ಪಿರಿಯಾಪಟ್ಟಣ: ಯುವಕನ ಹತೈಗೈದು ಶವವನ್ನು ಪಟ್ಟಣದ ಅರಸಿಕೆರೆಯಲ್ಲಿ ಎಸೆದು ಪರಾರಿಯಾಗಿರುವ ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪಟ್ಟಣದ ಕೆ.ಎಂ ಬಡಾವಣೆ ನಿವಾಸಿ ಉದಯ್(24) ಎಂಬ ಯುವಕನನ್ನು ಕೊಲೆ ಮಾಡಿ ಪಟ್ಟಣದ ಅರಸಿನಕೆರೆಯಲ್ಲಿ ಎಸೆದು ಹಂತಕರು ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಸಾರ್ವಜನಿಕರು ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಹುಣಸೂರು ಉಪವಿಭಾಗ ಡಿವೈಎಸ್ಪಿ ರವಿಪ್ರಸಾದ್, ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್, ಬಿ.ಆರ್ ಪ್ರದೀಪ್, ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸು ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಶವವನ್ನು ಕೆರೆಯಿಂದ ಹೊರ ತೆಗೆದಿದ್ದರು.
ಮೊದಲಿಗೆ ಇದು ಅಪರಿಚಿತ ವ್ಯಕ್ತಿ ಶವ ಎಂದೇ ನಂಬಲಾಗಿತ್ತು. ಹೀಗಾಗಿ ಬ್ರೂನೋ ಹೆಸರಿನ ಶ್ವಾನದೊಂದಿಗೆ ಸಿಬ್ಬಂದಿ ಹರೀಶ್ ಹಾಗೂ ವಿನಯ್ ಹಾಗೂ ಬೆರಳಚ್ಚು ವಿಭಾಗದ ಸಬ್ ಇನ್ಸ್ ಪೆಕ್ಟರ್ ಬಾಲು ಹಾಗೂ ಸಿಬ್ಬಂದಿ ಸಹಾಯದಿಂದ ಶೋಧ ಕಾರ್ಯ ಕೈಗೊಂಡರು. ಅಷ್ಟರಲ್ಲಿಯೇ ಸುತ್ತಮುತ್ತಲಿನ ಜನಕ್ಕೆ ವಿಷಯ ತಿಳಿದ ನೂರಾರು ಮಂದಿ ಕೆರೆ ಬಳಿಗೆ ಜಮಾಯಿಸಿದ್ದರಿಂದ. ಪೊಲೀಸರು ಜನರನ್ನು ಚದುರಿಸಬೇಕಾದ ಪರಿಸ್ಥಿತಿ ಎದುರಾಯಿತು.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಚೇತನ್ ಅವರು, ಶವದ ಗುರುತು ಪತ್ತೆ ಹಚ್ಚುವುದಾಗಿ ಹೇಳಿದರಲ್ಲದೆ, ಈ ಸಂಬಂಧ ಸುತ್ತಮುತ್ತಲಿನ ಪೊಲೀಸ್ ಠಾಣೆ ಸೇರಿದಂತೆ, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಚುರುಕುಗೊಳಿಸಿದರು. ಜತೆಗೆ ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದಿರುವುದು ದೃಢವಾದ ಹಿನ್ನಲೆಯಲ್ಲಿ ಎಸ್ಪಿ ಚೇತನ್, ಡಿವೈಎಸ್ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಅದರಂತೆ ಸಂಜೆಯೊಳಗಾಗಿ ಪೊಲೀಸ್ ಸಿಬ್ಬಂದಿ ವೀರೇಂದ್ರ ಕುಮಾರ್, ಪ್ರಭಾಕರ್, ಶ್ರೀನಿವಾಸ್, ರವೀಶ್, ಅಸ್ಲಮ್, ಅಂಟೋನಿ ಕ್ರೂಸ್, ಮತ್ತಿತರ ತಂಡ ಕಾರ್ಯಾಚರಣೆ ನಡೆಸಿ ಸತ್ತ ವ್ಯಕ್ತಿ ಕೆ.ಎಂ ಬಡಾವಣೆ ನಿವಾಸಿ ಉದಯ್ ಎಂಬುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.