ಕೋವಿಡ್ 19ರ ಸಂದರ್ಭದಲ್ಲಿ ಬಹಳಷ್ಟು ಸಂಕಷ್ಟಕ್ಕೆ ಒಳಗಾದ ಉದ್ಯಮವೆಂದರೆ ಅದು ಹೋಟೆಲ್ ಉದ್ಯಮ. ಇಂದು ಎಲ್ಲಾ ಹೋಟೆಲ್ ಉದ್ಯಮಿಗಳ, ಮಾಲೀಕರ ಪರವಾಗಿ ಲೇಖಕಿ, ಕಲಾವಿದೆ ಹಾಗೂ ಹೋಟೇಲ್ ಉದ್ಯಮಿಯೂ ಆಗಿರುವ ಡಾ. ಶ್ವೇತಾ ಮಡಪ್ಪಾಡಿ ಅವರು ಹೋಟೆಲ್ ಉದ್ಯಮಿಗಳ ಸಂಕಷ್ಟವನ್ನು ತೆರೆದಿಟ್ಟಿದ್ದಾರೆ.
ಹೋಟೆಲ್ನಂಥ ಚಾಲೆಂಜಿಂಗ್ ಟಾಸ್ಕ್ಗಳಿಗೆ ಕೈಹಾಕುವುದಕ್ಕೆ ನನ್ನಂಥ ಹೆಣ್ಣುಮಕ್ಕಳು, ಹೊಸ ತಲೆಮಾರಿನ ಯುವ ಜನಾಂಗ ಮುಂದೆ ಬರಬೇಕಾದರೆ ಪ್ರೋತ್ಸಾಹ ಅತೀ ಮುಖ್ಯ. ಸರಕಾರದ ಕೆಲಸ ಸಿಗಬಹುದಾದರೂ ಅದರಿಂದ ವಂಚಿತಳಾಗಿ ಹೋಟೆಲ್ ಉದ್ಯಮವನ್ನು ಆಯ್ಕೆ ಮಾಡಿ ಪತಿಯೊಂದಿಗೆ ಆರಂಭಿಸಿ ಯಶಸ್ಸು ಕಂಡವಳು ನಾನು. ನಮ್ಮ ಕೆಫೆ ಆರಂಭವಾದ ಮೇಲೆ ಹಲವು ಸಣ್ಣ-ಸಣ್ಣ ಹೋಟೇಲ್ ಗಳು ಬಹಳ ದೊಡ್ಡ ಪ್ರಮಾಣದಲ್ಲಿ ಮೈಸೂರಿನಲ್ಲಿ ಆರಂಭಗೊಂಡವು. ಅಂದರೆ ಒಂದು ಯಶಸ್ಸಿಗೆ ಮತ್ತಷ್ಟು ಹೊಸದನ್ನು ಸೃಷ್ಟಿಸುವ ಶಕ್ತಿಯಿದೆ. ಆದರೆ ಕೋವಿಡ್ 19 ಹಾಗೂ ಸರಕಾರ ಅದಕ್ಕಾಗಿ ತೆಗೆದುಕೊಂಡ ಲಾಕ್ಡೌನ್ನಂಥ ನಿರ್ಧಾರಗಳು ನೂರಾರು ಹೋಟೆಲ್ ಗಳನ್ನು ಇಂದು ಪೂರ್ಣಪ್ರಮಾಣದಲ್ಲಿ ಮುಚ್ಚಿಹಾಕಿವೆ.
ಅತ್ಯಂತ ಬಡತನದಲ್ಲಿ ಇರುವ, ಕಡಿಮೆ ಶಿಕ್ಷಣ ಮಟ್ಟವನ್ನು ಹೊಂದಿರುವ, ಹಲವು ಸಂದರ್ಭಗಳಲ್ಲಿ ಅನಕ್ಷರಸ್ಥ ಜನರಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ಹೋಟೆಲ್ಗಳು ಉದ್ಯೋಗ ಕೊಟ್ಟಿವೆ. ರೈತರು ಬೆಳೆಯುವ ತರಕಾರಿ, ಹಣ್ಣು, ಹಾಲು ಮೊದಲಾದವುಗಳನ್ನು ಬಹಳ ದೊಡ್ಡ ಮಟ್ಟದಲ್ಲಿ ಖರೀದಿಸಿ ಪ್ರೋತ್ಸಾಹಿಸುವ ಉದ್ಯಮವಿದು. ಸರ್ಕಾರ ನಿರ್ವಹಿಸಬೇಕಾದ ಸಾರ್ವಜನಿಕ ಜವಾಬ್ದಾರಿಗಳನ್ನು ಹೋಟೆಲ್ಗಳು ಅದರಲ್ಲೂ ಉಪಹಾರ ಮಂದಿರ(ದರ್ಶಿನಿ)ಗಳು, ರೆಸ್ಟೋರೆಂಟ್ ಗಳು ನಿಭಾಯಿಸುತ್ತವೆ. ಉದಾಹರಣೆಗೆ ಕೇವಲ ಗ್ರಾಹಕರಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೆ ಕೂಡ ಕುಡಿಯುವ ನೀರು, ಶೌಚಾಲಯ, ಮೊದಲಾದವನ್ನು ಉಚಿತವಾಗಿ ಒದಗಿಸಿಕೊಡುತ್ತವೆ. ಚಳಿಗಾಲ ಮಳೆಗಾಲದಲ್ಲಿ ಬೆಚ್ಚಗಿನ, ಬೇಸಿಗೆಯಲ್ಲಿ ತಣ್ಣಗಿನ ನೀರನ್ನು ಯಾರೇ ಬಂದು ಕೇಳಿದರೂ ಇಲ್ಲಿ ನೀಡಲಾಗುತ್ತದೆ.
ಗ್ರಾಹಕರಿಗಂತೂ ಆರಂಭದಲ್ಲಿ ನೀರು ಕೊಟ್ಟೇ ಸತ್ಕರಿಸುವ ಪರಂಪರೆ ಬಹುಹಿಂದಿನಿಂದಲೂ ನಮ್ಮ ಹೋಟೆಲುಗಳಲ್ಲಿ ನಡೆದು ಬಂದಿದೆ. ಇಷ್ಟು ಸಮಾಜಸ್ನೇಹಿ, ಜನಸ್ನೇಹಿ ಉದ್ಯಮದ ಕುರಿತು ಸರಕಾರ ಒಂದಿನಿತೂ ಗಮನಹರಿಸದೇ, ತನಗೆ ಬೇಕಾದಂತೆ ನಿಯಮಗಳನ್ನು ಜಾರಿಗೆ ತರುವ ಮೂಲಕ ಈ ಉದ್ಯಮವನ್ನು ಸಂಕಷ್ಟಕ್ಕೆ ಒಳಗುಮಾಡಿರುವುದು ಅತ್ಯಂತ ನೋವಿನ ಸಂಗತಿ.

ಈ ದೇಶದಲ್ಲಿ ಬಹು ತಳಸಮುದಾಯ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ನೀಡಿದರೂ ಇಂದು ಕೋವಿಡ್ 19ರ ಕಾರಣದಿಂದ ಇತರ ಎಲ್ಲಾ ಉದ್ಯಮಗಳಿಗಿಂತ ಹೆಚ್ಚು ದುಷ್ಪರಿಣಾಮಕ್ಕೊಳಗಾಗಿರುವ ಉದ್ದಿಮೆಯೆಂದರೆ ಅದು ಹೋಟೇಲ್ ಉದ್ಯಮ. ಇದಕ್ಕೆ ಬಹುಮುಖ್ಯ ಕಾರಣ ಸರಕಾರದ ನಿರ್ಲಕ್ಷಿತ ನಿಲುವು.ಸರಕಾರವು ಇಂದು ಯಾವುದೇ ಬಗೆಯ ಕಾಳಜಿಯನ್ನೂ ಹೋಟೆಲ್ ಉದ್ಯಮದ ಕುರಿತು ಹೊಂದಿಲ್ಲ. ಹೋಟೆಲ್ ಕಾರ್ಮಿಕರಿಗಾಗಿ ಸರಕಾರ ಯಾವ ಕ್ರಮವನ್ನು ಕೂಡ ಕೈಗೊಂಡಿಲ್ಲ. ಹೋಟೆಲ್ ಕಾರ್ಮಿಕರ ಸ್ಥಿತಿ ದಯನೀಯ ಹಂತಕ್ಕೆ ತಲುಪಿದೆ. ಮಾಲೀಕರಿಗೆ ಬಿದ್ದಿರುವ ಆರ್ಥಿಕ ಹೊಡೆತದಿಂದ ಮಾಲೀಕರೇ ಕಾರ್ಮಿಕರನ್ನು ನೋಡಿಕೊಳ್ಳಲಾರದ ಸ್ಥಿತಿಯನ್ನು ತಲುಪಿದ್ದಾರೆ. ಮೈಸೂರಿನಲ್ಲೇ ನೂರಾರು ಸಂಖ್ಯೆಯಲ್ಲಿ ಹೋಟೆಲ್ಗಳು ಕೋವಿಡ್ನಿಂದಾಗಿ ಮುಚ್ಚಿ ಹೋಗಿವೆ.
ಲಾಕ್ ಡೌನ್, ವೀಕೆಂಡ್ ಕರ್ಫ್ಯೂ, ಮೊದಲಾದವು ಅತ್ಯಂತ ಅನರ್ಥದ ನಿರ್ಣಯಗಳಾಗಿ ನಮ್ಮ ಮುಂದಿವೆ. ಪಾರ್ಸೆಲ್ ಸೇವೆ ಯಾವ ಕಾರಣಕ್ಕೂ ಲಾಭದಾಯಕವಲ್ಲ. ಇದರಿಂದ ಒಂದಷ್ಟು ಕಾರ್ಮಿಕರಿಗೆ ಉದ್ಯೋಗ ದೊರೆಯಬಲ್ಲುದಷ್ಟೇ. ವ್ಯವಸ್ಥೆ ನಿಲ್ಲಿಸಲಾಗದ ಅನಿವಾರ್ಯತೆ, ಕೆಲಸಗಾರರನ್ನು ಕಳೆದುಕೊಲ್ಳುವ ಭಯ, ಬಾಡಿಗೆ ಕಟ್ಟಲೇಬೇಕಾದ ಒತ್ತಡಗಳಿಂದಾಗಿ ಬಹಳಷ್ಟು ಹೋಟೇಲ್ಗಳವರು ಮತ್ತಷ್ಟು ನಷ್ಟದೊಂದಿಗೆ ಪಾರ್ಸೆಲ್ ಕೊಡುವ ಕೆಲಸವನ್ನು ನಡೆಸುತ್ತಿವೆ.ಸಾರ್ವಜನಿಕವಾಗಿ ಓಡಾಡುವ ಅವಧಿಯನ್ನು ಕಡಿಮೆ ಮಾಡಿದಷ್ಟೂ ವ್ಯವಹಾರದ ಹೊತ್ತಿನಲ್ಲಿ ಗುಂಪುಗಳು , ಸರತಿ ಸಾಲುಗಳು ಹೆಚ್ಚಾಗಿ ರೋಗ ಹರಡುವುದು ಸುಲಭವಾಗುತ್ತದೆ. ಅಲ್ಲಿಗೆ ಲಾಕ್ಡೌನ್ಗೆ ಏನು ಬೆಲೆ ದೊರೆತಂತಾಯಿತು? ಕಡ್ಡಾಯ ಮಾಸ್ಕ್, ಸಾನಿಟೈಜರ್, ಸಾಮಾಜಿಕ ಅಂತರಗಳ ನಿಯಮಗಳನ್ನು ಪಾಲಿಸುವಂತೆ ಹೇಳಿ ಹೋಟೆಲ್ಗಳಂಥ ದುಡಿಯುವ ವರ್ಗಕ್ಕೆ ಅವಕಾಶ ನೀಡಬೇಕು. ದೇಶದ ಸುಭದ್ರತೆಗಾಗಿಯೂ ಪ್ರತಿಯೊಬ್ಬನೂ ದುಡಿಮೆ ಮಾಡುವುದು, ಪ್ರತಿಯೊಬ್ಬನಿಗೂ ದುಡಿಯುವುದಕ್ಕೆ ಅವಕಾಶ ನೀಡುವುದು ಅತೀ ಮುಖ್ಯ.
ಸಾರ್ವಜನಿಕವಾಗಿ ದುಡಿಯುವ ಎಲ್ಲಾ ದಾರಿಗಳನ್ನು ಸರಕಾರವೇ ಮುಚ್ಚಿ ಹಾಕಿ ಬಹಳ ದೊಡ್ಡ ಮಟ್ಟದಲ್ಲಿ ನಿರುದ್ಯೋಗವನ್ನು ಸೃಷ್ಟಿಸುತ್ತಿದೆ. ಕೇವಲ ಆರಂಭಿಕ ಶಿಕ್ಷಣವನ್ನಷ್ಟೇ ಪಡೆದು ಹೋಟೆಲ್ ಸೇರುತ್ತಿದ್ದ ಹಳ್ಳಿಗಳ ಯುವಜನತೆ ಕೆಲಸವಿಲ್ಲದೇ ಅನರ್ಥದ ದಾರಿ ಹಿಡಿದಲ್ಲಿ ಅದಕ್ಕೆ ಸರಕಾರವೇ ಕಾರಣವಾಗುತ್ತದೆ.ಸಾರ್ವಜನಿಕರು ಸಾಮಾಜಿಕ ಜವಾಬ್ಧಾರಿಗಳನ್ನು ನಿರ್ವಹಿಸುವಂತೆ ಕ್ರಮವಹಿಸಿ, ದುಡಿಯುವ ದಾರಿಗಳನ್ನು ಮುಚ್ಚದಂತೆ ಸರಕಾರವು ನೋಡಿಕೊಂಡಿದ್ದರೆ ಎಷ್ಟೋ ಹೋಟೆಲ್ಗಳು ತಮ್ಮ ಅಸ್ತಿತ್ವವನ್ನು ಇಂದು ಉಳಿಸಿಕೊಂಡಿರುತ್ತಿದ್ದವು.
ಹೋಟೆಲ್ ಉದ್ಯಮವೆಂದರೆ, ಅದು ಹತ್ತಾರು ಕೊಂಬೆಗಳನ್ನು ಚಾಚಿದ ಮರವಿದ್ದಂತೆ. ಅದರ ನೆಳಲಲ್ಲಿ ಹಲವು ಸಹಉದ್ಯಮಗಳು ಆಶ್ರಯ ಪಡೆದಿರುತ್ತವೆ. ಉದಾಹರಣೆಗೆ, ಹಸು ಸಾಕಿದವನು ಹೋಟೇಲುಗಳಿಗೆ ಹಾಲು ಮಾರುತ್ತಾನೆ. ತರಕಾರಿ ಮಾರುವವರು, ದಿನಸಿ ವ್ಯಾಪಾರಸ್ತರು, ಬಾಲೆ ಎಲೆ ಮಾರುವವರು ಹೋಟೇಲು ಉದ್ಯಮಕ್ಕೆ ಅವಲಂಬಿತರೇ. ಹೋಟೆಲ್ ಕಾರ್ಮಿಕರು, ಕಾಫಿ ಪುಡಿ ತಯಾರಕರು, ಟೀ ಪುಡಿಯವರು, ಅಡುಗೆ ಅನಿಲ ವಿತರಕರು, ಮಿನರಲ್ ನೀರಿನ ವಿತರಕರು ಹೀಗೆ ಹೋಟೆಲ್ ಆಧರಿತವಾಗಿ ನಡಯುತ್ತಿದ್ದ ಹಲವು ವೃತ್ತಿಯವರಿಗಿಂದು ಹೋಟೇಲ್ ಉದ್ಯಮದ ಸೋಲು ಹೊಡೆತ ನೀಡಿದೆ.
ನಮ್ಮ ಬೇಡಿಕೆಗಳೆಂದರೆ, ಲಾಕ್ಡೌನ್ ಕೊನೆಗೊಳಿಸಿ ಹೋಟೆಲ್ಗಳನ್ನು ಪೂರ್ಣಪ್ರಮಾಣದಲ್ಲಿ ನಡೆಸಲು ತಕ್ಷಣವೇ ಅವಕಾಶ ನೀಡಬೇಕು. ಲಾಕ್ಡೌನ್ ಸಂದರ್ಭದಲ್ಲಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆಗಳಲ್ಲಿ ವಿನಾಯಿತಿ ನೀಡಬೇಕು. ಹೋಟೆಲ್ ಕಟ್ಟಡದ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಲಾಕ್ಡೌನ್ ಸಂದರ್ಭದಲ್ಲಿನ ವಿದ್ಯುತ್ ಶುಲ್ಕ ಹಾಗೂ ನೀರಿನ ಶುಲ್ಕದ ಮೇಲೆ ರೀಯಾಯಿತಿ ನೀಡಬೇಕು. ಹೋಟೆಲ್ ಕಾರ್ಮಿಕರಿಗಾಗಿ ಸರಕಾರ ಉಚಿತ ಆರೋಗ್ಯಸೇವೆಗೆ ಅವಕಾಶ ನೀಡಬೇಕು. ಹೋಟೆಲ್ ಕಾರ್ಮಿಕರಿಗಾಗಿ ಉಚಿತ ವಿಮಾ ಯೋಜನೆ ಜಾರಿಗೆ ತರಬೇಕು. ಮೈಸೂರಿನಲ್ಲೇ ಲಾಕ್ಡೌನ್ ನೆಪದಲ್ಲೇ ಬಹುಪಾಲು ಹೋಟೆಲ್ಗಳಿಗೆ ಪಾರ್ಸೆಲ್ ಸೇವೆಗೆ ಅವಕಾಶ ನೀಡಿ ನಗರದ ಪ್ರಮುಖ ಸ್ಥಳಗಳಲ್ಲಿರುವ ಪ್ರಭಾವಿ ಹೋಟೆಲ್ಗಳಿಗೆ ಮಾತ್ರ ಕಾರ್ ಸರ್ವಿಸ್, ಟೀ ಕಾಫಿ ಹಂಚಿಕೆಗೆ, ಸಂಪೂರ್ಣ ಅವಕಾಶ ನೀಡಿದ್ದಾರೆ. ಇಂಥ ಸಂದರ್ಭದಲ್ಲೂ ಈ ಅಸಮಾನತೆ ಏಕೆ? ಸ್ವತ: ಪೋಲೀಸರೇ ಇಲ್ಲಿ ಈ ಅವಧಿಯ ಗ್ರಾಹಕರೆನ್ನುವುದು ಆಶ್ಚರ್ಯ. ಸಣ್ಣ-ಸಣ್ಣ ತಳ್ಳುಗಾಡಿಯವರ ಬದುಕಿನ ಯಾತನೆಯನ್ನು ಕೇಳುವವರೇ ಇಲ್ಲ. ಪ್ರವಾಸೋದ್ಯಮ ಮುಚ್ಚಿ ಹೋಗಿ ವಸತಿಗೃಹ(ಲಾಡ್ಜ್)ಗಳ ಮಾಲೀಕರ ಪರಿಸ್ಥಿತಿ ವಿವರಿಸಲು ಅಸಾಧ್ಯ.
ಹೀಗಾಗಿ ಸಾಮಾಜಿಕವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮಗಳನ್ನು ಜಾರಿಗೆ ತಂದು ಮಾಸ್ಕ್, ಸಾಮಾಜಿಕ ಅಂತರ , ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಲು ಜನರಿಗೆ ಸೂಚಿಸಿ ಲಾಕ್ಡೌನ್ ಅನ್ನು ತೆರವುಗೊಳಿಸಿ ಹೋಟೆಲ್ ಉದ್ಯಮವು ಮತ್ತೆ ಮೊದಲಿನಂತೆ ಪೂರ್ಣಪ್ರಮಾಣದಲ್ಲಿ ನಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.