ಮೈಸೂರು: ಹೊರಗಿನ ಜಿಟಿ ಜಿಟಿ ಮಳೆಗೆ ಒಳಗೆ ಗುಜರಾತಿ ಖಾದ್ಯಗಳನ್ನು ಸವಿಯುತ್ತಾ ಕರಕುಶಲ ಕರ್ಮಿಗಳು ತಯಾರಿಸಿದ ಕುಶಲ ವಸ್ತು, ನೇಯ್ದ ಸೀರೆ ಸೇರಿದಂತೆ ವಿವಿಧ ಉಡುಪುಗಳ ಸೌಂದರ್ಯ ಸವಿಯಲೆಂದೇ ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಗುಜರಾತ್ ಕರಕುಶಲ ಉತ್ಸವ ಆರಂಭಿಸಲಾಗಿದೆ.

ಜುಲೈ 18ರಿಂದ 25ರವರರೆಗೆ ನಡೆಯಲಿರುವ ಈ ಉತ್ಸವ ಈ ಹಿಂದೆ ನಡೆಯುತ್ತಿದ್ದವುಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇಲ್ಲಿಗೊಂದು ಸುತ್ತು ಹೊಡೆದರೆ, ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್ಗಳು, ಕುಶನ್ ಕವರ್ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು ಗಮನಸೆಳೆಯುತ್ತವೆ.

ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾ ಶೀಲರಾಗಿರುವ ಸುಮಾರು 50ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ ದೊರೆಯಲಿದೆ.

ಇನ್ನು ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೋರೇಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ಈ ಮೇಳದ ಸಂದರ್ಭದಲ್ಲಿ ನೀಡಲಿದ್ದಾರೆ. ಒಟ್ಟಾರೆ ಈ ಬಾರಿಯ ಗುಜರಾತ್ ಕರಕುಶಲ ಉತ್ಸವ ಗಮನಾರ್ಹವಾಗಿರುವುದಂತು ಸತ್ಯ.
