ವೀಕೆಂಡ್ ನಲ್ಲಿ ಚಾಮರಾಜನಗರಕ್ಕೆ ಪ್ರವಾಸಿಗರಿಗಿಲ್ಲ ಪ್ರವೇಶ!

ಚಾಮರಾಜನಗರ: ಕೇರಳ  ಹಾಗೂ ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಮೂರನೇ ಅಲೆಯನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ ಜಿಲ್ಲಾಡಳಿತ ಪ್ರವಾಸಿಗರು, ಭಕ್ತರಿಗೆ ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡಿದೆ.

ಲಾಕ್ ಡೌನ್ ತೆರವಿನ ಬಳಿಕ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಅದನ್ನು ತಡೆಯುವ ಸಲುವಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರ ನಿರ್ಬಂಧಗೊಳಿಸಿ ಆದೇಶ ಹೊರಡಿಸಿದ್ದು, ಅದರಂತೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲ ದೇವಾಲಯಗಳು, ಬಂಡೀಪುರ ಸಫಾರಿ, ಭರಚುಕ್ಕಿ, ಹೊಗೇನಕಲ್ ಜಲಪಾತ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರಿಗಾಗಲಿ, ಭಕ್ತರಿಗಾಗಲಿ ಪ್ರವೇಶ ಇರುವುದಿಲ್ಲ.

ಉಳಿದ ದಿನಗಳಲ್ಲಿ ಜಂಗಲ್ ಸಫಾರಿಗೆ ತೆರಳಲು, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರು ತಂಗಲು 72 ಗಂಟೆ ಒಳಗಿನ‌ RT-PCR ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಕೇರಳದಿಂದ ಬರುವವರು ಎರಡು ಡೋಸ್ ಲಸಿಕೆ ಪಡೆದಿರಬೇಕು. ಇದರ ಜೊತೆಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ.

ಕಳೆದ ಕೆಲವು ವಾರಗಳಿಂದೀಚೆಗೆ ವೀಕೆಂಡ್ ಮೋಜು ಮಸ್ತಿಗೆ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗಿತ್ತಲ್ಲದೆ, ಹೆಚ್ಚಿನವರು ಕೋವಿಡ್ ನಿಯಮವನ್ನು ಉಲ್ಲಂಘಿಸುತ್ತಿದ್ದದ್ದು ಕಾಣಿಸಿತ್ತು. ಜತೆಗೆ ಪಕ್ಕದ ತಮಿಳುನಾಡು ಮತ್ತು ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವುದು ಕೂಡ ಆತಂಕ ಮೂಡಿಸಿದ್ದು, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *