದರೆ ರಾತ್ರಿ 7.30ರಿಂದ 8 ಗಂಟೆ ಅವಧಿಯಲ್ಲಿ ಮುಂಬೈ ಮೂಲದ ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಆ ಪ್ರದೇಶದ ಮೋರಿ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದನ್ನು ನೋಡಿದ ಕಾಮುಕರು ಮೊದಲೇ ಮದ್ಯ ಸೇವಿಸಿ ಅಮಲಿನಲ್ಲಿದ್ದರು. ಹೀಗಾಗಿ ವಿದ್ಯಾರ್ಥಿನಿ ಬಳಿ ತೆರಳಿ ಆಕೆಯ ಗೆಳೆಯನಿಗೆ ಥಳಿಸಿ ಸಾಮೂಹಿಕ ಅತ್ಯಾಚಾರ ಎಸಗಿ ತಮಿಳುನಾಡಿಗೆ ಎಸ್ಕೇಪ್ ಆಗಿದ್ದರು.
ಸಂತ್ರಸ್ಥೆ ಮತ್ತು ಆಕೆಯ ಗೆಳೆಯ ಆ ನಂತರ ಬಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಸಂತ್ರಸ್ಥೆಯಿಂದ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಆಕೆಯ ಸ್ನೇಹಿತ ನೀಡಿದ ಒಂದಷ್ಟು ಮಾಹಿತಿಯನ್ನು ಆದರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕೊನೆಗೂ ಆರೋಪಿಗಳನ್ನು ಬಂಧಿಸಿರುವುದು ಜನ ನೆಮ್ಮದಿಯುಸಿರು ಬಿಡುವಂತೆ ಮಾಡಿದೆ.
ಬಹುಶಃ ಕಾಮುಕರು ಈ ಹಿಂದೆಯೂ ಇಂತಹ ದುಷ್ಕೃತ್ಯ ಎಸಗಿದ್ದರಾ ಎಂಬುದು ಕೂಡ ಪೊಲೀಸರ ಇನ್ನಷ್ಟು ತನಿಖೆಯಿಂದ ಹೊರಬರಬೇಕಾಗಿದೆ. ಎಲ್ಲಿಂದಲೋ ಬಂದವರು ಮಾಡಿದ ಕೃತ್ಯದಿಂದ ಮೈಸೂರಿಗೆ ಕೆಟ್ಟ ಹೆಸರು ಬಂದಿದ್ದು, ಅತ್ಯಾಚಾರಿಗಳ ವಿರುದ್ಧ ಕಠಿಣ ಶಿಕ್ಷೆಗೆ ಆಗ್ರಹಗಳು ಕೇಳಿ ಬಂದಿವೆ.