ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಶೈಕ್ಷಣಿಕವಾಗಿ ನೂತನ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸುತ್ತಿರುವುದಾಗಿ ಕುಲಪತಿ ಪ್ರೊ. ವಿದ್ಯಾಶಂಕರ್ ಹೇಳಿದ್ದಾರೆ.
ಕರಾಮುವಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24×7 ಕಾರ್ಯ ನಿರ್ವಹಿಸುವಂತಹ ಶೈಕ್ಷಣಿಕ ಸೌಲಭ್ಯದ ವಸತಿ ಸೌಲಭ್ಯದ ಕಟ್ಟಡವನ್ನು ನಿರ್ಮಿಸಲು ಯೋಜನೆ ತಯಾರಿಸಲಾಗುತ್ತಿದೆ ಎಂದರಲ್ಲದೆ, ಈಗಾಗಲೇ ವಿವಿಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯಿಂದ ಪ್ರಾರಂಭವಾಗಿ ಫಲಿತಾಂಶದವರೆಗೂ ಗಣಕೀರಣಗೊಂಡಿದ್ದು, ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಯ ತರಬೇತಿಯನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ. ಜತೆಗೆ ಯುಜಿ, ಪಿಜಿ, ಪಿಹೆಚ್ಡಿ ಕಾರ್ಯಕ್ರಮಗಳ ಅಳವಡಿಕೆ ಮಾಡಿರುವುದಾಗಿಯೂ ಹೇಳಿದರು.

ಸದ್ಯ ಬಿ.ಎಡ್ ಕೋರ್ಸ್ ಸೀಟು ಕಡಿಮೆಯಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಈಗಿರುವ 500 ಸ್ಥಾನದಿಂದ 2000ಕ್ಕೆ ಹೆಚ್ಚಿಸಲು ಅನುಮತಿ ಕೋರಿ ಎನ್ ಸಿಐಆರ್ ಟಿ ಪತ್ರ ಬರೆದಿದ್ದು, ಅವರಿಂದ ಅನುಮತಿ ಲಭಿಸುವ ಧನಾತ್ಮಕ ನಿರೀಕ್ಷೆಯನ್ನಿಟ್ಟುಕೊಂಡಿರುವುದಾಗಿ ಇದೇ ವೇಳೆ ತಿಳಿಸಿದರು.
ಈಗಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕರಾಮುವಿ) ಎಲ್ಲ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿರುವುದರಿಂದ ಮತ್ತು ಉತ್ತಮ ಬೇಡಿಕೆ ಇರುವುದರಿಂದ ಬಿ.ಎಡ್ ಕೋರ್ಸ್ ಹೆಚ್ಚಿನ ಸೀಟು ಕೋರಿ ಎನ್ ಸಿಐಆರ್ ಟಿಗೆ ಪತ್ರ ಬರೆಯಲಾಗಿದೆ ಕರಾಮುವಿ ವಿದ್ಯಾರ್ಥಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಅವರಿಗೆ ಅಭ್ಯಾಸಕ್ಕೆ ಅನುಕೂಲವಾಗುವಂತೆ ವಿವಿ ಕ್ಯಾಂಪಸ್ ನಲ್ಲಿ ಕಂಪ್ಯೂಟರ್ ಲ್ಯಾಬ್, ವೈಫೈ ಸೌಲಭ್ಯ ನೀಡಲಾಗುತ್ತದೆ ಎಂದರು.
ಸಾಮಾಜಿಕ ಕಾರ್ಯಗಳ ಬಗ್ಗೆಯೂ ಇದೇ ವೇಳೆ ತೆರೆದಿಟ್ಟ ಅವರು, 10ಕೋಟಿ ರೂ.ಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಅದರಲ್ಲಿ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ 10ಆಕ್ಸಿಜನ್ ಕಾನ್ಸನ್ಟ್ರೇಟರ್ ಹಸ್ತಾಂತರಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ರೀಜನಲ್ ಸೆಂಟರ್ ಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಾಗಿಯೂ ಹೇಳಿದರು.