ಗಾಂಧಿ ಶಿಲ್ಪದಿಂದ ಕಂಗೋಳಿಸುತ್ತಿರುವ ಮಾನಸ ಗಂಗೋತ್ರಿ

ಮೈಸೂರು: ರಾಷ್ಟ್ರಕವಿ ಕುವೆಂಪು ಕನಸಿನ ಮಾಸಗಂಗೋತ್ರಿಯ ಜ್ಞಾನಸೃಷ್ಟಿ-ದಿವ್ಯದೃಷ್ಟಿಯ ಅಂಗಳದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ದಿವ್ಯಪ್ರಭೆ ಪ್ರಜ್ವಲಿಸುತ್ತಿದೆ.

ಗಾಂಧೀ ಭವನದ ಹಚ್ಚ ಹಸಿರಿನ ಉದ್ಯಾನದಲ್ಲಿನ ಮಹಾತ್ಮರ ಸಿಮೆಂಟಿನ 27 ಶಿಲ್ಪಗಳು ಶತಮಾನೋತ್ಸವದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮೆರುಗು ತಂದಿವೆ. ಮಹಾನ್ ಅಹಿಂಸವಾದಿಯ ಜೀವನ ವೃತ್ತಂತಾ ತೆರೆದಿಟ್ಟಿದೆ.

ಮಹಾತ್ಮರ ಶಿಲ್ಪಗಳು ಜೀವಂತ ಪ್ರತಿಮೆಗಳಾಗಿ ಪಡಿಮೂಡಿವೆ. ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಒಂದೊಂದು ಕಲಾಕೃತಿ ಎದುರು ತನ್ಮಯವಾಗಿ ನಿಂತು ಅನುಸಂಧಾನ ನಡೆಸಬೇಕೆನಿಸುತ್ತದೆ. 

ಚರಕದಿಂದ ನೂಲುತ್ತಿರುವ ಗಾಂಧಿ, ಗಾಂಧಿ ಭವನಕ್ಕೆ ಸ್ವಾಗತ ಕೋರುತ್ತಿದ್ದಾರೆ. ಎದುರಿಗೆ ಧ್ಯಾನಸ್ಥ ಸ್ಥಿತಿಯ ಅಪರೂಪದ ಪ್ರತಿಮೆ ಇದೆ. ಎಡಕ್ಕೆ ತಿರುಗಿದರೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ, ಗಿಡ ಮರಗಳಿಂದಲೇ ತುಂಬಿರುವ ಗಾಂಧಿವನ ಸುಸ್ವಾಗತಿಸುತ್ತದೆ.

ಅಭ ಮತ್ತು ಮನು ಅವರ ಸಹಕಾರದಲ್ಲಿ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಗಾಂಧಿ ನೇತೃತ್ವದಲ್ಲಿ ದೇಶವಾಸಿಗಳು ಸದ್ಭಾವನ ಯಾತ್ರೆ ಹೊರಟಿದ್ದಾರೆ. ಮೊಮ್ಮಗ ಕನು ಆರ್.ಗಾಂಧಿಯೊಂದಿಗೆ ಆಟವಾಡುತ್ತಿದ್ದಾರೆ. ಕವಿ ರವೀಂದ್ರನಾಥ್ ಟ್ಯಾಗೋರ್ ಗಾಂಧಿಗೆ ಕವಿತೆ  ಓದಿ ಹೇಳುತ್ತಿದ್ದಾರೆ. ಮಗುವಿನ ಪ್ರೀತಿಯಲ್ಲಿ ನಿರತರಾಗಿರುವ ಗಾಂಧಿ, ಗಾಂಧಿ ಮತ್ತು ಕಸ್ತೂರ ಬಾ ಸಂಜೆ ಪ್ರಾರ್ಥನೆಯಲ್ಲಿ ತಲ್ಲಿನರಾಗಿದ್ದಾರೆ. 

ವಾಕಿಂಗ್ ಮಾಡಲು, ಮಹಾತ್ಮರ ಪ್ರತಿಮೆಗಳ ಎದುರು ಫೋಟೋ ಕ್ಲಿಕ್ಕಿಸಿಕೊಳ್ಳಲು ಗಾಂಧೀ ವನ ಸಶಕ್ತ ತಾಣ. ಗಾಂಧಿ ಮೊಮ್ಮಗ ರಾಜಮೋಹನ್ ಗಾಂಧಿ, ಪಾಟೀಲಪುಟ್ಟಪ್ಪ, ಎಚ್.ಎಸ್.ದೊರೆಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಗಾಂಧೀವನದ ಸೊಬಗಿನ ಕುರಿತು ಮೆಚ್ಚುಗೆ ನುಡಿಗಳನ್ನಾಡಿದ್ದಾರೆ.

ಗಾಂಧೀ ಭವನ ಕೇಂದ್ರದಲ್ಲಿ ಮಹಾತ್ಮರ ವಿಚಾರಧಾರೆಗಳ ಅಧ್ಯಾಪನ, ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ಬಾಹ್ಯಲೋಕ ಸೃಷ್ಟಿಸಿ ವಿದ್ಯಾರ್ಥಿಗಳಿಗೆ ಗಾಂಧೀಜಿ ಪರಿಚಯಿಸಲು ಗಾಂಧೀವನ ನಿರ್ಮಿಸಲಾಗಿದೆ ಎಂದು ಗಾಂಧೀ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ತಿಳಿಸಿದರು.

ಮೈಸೂರು ವಿವಿ 2018ರಲ್ಲಿ ಬಾಪು ಅವರ ೧೫೦ನೇ ವರ್ಷಾವಣೆ ನಿಮಿತ್ತ 2 ಲಕ್ಷ ರೂ.ಗಳಷ್ಟೇ ವ್ಯಯಿಸಿ ಅದ್ಭುತವಾದ ಗಾಂಧೀ ವನ ನಿರ್ಮಿಸಿಕೊಂಡಿದೆ. ಕರ್ನಾಟಕ ಶಿಲ್ಪಾ ಕಲಾ ಅಕಾಡೆಮಿ, ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿವೆ. ನಾಡಿನ ವಿವಿಧ ಭಾಗಗಳ ಶ್ರೇಷ್ಠ ಕಲಾವಿದರು 16ದಿನಗಳಲ್ಲಿ 27 ಪ್ರತಿಮೆಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ ಎಂದು ಹೇಳಿದರು.

ಅಂತಿಮವಾಗಿ ಪ್ರೀತಿಯೊಂದೆ ಮಾನವರೆಲ್ಲರ ಕೂಡಿಸಬಲ್ಲದು… ಗಾಂಧೀಜಿ ಈ ಮಾತು ಇಡೀ ಜಗತ್ತನ್ನು ಮುನ್ನಡೆಸಬಲ್ಲದು. ಗಾಂಧಿ ದೊಡ್ಡ ಹೆಮ್ಮರ. ಅವರನ್ನು ಟೀಕಿಸಿದಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ಟೀಕಿಸಿದವರು ಕನಿಷ್ಠರಾಗಿ ಉಳಿಯುತ್ತಾರೆ. 153ನೇ ಗಾಂಧಿ ಜನ್ಮದಿನದಿಂದ 2022ರ ಆ.15ರವರೆಗೆ ಗಾಂಧೀ ಕುರಿತು ವಿಶೇಷ ಉಪನ್ಯಾಸ ಆಯೋಜನೆ ಮಾಡುತ್ತೇವೆ. ಗಾಂಧೀಜಿ ಕುರಿತ 7 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. 

-ಪ್ರೊ.ಎಂ.ಎಸ್.ಶೇಖರ್, ನಿರ್ದೇಶಕರು, ಗಾಂಧಿ ಭವನ