ಕೊರೋನಾ ಇನ್ನಿಲ್ಲದಂತೆ ಬಡವ, ಬಲ್ಲಿದ ಯಾರನ್ನು ಬಿಡದೆ ಕಾಡಿದೆ ಮತ್ತು ಕಾಡುತ್ತಲೇ ಇದೆ. ಲಾಕ್ ಡೌನ್ ನಿಂದಾಗಿ ಜನ ಕುಗ್ಗಿ ಹೋಗಿದ್ದಾರೆ. ದುಡಿಮೆ ಇಲ್ಲ, ಕೈ ಖಾಲಿಯಾಗಿದೆ. ಜತೆಗೆ ನಾಳೆ ಹೇಗೆ ಎಂಬ ಚಿಂತೆ ಎಲ್ಲರನ್ನು ಆವರಿಸಿದೆ.
ಬದುಕು ಹೀಗೆಯೇ ಇರುತ್ತದೆ ಎಂಬ ನಂಬಿಕೆಯಿಂದ ತಮ್ಮ ಸಂಪಾದನೆಗೆ ತಕ್ಕಂತೆ ಮಾಡಿಕೊಂಡ ಕಮಿಟ್ ಮೆಂಟ್ ಈಗ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದೆ. ಮನೆಯಲ್ಲಿಯೇ ಕುಳಿತಾಗ ಚಿಂತೆಗಳು ನಮ್ಮನ್ನು ಕಾಡಬಹುದು ಅದರಿಂದ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ನೆಮ್ಮದಿ ಹಾಳಾಗಬಹುದು. ಇದೆಲ್ಲವನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಲಹಾ ಮನೋವೈದ್ಯ ಡಾ. ರಾಜಗೋಪಾಲ್ ಅವರು ತಮ್ಮದೇ ಆದ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಅದು ಹೀಗಿದೆ..
ಮನೆಗಳಲ್ಲಿ ಸುರಕ್ಷಿತವಾಗಿರ ಬಹುದಾದ ಈ ಸಮಯವನ್ನು ಆರಾಮವಾಗಿರಲು ಮತ್ತು ತಮ್ಮ ದಿನನಿತ್ಯದ ಒತ್ತಡ ಮತ್ತು ಸುಸ್ತಿನ ಮನಸ್ಥಿತಿಯಿಂದ ಹೊರಬರಲು ಬಳಸಿಕೊಳ್ಳಬಹುದು. ಇಂತಹ ಅಪಾಯಕಾರಿ ಸಮಯದಲ್ಲಿ ಇದನ್ನು ಒಂದು ಆಶಾಕಿರಣ ಎಂದುಕೊಳ್ಳೋಣ, ಒಂದು ಹೆಜ್ಜೆ ಹಿಂದೆ ಬಂದು, ನಮ್ಮ ಕುಟುಂಬ, ಆರೋಗ್ಯ ಹೀಗೆ ಎಲ್ಲವನ್ನೂ ರೂಪಿಸುವ ಬದುಕಿನ ವಿಶಾಲ ಚಿತ್ರಣವನ್ನು ಕಂಡುಕೊಂಡು ಅದನ್ನು ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ.
ಈಗಿನ ಪರಿಸ್ಥಿತಿಯನ್ನು ನೋಡಿಕೊಂಡು, ಹಿಂದಿನ ದಿನಗಳ ಜಂಜಾಟ ತುಂಬಿಕೊಂಡಿದ್ದ ಆ ಅವಸರದ ಮುಂಜಾನೆಯ ಹೊತ್ತನ್ನು ಮಿಸ್ ಮಾಡಿಕೊಳ್ಳುವುದಕ್ಕಿಂತ, ನಿಮ್ಮ ಮಾನಸಿಕ ಆರೋಗ್ಯವನ್ನು ಪ್ರೀತಿಸುವುದು ಮತ್ತು ಹಲವು ವರ್ಷಗಳ ಒತ್ತಡದಿಂದ ಮುಕ್ತಿ ಹೊಂದುವುದೇ ಜಾಣತನವಾಗಿದೆ.
ಕುಟುಂಬದೊಂದಿಗೆ ಕಾಲ ಕಳೆಯಿರಿ, ಈ ಪರಿಸ್ಥಿತಿಯನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡಿ. ನಮ್ಮಲ್ಲಿ ಹಲವರಿಗೆ ಪ್ರತಿದಿನ ನಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ಈ ಸಮಯವನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಿ. ಮಕ್ಕಳೊಂದಿಗೆ ಆಟವಾಡಿ, ಈ ಗುಣಮಟ್ಟದ ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಿರಿ, ಮನೆಯನ್ನು ಸ್ವಚ್ಛಗೊಳಿಸಿ ಅಥವಾ ಮತ್ತೊಮ್ಮೆ ಸಿಂಗರಿಸಿ, ಹೆತ್ತವರೊಂದಿಗೆ ಮಾತನಾಡಿ. ನಮ್ಮನ್ನು ಕುಟುಂಬದ ಜೊತೆಗಿನ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ಮತ್ತು ಆತಂಕದ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ನಿಮ್ಮ ಸಂಬಂಧಿಕರು ದೂರದಲ್ಲಿದ್ದರೆ ಅವರನ್ನು ವೀಡಿಯೋ ಕಾಲ್ ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆದುಹೋದ ಆಪ್ತತೆಯನ್ನು ಮರುಸ್ಥಾಪಿಸಿ.
ನಿಮ್ಮನ್ನು ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಪುಸ್ತಕ ಓದುವುದು, ಕಳೆದುಹೋದ ಹವ್ಯಾಸಗಳಾದ ಡ್ರಾಯಿಂಗ್, ಪೈಂಟಿಂಗ್, ನಿಮ್ಮ ಹೂದೋಟವನ್ನು ಮತ್ತೊಮ್ಮೆ ಜೋಡಿಸುವುದು, ನೀರುಣಿಸುವುದು, ಅಡುಗೆ ಅಥವಾ ಹೊಸ ರುಚಿಯ ಪ್ರಯೋಗ, ಹೊಸದೊಂದು ಹವ್ಯಾಸವನ್ನು ರೂಢಿಸಿಕೊಳ್ಳಿ.
ನಿಯಮಿತ ವ್ಯಾಯಾಮ, ಫಿಟ್ನೆಸ್ ಒಬ್ಬ ವ್ಯಕ್ತಿ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಾಡಬಹುದಾದ ಅತ್ಯುತ್ತಮ ಚಟುವಟಿಕೆಗಳಲ್ಲಿ ಒಂದು ಸಾಬೀತಾಗಿದೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ಒಟ್ಟಾರೆ ರಕ್ತಪರಿಚಲನೆ, ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮನಸ್ಸಿನ ಸಾಮರ್ಥ್ಯ ವೃದ್ಧಿಸುತ್ತದೆ, ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ.