ಮೈಸೂರು ಗಾಂಧಿಗಿಲ್ಲ ಸ್ಮಾರಕ ಭಾಗ್ಯ..!

ರಾಮಚಂದ್ರರಾಯರ ಹೆಜ್ಜೆ ಗುರುತು ಉಳಿಸಲು ಮೀನಾಮೇಷ, ಭವಿಷ್ಯಕ್ಕಾದರೂ ಹೆಸರಿನ ಕುರುಹು ಉಳಿಸಿ ಎಂಬ ಕೂಗು 

ಮೈಸೂರು: ಸ್ವಾತಂತ್ರ  ಹೋರಾಟಕ್ಕಾಗಿ ಜನರನ್ನೂ ಸಂಘಟಿಸಿದ್ದಲ್ಲದೆ, ಖಾದಿ ಗ್ರಾಮೋದ್ಯೋಗದ ಸ್ಥಾಪಿಸಿ, ಸ್ವದೇಶಿ ಮಂತ್ರ ಸ್ಥಾಪಿಸಿದ್ದ `ಮೈಸೂರು ಗಾಂಧಿ’ ಎಂದೇ ಪ್ರಸಿದ್ಧ ಪಡೆದ ತಗಡೂರು ರಾಮಚಂದ್ರರಾಯರ ಹೆಜ್ಜೆ ಗುರುತುಗಳೇ ಮಾಸಿದ್ದು, ಅವರ ಹೋರಾಟದ ಹೆಜ್ಜೆ ಗುರುತು ಉಳಿಸುವ ಕೆಲಸಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. 

ಆಗಸ್ಟ್ 15ರಂದು ಸ್ವಾತಂತ್ರ್ಯ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಬಗ್ಗೆ ಸಾಕಷ್ಟು ಭಾಷಣಗಳು ಎಲ್ಲರ ಬಾಯಿಯಲ್ಲೂ ಬಂದು ಬಿಡುತ್ತವೆ. ಆದರೆ, ಅಂತಹ ಸ್ವಾತಂತ್ರ್ಯಕ್ಕೆ ಅಡಿಗಲ್ಲನ್ನಿಟ್ಟ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆ ಗುರುತುಗಳನ್ನು ಮರೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ 1921 ರಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಘೋಷಣೆ ಕೂಗದಂತೆ ನಿರ್ಬಂಧ ವಿಧಿಸಿದ್ದ ಕಾಲಘಟ್ಟದಲ್ಲಿಯೂ ತಮ್ಮ ಬಟ್ಟೆಯ ಮೇಲೆ `ಕ್ವಿಟ್ ಇಂಡಿಯಾ’, `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣ ಬರಹಳನ್ನು ಬರೆಸಿಕೊಂಡು ಊರೂರ ಮೇಲೆ ಸ್ವದೇಶಿ ವಸ್ತ್ರಗಳನ್ನು ಮಾರಾಟ ಮಾಡಿ ಸ್ವಾತಂತ್ರ್ಯದ ಹೋರಾಟ ಹುಟ್ಟು ಹಾಕಿದ್ದ ತಗಡೂರು ರಾಮಚಂದ್ರರಾಯರ ನೆನಪನ್ನು ನೆಪಥ್ಯಕ್ಕೆ ಸರಿಸುವ ಕೆಲಸ ನಡೆದಿದೆ.

ಕ್ರಿ.ಶ.೧೮೯೮ರಲ್ಲಿ ನಂಜನಗೂಡು ತಾಲೂಕಿನ ಹನುಮನಪುರ ಗ್ರಾಮದಲ್ಲಿ ಜನಿಸಿದ ರಾಮಚಂದ್ರರಾಯರು ನಂತರದ ದಿನಗಳಲ್ಲಿ ತಗಡೂರು ಗ್ರಾಮಕ್ಕೆ ಬಂದು ನೆಲೆಸಿದರು. ಮಹಾತ್ಮ ಗಾಂಧೀಜಿ ಅವರಿಂದ ಪ್ರೇರಿತರಾದ ಇವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೆ, ಜಿಲ್ಲೆಯ ನಂಜನಗೂಡು ಸಮೀಪದ ತಗಡೂರಿಗೆ ಮಹಾತ್ಮಗಾಂಧಿಯವರನ್ನು ಕರೆಸಿ ಸ್ವಾತಂತ್ರ್ಯದ ಪಾಠ ಹೇಳಿಸಲು ಮುಂದಾಗಿದ್ದರು. ಬದನವಾಳುವಿಗೆ ಬಂದ ಗಾಂಧಿಯಿಂದ ಪ್ರೇರೆಪಿತರಾದ ರಾಯರು ತಗಡೂರಿನಲ್ಲಿ ಚರಕದ ಮಹತ್ವ ಸಾರಿದ್ದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು,  ಮಾತ್ರವಲ್ಲದೆ, ಗಾಂಧಿ ಬದನವಾಳುವಿನಲ್ಲಿ ಹುಟ್ಟು ಹಾಕಿದ್ದ ಸ್ವದೇಶಿ ಪ್ರೇರಣೆಯಿಂದ ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಸ್ಥಾಪಿಸಿ, ಸ್ವದೇಶಿ ಮಂತ್ರ ಸಾರಿದರು. 1921ರಲ್ಲಿ ಸತ್ಯಾಗ್ರಹ ಆಶ್ರಮ ಪ್ರಾರಂಭ ಮಾಡಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯ ಕುರಿತು ಅರಿವು ಮೂಡಿಸುವುದು ಮತ್ತು ಸ್ವದೇಶಿ ವಸ್ತುಗಳ ಬಳಕೆ, ಖಾದಿ ತಯಾರಿ ಬೋಧಿಸಿದರು. ಹೀಗಾಗಿ ೧೯೨೫ರಲ್ಲಿ ಖಾದಿ ಸಹಕಾರ ಸಂಘವಾಯಿತು. 1928ರಲ್ಲಿ ಸೈಮನ್ ಕಮಿಷನ್ ವಿರುದ್ಧ ಸತ್ಯಾಗ್ರಹ ಮಾಡಿದ ಪರಿಣಾಮ ಇವರನ್ನು ಬಂಧನಕ್ಕೂ ಒಳಗಾಗಿದ್ದರು. ರಾಮಚಂದ್ರರಾಯರ ಹೋರಾಟ ಕಿಚ್ಚು ಕಂಡ ಸ್ಥಳೀಯ ಜನರು ಅಂದೆ ರಾಯರನ್ನು `ಮೈಸೂರು ಗಾಂಧಿ’ ಎಂದೇ ಹೆಸರಿನಲ್ಲೇ ಕರೆದರು. ಅಲ್ಲದೆ ಅವರ ಮನೆಯನ್ನೇ ಆಶ್ರಮವೆಂದು ಹೇಳಿದರು.

1990ರಲ್ಲಿ ಮರಣ ಹೊಂದಿದ ರಾಮಚಂದ್ರರಾಯರ ಅಂತ್ಯ ಸಂಸ್ಕಾರ ತಗಡೂರಿನಲ್ಲಿ ನೆರವೇರಿಸಲಾಗಿದೆ. ಅಲ್ಲೇ ಇರುವ ಸತ್ಯಾಗ್ರಹ ಆಶ್ರಮ ಸಂಪೂರ್ಣ ಶಿಥಿಲಗೊಂಡು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಇಂತಹ ಐತಿಹಾಸಿಕ ಮಹತ್ವ ಪಡೆದ ತಗಡೂರಿನಲ್ಲಿ ಮೈಸೂರಿನ ಗಾಂಧಿಗೆ ಸ್ಮಾರಕವೇ ಇಲ್ಲದ್ದರಿಂದ ಸ್ವಾತಂತ್ರ್ಯ ಹೆಜ್ಜೆ ಗುರುತು ಮಾಸುತ್ತಿವೆ. ರಾಮಚಂದ್ರರಾಯರ ಅಂತ್ಯ ಸಂಸ್ಕಾರದ ಸ್ಥಳ ಕೇವಲ ಒಂದು ಗುರುತು ಸ್ಥಳವಾಗಿದೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳೇ ಕಳೆದಿವೆ. ರಾಮಚಂದ್ರರಾವ್ ನಿಧನರಾಗಿ 31ವರ್ಷ ಕಳೆದರೂ ಸ್ಮಾರಕ ನಿರ್ಮಿಸಲು ಮಾತ್ರ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆಯ ಇಲಾಖೆ ಮೀನಮೇಷ ಎಣಿಸುತ್ತಿರುವುದು ಸರ್ಕಾರ ಹಾಗೂ ಬುದ್ಧಿಜೀವಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. 

ಉದ್ಯಮವಾಗಿಯಷ್ಟೇ ಉಳಿದ ಆಶ್ರಮ: ಸ್ವದೇಶಿ ಚಳವಳಿಯ ಐತಿಹ್ಯವಾಗಿ ಉಳಿದಿರುವ ಖಾದಿ ನೇಯ್ಗೆ ಘಟಕವೂ ಈಗ ಕೇವಲ ಉದ್ಯಮವಾಗಿ ಅಷ್ಟೇ ಉಳಿದಿದೆ.  ಕರ್ನಾಟಕ ನವೋದಯ ಸಂಘವು ಘಟಕವನ್ನು ಮುನ್ನಡೆಸುತ್ತಿದೆಯಾದರೂ ರಾಮಚಂದ್ರರಾಯರಿಗೆ ಸಿಕ್ಕ ಒಂದು ಪ್ರಶಂಸನಾ ಪತ್ರ ಹಾಗೂ ಅವರು ಖಾದಿ ಘಟಕ ಪ್ರಾರಂಭಿಸಿದ ಒಂದು ಚಿತ್ರ ಹೊರತಾಗಿ ಬೇರಾವುದೇ ಕುರುಹುಗಳನ್ನು ಉಳಿಸುವ ಕೆಲಸಕ್ಕೂ ಸಂಘ ಮನಸ್ಸು ಮಾಡಿಲ್ಲ. 52 ಮಹಿಳೆಯರು, ಇಬ್ಬರು ಪುರುಷರು ಸೇರಿ 54ಮಂದಿ ಖಾದಿ ನೇಯುವ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸ್ಮಾರಕದ ಬಗ್ಗೆ ಸರ್ಕಾರದ ಗಮನ ಸೆಳೆದು ಇದನ್ನು ಉಳಿಸುವ ಪ್ರಯತ್ನ ನಡೆಯದೆ ಇರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ನಾಲೆಗೆ ಹೆಸರಿಟ್ಟ ಗ್ರಾಮಸ್ಥರು..!

ರಾಮಚಂದ್ರ ರಾಯರ ಹೆಸರನ್ನು ಗ್ರಾಮದ ಸಮೀಪ ಹರಿಯುವ ನಾಲೆಗೆ ಇಡುವ ಮೂಲಕ ಗ್ರಾಮಸ್ಥರೇ ಅವರ ಹೆಸರನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆದರೆ, ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿತ ಅನೇಕರು ಅವರ ಹೆಸರು ಚಿರಾಸ್ಥಾಯಿಗೊಳಿಸದಿರುವ ಕೆಲಸಕ್ಕೆ ಮುಂದಾಗದಿರುವುದು ವಿಷಾಧನೀಯ. 

ಭವಿಷ್ಯಕ್ಕಾದರೂ ಹೆಸರಿನ ಕುರುಹು ಉಳಿಸಿ

ರಾಜಕೀಯ ಧುರೀಣರ ಭರವಸೆಯ ಹೊರತು ಸ್ಮಾರಕ ನಿರ್ಮಾಣ ಆಗದ್ದರಿಂದ ಬೇಸತ್ತ ಗ್ರಾಮಸ್ಥರೇ ಗಾಂಧಿ ಆಶ್ರಮದ ಬಳಿ ಸ್ಮಾರಕಕ್ಕೆ ಮುಂದಾಗಿದ್ದರು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ರಾಮಚಂದ್ರರಾವ್ ಅವರ ಸ್ಮಾರಕವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತು. ಸ್ವಾತಂತ್ರ್ಯ ಬಂದ 50 ವರ್ಷದ ನೆನಪಿಗಾಗಿ ಚಾಮುಂಡಿಪುರಂನಲ್ಲಿರುವ ಅವರ ಮನೆಯನ್ನೇ ಸ್ಮಾರಕವಾಗಿಸಲು ಸರ್ಕಾರ ಒಲವು ತೋರಿದಾಗ, ರಾಮಚಂದ್ರರಾಯರ ಸೊಸೆ ಕೃಷ್ಣವೇಣಿ ಅವರು ತಗಡೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳ ಮತ್ತು ವಾಸವಿದ್ದ ಮನೆಯನ್ನು ಸ್ಮಾರಕವಾಗಿಸಲು ಮನವಿ ಮಾಡಿದರು. ಆದರೆ, ಈವರೆಗೆ ಏನೂ ಆಗಿಲ್ಲ. ಯುವ ಪೀಳಿಗೆಗೆ ಹಾಗೂ ಭವಿಷ್ಯದ ಮಕ್ಕಳಿಗಾದರೂ ತಗಡೂರು ರಾಮಚಂದ್ರರ ಬಗ್ಗೆ ತಿಳಿಸಿ ಕೊಡಲು ಹಾಗೂ ಮೈಸೂರು ಗಾಂಧಿಯನ್ನು ನೆನಪು ಮಾಡಿಕೊಡಲು ಸ್ಮಾರಕ ನಿರ್ಮಾಣ ಮಾಡಲಿ.

-ಟಿ.ಜಿ.ಸತ್ಯನಾರಾಯಣ್, ತಗಡೂರು (ರಾಮಚಂದ್ರರಾವ್ ಸಂಬಂಧಿ).

ಗಾಂಧಿ ಓಡಾಡಿದ ನೆಲ:

ಮೈಸೂರು ರಾಜ್ಯಕ್ಕೆ 1932ರಲ್ಲಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ ಸಂದರ್ಭ ಸ್ವಾತಂತ್ರ್ಯ ಚಳವಳಿಗಳಲ್ಲಿ ತಗಡೂರು ರಾಮಚಂದ್ರರಾವ್ ಪಾಲ್ಗೊಂಡಿದ್ದರು. 1934ರಲ್ಲಿ ತಗಡೂರು ಮತ್ತು ಬದನವಾಳು ಗ್ರಾಮಗಳಲ್ಲಿ ಸ್ಥಾಪನೆಯಾಗಿದ್ದ ಖಾದಿ ಸಹಕಾರ ಸಂಘಗಳಿಗೆ ಗಾಂಧೀಜಿ ಅವರನ್ನು ಆಹ್ವಾನಿಸಲಾಗಿತ್ತು. ಗಾಂಧಿ ಅವರು ಖಾದಿ ಕೇಂದ್ರವನ್ನು ವೀಕ್ಷಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ನೆನಪುಗಳನ್ನು ಇಂದಿಗೂ ಅಲ್ಲಿನ ಜನರು ಹೇಳುತ್ತಾರೆ.

Leave a Reply

Your email address will not be published. Required fields are marked *