ಮೈಸೂರು: ಕೆಆರ್ ಎಸ್ ಅಣೆಕಟ್ಟೆ ಸುರಕ್ಷತೆ ಮತ್ತು ರೈತರ ಹಿತದೃಷ್ಟಿಯಿಂದ ಅಣೆಕಟ್ಟೆ ಸುತ್ತಲಿನ ಪ್ರದೇಶದ ಎಲ್ಲ ರೀತಿಯ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಮಹಿಳಾ ಅಭಿವೃದ್ಧಿ ನಿಗಮ ನಿರ್ದೇಶಕಿ ಎಸ್.ರೇಣುಕಾರಾಜು ಆಗ್ರಹಿಸಿದ್ದಾರೆ.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಅಮೃತ ಮಹಲ್ ಕಾವಲ್ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದ್ದು, ಬಿರುಕು ಬಿಟ್ಟಿದೆ ಎಂಬ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಬಾರದು. ಮೈಸೂರು ಮಹಾರಾಜರು ಅರಮನೆಯ ಒಡವೆ ಹರಾಜು ಮಾಡಿ ನಿರ್ಮಿಸಿದ ಅಣೆಕಟ್ಟೆ ಹಳೇ ಮೈಸೂರು ಪ್ರಾಂತ್ಯದ ರೈತರ ಜೀವನಾಡಿಯಾಗಿದೆ. ಇದಕ್ಕೆ ಅಪಾಯವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಣಿಗಾರಿಕೆಯಿಂದ ಅಣೆಕಟ್ಟೆ ಎದುರಾಗಬಹುದಾದ ಸಾಧಕ ಭಾಧಕಗಳನ್ನು ಕೇಂದ್ರ ಭೂ ಗರ್ಭ ತಜ್ಞರಿಂದ ಪರಿಶೀಲನೆಗೆ ಒಳಪಡಿಸಿ ಸರ್ಕಾರ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತಿರುವ ಕನ್ನಂಬಾಡಿ ಅಣೆಕಟ್ಟೆ ಸುರಕ್ಷತೆ ವಿಚಾರದಲ್ಲಿ ಅಸಡ್ಡೆ ಒಳ್ಳೆಯದಲ್ಲ. ಸ್ಥಳೀಯ ಶಾಸಕರುಗಳೇ ಅಕ್ರಮ ಗಣಿಗಾರಿಕೆಯ ಪಾಲುದಾರರು ಎಂಬ ಆರೋಪಗಳು ಕೇಳಿಬಂದಿವೆ. ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕು.
ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕೇಳಿ ಬಂದ ನಿಗೂಢ ಶಬ್ಧ ಹಾಗೂ ಅದರ ತೀವ್ರತೆಗೆ ಭೂ ಕಂಪನದ ಅನುಭವವಾಗಿ ಅಣೆಕಟ್ಟೆಯ ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ ದಾಖಲಾಗಿತ್ತು. ಆ ನಂತರವು ಎರಡ್ಮೂರಿ ಬಾರಿ ಇದೇ ರೀತಿಯ ಅನುಭವವಾಗಿದೆ. ಗಣಿಗಾರಿಕೆಯಿಂದ ಸಂಭವಿಸಬಹುದಾದ ಅಪಾಯವನ್ನು ಅರಿತು ಸಂಪೂರ್ಣ ನಿಷೇಧ ಹೇರಬೇಕು. ಈ ಬಗ್ಗೆ ಕ್ರಮಕೈಗೊಳ್ಳದೆ ಮೀನಾ ಮೇಷ ಎಣಿಸಿದರೆ ಲಕ್ಷಾಂತರ ರೈತರ ಬದುಕು ಬೀದಿಪಾಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಆಲೋಚಿಸಬೇಕು. ಕೇವಲ ವೈಯಕ್ತಿಕ ಲಾಭಕ್ಕಾಗಿ ಜನರ ಬದುಕಿನ ಜತೆ ಚೆಲ್ಲಾಟವಾಡಬಾರದು ಎಂದು ಹೇಳಿದ್ದಾರೆ.