ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ರವರ ವಿದಾಯ ನುಡಿಗಳು.

ಜಾಗತಿಕವಾಗಿ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿರುವ ಜಿಲ್ಲೆ ಮೈಸೂರು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ವೈಚಾರಿಕವಾಗಿ ಮೈಸೂರಿಗೆ ಅದರದ್ದೇ ಆದ ಉನ್ನತ ಸ್ಥಾನವಿದೆ. ಇಂತಹ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುವ ಸದಾವಕಾಶ ಲಭಿಸಿದ್ದು ನನಗೆ ಅತ್ಯಂತ ಹೆಮ್ಮೆಯ ಮತ್ತು ಗೌರವದ ಸಂಗತಿ ಎಂದು ಭಾವಿಸಿದ್ದೇನೆ.

ವೈಚಾರಿಕವಾಗಿ, ಸೈದ್ಧಾಂತಿಕವಾಗಿ, ರಾಜಕೀಯವಾಗಿ ವಿಭಿನ್ನ ನಿಲುವುಗಳನ್ನು ಹೊಂದಿದ್ದರೂ ಸಹ ಜಿಲ್ಲೆಯ ಹಾಗೂ ನಾಡಿನ ಪ್ರತಿಷ್ಠೆಯ ವಿಚಾರ ಬಂದಾಗ ಎಲ್ಲಾ ನಾಗರಿಕರು ಒಗ್ಗೂಡಿ ಬರುವ ಅಪರೂಪದ ಮನಃಸ್ಥಿತಿಯನ್ನು ಮೈಸೂರಿನ ಜನರಲ್ಲಿ ನಾನು ಕಂಡಿದ್ದೇನೆ.

ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ಶ್ರೀ ನಂಜುಂಡೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ಮೈಸೂರಿನ ಜನರ ಈ ಬೆಂಬಲ ಮತ್ತು ಸಹಕಾರವೇ ನನಗೆ ಶ್ರೀರಕ್ಷೆಯಾಗಿ ಒಂದಷ್ಟು ಕೆಲಸ ಮಾಡಲು ನೆರವಾಯಿತು. ಮೈಸೂರು ಉಸ್ತುವಾರಿ ಸಚಿವನಾಗಿ ಮಾಡಿದ ಒಂದಷ್ಟು ಕೆಲಸಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲು ಇಚ್ಛಿಸುತ್ತೇನೆ.

ಕೋವಿಡ್-19ರ ಸಂದರ್ಭದಲ್ಲಿ ಜನರ ಆರೋಗ್ಯ ಮತ್ತು ಜೀವ ರಕ್ಷಿಸಲು ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿತ್ತು. ಎಲ್ಲರ ಸಹಕಾರದಿಂದ ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅನಿರೀಕ್ಷಿತವಾಗಿ ಆಕ್ಸಿಜನ್ ಸಮಸ್ಯೆ, ಹಾಸಿಗೆಗಳ ಬೇಡಿಕೆ ತೀವ್ರಗೊಳ್ಳುವ ಸನ್ನಿವೇಶ ಎದುರಾಗುತ್ತಿದ್ದಂತೆಯೇ ಈ ಸಮಸ್ಯೆ ನಿವಾರಣೆಗೆ ಕ್ರಮವಹಿಸಿ, ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಮತ್ತು 100 ಬೆಡ್‍ಗಳ ಸೇಠ್ ಮೋಹನ್‍ದಾಸ್ ತುಳಿಸಿದಾಸ್ ಆಸ್ಪತ್ರೆ ಮುಂತಾದ ಕಡೆ ಆಮ್ಲಜನಕಯುಕ್ತ ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ ಹಾಗೂ ಆಕ್ಸಿಜನ್ ಸಮರ್ಪಕ ನಿರ್ವಹಣೆಗೆ ಒತ್ತು ನೀಡಿ, ಹೆಚ್ಚಿನ ಅನಾಹುತ ತಪ್ಪಿಸಲು ಕ್ರಮವಹಿಸಿದ್ದೇನೆ.

ಮೈಸೂರು ಮೃಗಾಲಯದ ನಿರ್ವಹಣೆಗೆ ಪ್ರವಾಸಿಗರು ನೀಡುವ ಪ್ರವೇಶ ಶುಲ್ಕವೇ ಮೂಲಾಧಾರ. ಲಾಕ್‍ಡೌನ್ ಪರಿಣಾಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರಿಂದ ಮೃಗಾಲಯದ ಆದಾಯ ಸಂಪೂರ್ಣ ನಿಂತುಹೋಗಿ ಸಂಕಷ್ಟಕ್ಕೆ ಒಳಗಾಗಿತ್ತು. ಮೃಗಾಲಯದ ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ನೆರವಾಗುವ ದೃಷ್ಟಿಯಿಂದ ಒಂದು ಆನೆಯನ್ನು ದತ್ತು ಪಡೆದುಕೊಂಡೆನು. ಇಷ್ಟಕ್ಕೆ ಸುಮ್ಮನಾಗದೆ, ನಾನು ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದ ಜನರು ಹಾಗೂ ಸ್ನೇಹಿತರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ ಪ್ರಯುಕ್ತ, ಮೃಗಾಲಯಕ್ಕೆ 3.65 ಕೋಟಿ ರೂ.ಗೂ ಹೆಚ್ಚು ಬೃಹತ್ ಮೊತ್ತದ ದೇಣಿಗೆ ಮೈಸೂರು ಮೃಗಾಲಯಕ್ಕೆ ಬಂದಿತು. 127 ವರ್ಷಗಳ ಇತಿಹಾಸದಲ್ಲಿ ಇಷ್ಟು ಬೃಹತ್ ಪ್ರಮಾಣದ ದೇಣಿಗೆ ಮೈಸೂರು ಮೃಗಾಲಯಕ್ಕೆ ಸಂಗ್ರಹವಾಗಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದಾಗ, ಸಾರ್ಥಕ ಭಾವನೆ ಮೂಡಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ ಸಂಪನ್ಮೂಲದ ಸಮಸ್ಯೆ ಎದುರಾಗಿ, ಹಲವಾರು ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕಷ್ಟವಾಗಿತ್ತು. ಪ್ರಾಧಿಕಾರದಲ್ಲಿ ಅನುದಾನ ಲಭ್ಯವಿದ್ದರೂ ಆಡಳಿತಾತ್ಮಕ ಅಡ್ಡಿ ಇದ್ದುದರಿಂದ ಬಳಸಲು ಆಗುತ್ತಿರಲಿಲ್ಲ. ಸರ್ಕಾರದ ಹಂತದಲ್ಲಿ ಈ ಅಡ್ಡಿ ಆತಂಕ ನಿವಾರಿಸಿ, ಸಚಿವರ ಸಂಪುಟದ ಅನುಮೋದನೆ ನೀಡುವ ಮೂಲಕ 377 ಕೋಟಿ ರೂ. ಪ್ರಾಧಿಕಾರದ ಅನುದಾನವನ್ನು ಮೈಸೂರಿನ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.

ಜೀವವೈವಿಧ್ಯ ತಾಣವಾಗಿರುವ ಚಾಮುಂಡಿಬೆಟ್ಟದ ಸುತ್ತಾಮುತ್ತಾ ಹಿಂದಿನ ವರ್ಷ 5 ಸಾವಿರ ಗಿಡ ನೆಡಲಾಗಿತ್ತು. ಈ ವರ್ಷ 20 ಸಾವಿರ ಗಿಡ ನೆಡುವ ಮೂಲಕ ಮೈಸೂರಿನ ಹಸಿರೀಕರಣ ಕಾರ್ಯವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ 03 ವರ್ಷಗಳಲ್ಲಿ ಇನ್ನೂ 75 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ.

ಕಬಿನಿಯಿಂದ ಬಿದರಗೂಡು ಬಳಿ 120 ಎಂ.ಎಲ್.ಡಿ. ಕುಡಿಯುವ ನೀರನ್ನು ಮೈಸೂರು ನಗರಕ್ಕೆ ಸರಬರಾಜು ಮಾಡುವ  ಯೋಜನೆಗೆ ಕ್ರಮವಹಿಸಲಾಗಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಬಹುಮಹಡಿ ವಸತಿ ಸಮುಚ್ಛಯವು ಡಿ.ಪಿ.ಆರ್. ಹಂತದಲ್ಲಿದೆ. ಮತ್ತು ಅನ್‍ಲೈನ್ ಟ್ಯಾಕ್ಸ್ ಕಟ್ಟಲು ಕ್ರಮವಹಿಸಲಾಗಿದೆ. ಅನ್‍ಲೈನ್ ಮೂಲಕ ಖಾತೆ ಮಾಡಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

                ಕೊರೊನಾ ವೈರಾಣು ಹರಡದಂತೆ ತಡೆಯುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು. ಅವರಿಗೆ ಪೆÇ್ರೀತ್ಸಾಹಕವಾಗಿ ತಲಾ 3000 ರೂ.ಗಳ ನೆರವನ್ನು ಸಹಕಾರ ಸಂಘಗಳ ಮೂಲಕ ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಮೈಸೂರು ಜಿಲ್ಲೆಯಲ್ಲಿ 1890 ಆಶಾ ಕಾರ್ಯಕರ್ತೆಯರಿಗೆ ಸುಮಾರು 57 ಲಕ್ಷ ರೂ. ನೆರವು ಕೊಡಿಸಲಾಯಿತು.

                ಬಂಡಿಪಾಳ್ಯ ಎ.ಪಿ.ಎಂ.ಸಿ.ಯಲ್ಲಿ ರೈತರಿಗೆ ಹಾಗೂ ವರ್ತಕರಿಗೆ ಊಟೋಪಚಾರಕ್ಕೆ ತುಂಬಾ ತೊಂದರೆಯಾಗಿತ್ತು. ಅಲ್ಲಿ ಕ್ಯಾಂಟೀನ್ ಆರಂಭಕ್ಕೆ ಸೂಚನೆ ನೀಡಿದ ಪ್ರಯುಕ್ತ ಈಗ ರಿಯಾಯಿತಿ ದರದಲ್ಲಿ ಅಲ್ಲಿ ರೈತರಿಗೆ ಉಪಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

                ಮೈಸೂರು ನಾಗರಿಕರು ಬಹಳ ಭಕ್ತಿ-ಭಾವದಿಂದ ಮೈಸೂರು ದಸರಾ ಮಹೋತ್ಸವ ಆಚರಿಸುತ್ತಾರೆ. ಕೋವಿಡ್ ಪ್ರಯುಕ್ತ ಅತ್ಯಂತ ಸರಳವಾಗಿ ದಸರಾ ಆಚರಿಸುವುದು ಹೆಚ್ಚು ಸವಾಲಾಗಿತ್ತು. ತಜ್ಞರು ನೀಡಿದ ಕೋವಿಡ್ ಮಾರ್ಗಸೂಚಿ ಅನುಸಾರ ದಸರಾ ಮಾಡಿದ್ದು ಒಂದು ವಿಶಿಷ್ಠ ಅನುಭವ. ದಸರಾ ಇತಿಹಾಸದಲ್ಲೇ ದಸರಾ ಖರ್ಚುವೆಚ್ಚದ ವಿವರವನ್ನು ಪ್ರಕಟಿಸಿದ್ದು ಸಹ ಹೆಮ್ಮೆಯಾಗಿದೆ. ಸರಳವಾಗಿ ದಸರಾ ಆಚರಿಸಲು ಸರ್ಕಾರ 10 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಕೇವಲ 2 ಕೋಟಿ 20 ಲಕ್ಷ ರೂ.ಗಳ ವೆಚ್ಚದಲ್ಲಿ ದಸರಾ ಆಚರಿಸಿ, ಆರ್ಥಿಕ ಹೊರೆ ಕಡಿಮೆ ಮಾಡಲಾಯಿತು. 

                ಜಿಲ್ಲೆಯ ಪ್ರಮುಖ ಘಟನಾವಳಿಯಾಗಿರುವ ತಲಕಾಡಿನ ಪಂಚಲಿಂಗ ದರ್ಶನವನ್ನು ಸಹ ಅತ್ಯಂತ ಸರಳವಾಗಿ, ಮಿತವ್ಯಯವಾಗಿ ಆಚರಿಸಲಾಯಿತು.

                ಇನ್ನೂ ಅನೇಕ ಕಾರ್ಯಕ್ರಮಗಳು ಸಮಾಧಾನ ನೀಡಿವೆ. ಉಸ್ತುವಾರಿ ಸಚಿವನಾಗಿ 16 ತಿಂಗಳ ಕಡಿಮೆ ಅವಧಿಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಿಗೂ ಸುಮಾರು 4 ಬಾರಿಗೂ ಹೆಚ್ಚು ಭೇಟಿ ನೀಡಿ, ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ, ಜನರ ಅಹವಾಲು ಆಲಿಸಿ, ಅವರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ.

Leave a Reply

Your email address will not be published. Required fields are marked *