ಮೈಸೂರು ನಗರಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಪಟ್ಟ!

ಮೈಸೂರು: ಮೈಸೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಂದಾ ಪಾಲನೇತ್ರ ಅವರು ಬಹುಮತದೊಂದಿಗೆ ಆಯ್ಕೆಯಾಗುವ ಮೂಲಕ ಮೇಯರ್ ಸ್ಥಾನವನ್ನು ಅಲಂಕರಿಸಿದ್ದು, ಆ ಮೂಲಕ ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಮಲ ಅರಳುವಂತಾಗಿದೆ.

ಹಾಗೆನೋಡಿದರೆ ಬಿಜೆಪಿಗೆ ಮೇಯರ್ ಪಟ್ಟ ಅಲಂಕರಿಸುವುದು ಬಹುದಿನಗಳ ಕನಸಾಗಿದ್ದು ಅದು ಈಗ ನನಸಾಗಿದೆ. ಆದರೆ ಇದರ ಹಿಂದೆ ಮೌನವಾಗಿದ್ದುಕೊಂಡೇ ಕಮಲ ನಾಯಕರು ತಂತ್ರ ನಡೆಸಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಮೈಸೂರಿನ ಉಸ್ತುವಾರಿ ಹೊಂದಿರುವ ಸಚಿವ ಎಸ್.ಟಿ. ಸೋಮಶೇಖರ್ ಅವರ ಕಾರ್ಯತಂತ್ರವಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಮೂರು ಪಕ್ಷಗಳಿಗೂ ಮೈಸೂರು ನಗರಪಾಲಿಕೆಯಲ್ಲಿ ಮೇಯರ್ ಸ್ಥಾನ ಪಡೆಯುವುದು ಪ್ರತಿಷ್ಠೆಯಾಗಿತ್ತು. ಕಾಂಗ್ರೆಸ್ ಜೆಡಿಎಸ್ ಬೆಂಬಲದಿಂದಷ್ಟೆ ಮೇಯರ್ ಸ್ಥಾನಗಿಟ್ಟಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಜೆಡಿಎಸ್ ನಿಲುವು ಬಿಜೆಪಿಗೆ ಲಾಭತಂದುಕೊಡುವುದರೊಂದಿಗೆ ಮೊದಲ ಬಾರಿಗೆ ಕಮಲ ಅರಳಲು ಹಾದಿ ಸುಗಮ ಮಾಡಿಕೊಟ್ಟಂತಾಗಿದೆ. ಇದು ಕಮಲ ಪಾಳಯದಲ್ಲಿ ಸಂಭ್ರಮನ್ನುಂಟು ಮಾಡಿದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟು ಕೊಡಲೇ ಬಾರದೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ಮುಖಂಡರಿಗೆ ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲಿ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸಿರುವುದು ಭಾರೀ ಮುಖಭಂಗವನ್ನುಂಟು ಮಾಡಿರುವುದಂತು ನಿಜ.

ಜೆಡಿಎಸ್ ಮನವೊಲಿಸುವಲ್ಲಿ ಕಾಂಗ್ರೆಸ್ ಭಾರೀ ಕಸರತ್ತು ಮಾಡಿತ್ತು. ಆದರೆ ಬಿಜೆಪಿ ಮಾತ್ರ ಯಾವುದೇ ಗೌಪ್ಯತೆಯನ್ನು ಬಿಟ್ಟು ಕೊಡದೆ ತಮ್ಮ ತಂತ್ರವನ್ನು ಮುಂದುವರೆಸಿದ್ದರು.  ಆದರೆ ಈ ಹಿಂದೆಯೇ ಜೆಡಿಎಸ್ ಮುಖಂಡರಾದ ಹಾಗೂ ಶಾಸಕರಾದ ಸಾ.ರಾ. ಮಹೇಶ್ ಅವರ ಜತೆ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸಂಸದರು, ಶಾಸಕರು, ಬಿಜೆಪಿ ನಗರಾಧ್ಯಕ್ಷರು, ಮುಡಾ ಅಧ್ಯಕ್ಷರ ಜೊತೆಗೂಡಿ ಭೇಟಿಯಾಗಿ ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಅದೆಲ್ಲದರ ಫಲವಾಗಿ  ಸುನಂದಾ ಪಾಲನೇತ್ರ ಅವರು ಮೇಯರ್ ಪಟ್ಟ ಅಲಂಕರಿಸುವಂತಾಗಿದೆ. ಕಳೆದ ಕೆಲವು ದಿನಗಳಿಂದ ಇಡೀ ರಾಜಕೀಯ ವಲಯ ವೈಸೂರಿನತ್ತ ಮುಖ ಮಾಡಿತ್ತು. ಜನ ಕೂಡ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಕೊನೆಗೂ ಎಲ್ಲ ಕುತೂಹಲಕ್ಕೆ ತೆರೆಬಿದ್ದಿದೆ.

ಬಿಜೆಪಿಗೆ ಮೇಯರ್ ಪಟ್ಟ ಲಭಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಹೊಂದಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಲಿ ಎಂದು  ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು, ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿದೆ, ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದು  ಶುಭಹಾರೈಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು, ಬಹುವರ್ಷಗಳ ಕನಸು ಕೊನೆಗೂ ಈಡೇರಿದಂತಾಗಿದೆ. ಇದದಲ್ಲಿ ನಮ್ಮ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಕಾರ್ಯತಂತ್ರ ಅಡಗಿದೆ ಎಂದಿದ್ದಾರೆ. ಇಷ್ಟೇ ಅಲ್ಲದೆ ಶಾಸಕ ರಾಮದಾಸ್, ಎಲ್ ನಾಗೇಂದ್ರ. ಬಿಜೆಪಿ ನಗರಾಧ‍್ಯಕ್ಷ ಶ್ರೀವತ್ಸ ಸೇರಿದಂತೆ ಹಲವು ನಾಯಕರು ಹರ್ಷ ವ್ಯಕ್ತಪಡಿಸಿದ್ದು ನೂತನ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *