ಚಾಮರಾಜನಗರ: ಕಾಡಿನಿಂದ ನಾಡಿಗೆ ಬಂದ ಜಾಂಬವಂತ ಜನರನ್ನು ನೋಡಿ ಮರವೇರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕೋಟೆಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯದಿಂದ ಆಹಾರ ಅರಸಿ ಕೋಟೆಕೆರೆ ಗ್ರಾಮದ ವರದ ನಾಯ್ಕ ಎಂಬುವರ ಜಮೀನಿನ ಬಳಿ ಜಾಂಬವಂತ ಅರ್ಥಾತ್ ಕರಡಿಗಳು ಬಂದಿದ್ದು, ರೈತರನ್ನು ನೋಡಿ ಒಂದು ಕರಡಿ ಕಾಡಿಗೆ ಓಡಿದರೆ ಮತ್ತೊಂದು ಮೂರು ವರ್ಷದ ಕರಡಿ ಸುಮಾರು 60 ಅಡಿಯ ಬೃಹತ್ ಹುಣಸೇ ಮರದ ತುತ್ತ ತುದಿಗೆ ಏರಿ ಎಲೆಗಳ ಮಧ್ಯೆ ಅವಿತು ಕುಳಿತಿದೆ.

ಈ ವಿಷಯ ತಿಳಿದು ಕೋಟೆಕೆರೆ ಗ್ರಾಮ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನ ಸ್ಥಳಕ್ಕೆ ಬಂದಿದ್ದು ಮರದಲ್ಲಿದ್ದ ಕರಡಿಯನ್ನು ನೋಡಲು ಮುಗಿ ಬಿದ್ದಿದ್ದಾರೆ ಇದರಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ಅರಿಶಿಣ ಮತ್ತು ಮೆಣಸಿನಕಾಯಿ ಬೆಳೆಯು ಜನರ ಕಾಲ್ತುಳಿತಕ್ಕೆ ಸಿಲುಕಿ ನಾಶವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಓಂಕಾರ ಅರಣ್ಯವಲಯದ ಉಪ ಅರಣ್ಯ ವಲಯಾಧಿಕಾರಿ ಅಮರ್ ಮತ್ತು ಬೇಗೂರು ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ಸಿಬ್ಬಂದಿಯೊಂದಿಗೆ ತೆರಳಿ ಜನರನ್ನು ನಿಯಂತ್ರಿಸಿ ಪಟಾಕಿ ಸಿಡಿಸಿ, ಸ್ವಲ್ಪ ದೂರದಲ್ಲಿ ಬೆಂಕಿಯನ್ನು ಹಚ್ಚಿ, ತಮಟೆ ಶಬ್ಧ ಮಾಡಿದರೂ ಕೂಡ ಕರಡಿ ಮರದಿಂದ ಕೆಳಗೆ ಇಳಿಯಲ್ಲವಾದರೂ ಬಳಿಕ ತಾನಾಗಿಯೇ ಮರದಿಂದ ಇಳಿದು ಕಾಡಿನತ್ತ ತೆರಳಿದೆ.