ಬೇಲೂರು: ಕಿಡಿಗೇಡಿಗಳು ಸುಮಾರು ಐವತ್ತಕ್ಕೂ ಹೆಚ್ಚು ಮಂಗಗಳನ್ನು ಸಾಯಿಸಿ ಚೀಲದಲ್ಲಿ ತಂದು ಬಿಕ್ಕೋಡು ಹೋಬಳಿ ಚೌಡನಹಳ್ಳಿ ಗ್ರಾಮದ ಬಳಿ ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಈ ಮಂಗಗಳನ್ನು ವಿಷಾಹಾರ ನೀಡಿ ಸಾಯಿಸಿ ಬಳಿಕ ಗೋಣಿ ಚೀಲಗಳಲ್ಲಿ ತುಂಬಿಸಿ ತಂದು ಇಲ್ಲಿ ಎಸೆದು ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಎಂದಿನಂತೆ ಚೌಡನಹಳ್ಳಿ ಗ್ರಾಮದ ಬಳಿ ತೆರಳುತ್ತಿದ್ದ ಗ್ರಾಮದ ಯುವಕರಿಗೆ ರಸ್ತೆ ಬದಿಯಲ್ಲಿ ಗೋಣಿಚೀಲಗಳ ರಾಶಿ ಕಾಣಿಸಿದೆ. ಅಲ್ಲದೆ ಅದರೊಳಗಿನಿಂದ ಕೀರಲು ಧ್ವನಿಯೂ ಕೇಳಿಸಿದೆ. ಹಾಗಾಗಿ ಕುತೂಹಲದಿಂದ ಚೀಲಗಳನ್ನು ಬಿಚ್ಚಿ ನೋಡಿದ್ದಾರೆ. ಒಳಗೆ ಸತ್ತ ಮಂಗಗಳು ಕಾಣಿಸಿದೆ ಎಲ್ಲವನ್ನು ಎಳೆದು ರಾಶಿ ಹಾಕಿದ ವೇಳೆ ಕೆಲವು ಉಸಿರಾಡುತ್ತಿರುವುದು ಕಂಡು ಬಂದಿದೆ. ಅವುಗಳಿಗೆ ನೀರು ಕುಡಿಸಿ ರಕ್ಷಿಸುವ ಕೆಲಸ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರು ಸತ್ತ ಮಂಗದ ಕಳೇಬರ ಹಾಗೂ ಜೀವಂತ ಉಳಿದ ಮಂಗವನ್ನು ಪಶು ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷೆಗೊಳಪಡಿಸಿದ್ದಾರೆ. ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ಈ ಕೃತ್ಯಕ್ಕೆ ಕಾರಣವೇನು? ವಿಷಹಾರ ನೀಡಿ ಸಾಯಿಸಲಾಗಿದೆಯೇ ಅಥವಾ ಹೊಡೆದು ಸಾಯಿಸಿ ತಂದು ಎಸೆಯಲಾಗಿದೆಯಾ ಎಂಬುದರ ಬಗ್ಗೆ ತಿಳಿದು ಬರಬೇಕಾಗಿದೆ.