ರಂಗಾಯಣದಲ್ಲಿ ವಾರಾಂತ್ಯದಲ್ಲಿ ಪರ್ವ ನಾಟಕ ಪ್ರದರ್ಶನ

ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಭಾರಿ ಸದ್ದು ಮಾಡಿದ ಪರ್ವ ನಾಟಕ ಮೈಸೂರು ರಂಗಾಯಣದ ಪ್ರಯೋಗವಾಗಿದ್ದು, ಕೊರೊನಾ ಕಾರಣದಿಂದ ಹೆಚ್ಚು ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ನಾಟಕ ಪ್ರದರ್ಶನವನ್ನು ವಾರಾಂತ್ಯದ ಸೆ.4 ಮತ್ತು ಸೆ.5 (ಶನಿವಾರ ಮತ್ತು ಭಾನುವಾರ) ರಂದು ನಡೆಸಲಾಗುತ್ತಿದೆ.

ಬೆಳಗ್ಗೆ 10 ಗಂಟೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ನಾಟಕದಲ್ಲಿ 4 ವಿರಾಮಗಳಿದ್ದು, ಈ ವಿರಾಮಗಳಲ್ಲಿ ಪ್ರೇಕ್ಷಕರಿಗೆ ಉಪಹಾರ ಮತ್ತು ಚಹಾ ಮತ್ತು ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆಯ ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ.

ರಂಗಾಯಣ ಮೈಸೂರು ಡಾ. ಎಸ್.ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಯನ್ನು ಮಹಾ ರಂಗಪ್ರಯೋಗವಾಗಿ ಪ್ರಕಾಶ್ ಬೆಳವಾಡಿ ರಂಗರೂಪಗೊಳಿಸಿ, ನಿರ್ದೇಶಿಸಿದ್ದಾರೆ. ‘ಪರ್ವ’ಮಹಾ ರಂಗಪ್ರಯೋಗದ ಯಶಸ್ವಿ ಪ್ರದರ್ಶನ ನೀಡಿ ದೇಶದಾದ್ಯಂತ ದೊಡ್ಡ ಸುದ್ಧಿಯಾಗಿದೆ. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್-19 ರ ಕಾರಣದಿಂದ ಇದರ ಪ್ರದರ್ಶನ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ 7 ಪ್ರದರ್ಶನಗಳು ಮಾತ್ರ ಆಗಿತ್ತು. ಇದೀಗ ಮತ್ತೆ ನೋಡುವ ಅವಕಾಶ ದೊರೆತಿದೆ.

ಇನ್ನು ನಾಟಕದ ಕುರಿತಾಗಿ ಹೇಳುವುದಾದರೆ ಶತಾವಧಾನಿ ಆರ್ ಗಣೇಶ್, ಕಾದಂಬರಿಕಾರ ಭೈರಪ್ಪನವರು, ರಂಗಾಯಣ ನಿರ್ದೇಶಕರು ತಮ್ಮ ನುಡಿಗಳಲ್ಲಿ ಸಾಕಷ್ಟು ಹೇಳಿದ್ದಾರೆ. ಕಾದಂಬರಿಯನ್ನು ರಂಗಪಠ್ಯವನ್ನಾಗಿಸುವಾಗ ಪ್ರಕಾಶ್ ಬೆಳವಾಡಿ ಅವರು ಮೂಲಕೃತಿಗೆ ಯಾವುದೇ ರೀತಿಯಲ್ಲಿ ಲೋಪವಾಗದಂತೆ ಎಚ್ಚರವಹಿಸಿದ್ದಾರೆ. ಕಾದಂಬರಿಕಾರ ಯಾವ ಧ್ವನಿಯನ್ನು ತಮ್ಮ ಕೃತಿಯ ಮೂಲಕ ಧ್ವನಿಸಲು ಹೊರಟಿದ್ದಾರೋ ಅದಕ್ಕೆ ಪೂರಕವಾಗಿ ರಂಗಪಠ್ಯವಿದೆ. ನಮ್ಮದೇನೋ ಹೊಸ ವ್ಯಾಖ್ಯಾನ ಹೇಳಲು ಹೊರಟಿಲ್ಲ. ಒಟ್ಟಾರೆ ಕಾದಂಬರಿನಿಷ್ಠ ರಂಗಪಠ್ಯ. ಆದರೆ ಕಾದಂಬರಿಯಲ್ಲಿ ಇರುವುದೆಲ್ಲವನ್ನು ರಂಗದಲ್ಲಿ ತರಲು ಅಸಾಧ್ಯ. ರಂಗಭೂಮಿಗೂ ಒಂದು ಮಿತಿ ಇದೆ. ನಾಟಕಕ್ಕೆ ಒಂದು ಸಮಯ ಅಂತ ಇದೆ. ಅದನ್ನು ಸರಿದೂಗಿಸಬೇಕಾದ ಅನಿವಾರ್ಯತೆಯೂ ಇದೆ.

ರಂಗಪಠ್ಯದ ಉದ್ದಕ್ಕೂ ಗಂಡಿನ ಅಹಂನ್ನು ಮೆಟ್ಟಿ ನಿಲ್ಲುವ ಹೆಣ್ಣಿನ ಧ್ವನಿ ನಾಟಕದ ವಸ್ತುವಾಗಿ ನಿಲ್ಲುತ್ತದೆ. ಪಾಂಡವರೈವರಿಗೆ ಪತ್ನಿಯಾಗಿ ತ್ಯಾಗ ಮೆರೆದ ದ್ರೌಪದಿ ಎಲ್ಲದರಲ್ಲೂ ಒಂಟಿ. ಹೆಣ್ಣಿನ ಶೋಷಣೆಯೇ ಇದು. ಅಭಿಮನ್ಯು ಸತ್ತಾಗ ಸುಭದ್ರೆಯನ್ನು ತಬ್ಬಿ ರೋಧಿಸುವ ಅರ್ಜುನ, ಘಟೋತ್ಕಜ ಅಸುನೀಗಿದಾಗ ಹಿಡಿಂಬಿಯನ್ನು ಅಪ್ಪಿ ಬೊಬ್ಬಿಡುವ ಭೀಮ, ಇವರೆಲ್ಲ ಅಶ್ವತ್ಥಾಮ ದ್ರೌಪದಿಯ ಮಕ್ಕಳನ್ನು  ಕೊಂದಾಗ ಮೂಕರಾಗುತ್ತಾರೆ. ಆದರೆ ದ್ರೌಪದಿ ಸಿಡಿಯುತ್ತಾಳೆ. ಮಕ್ಕಳನ್ನು ಕಳೆದುಕೊಂಡ ನೋವಲ್ಲ. “ಸುಭದ್ರೆಗೆ, ಹಿಡಿಂಬಿಗೆ, ಸಾಂತ್ವಾನ ಹೇಳಿದ ನೀವು. . . . ನನಗೆ? ಛೀ. ! ಸತ್ತವು ಕೇವಲ ದ್ರೌಪದಿ ಮಕ್ಕಳೇನು? ಹೆಣ್ಣನ್ನು ಹಣ್ಣಿನಂತೆ ಪಾಲು ಮಾಡಿಕೊಂಡವರಿಗೆ ಹೆಣ್ಣಿನ ನೋವು ಅರ್ಥವಾಗುವುದಿಲ್ಲ”.

ಇದೇ ರೀತಿ ಕುಂತಿ ಹೇಳುವ ಮಾತುಗಳು “ಹೆತ್ತ ಸೊಸೆಯ ಮಕ್ಕಳಲ್ಲದೆ ಹುಟ್ಟಿಸಿದವನ ಮಕ್ಕಳಾಗುತ್ತಾರೆಯೇ ಈ ವಂಶಕ್ಕೆ ಸೇರಿದ ಮೇಲೆ? ಇವನಪ್ಪ ಕುರುಡ. ಮದುವೆಗೆ ಮುಂಚೆ ಅವ್ವೆ ಎಂದರೇನಂತ ತಿಳಿದಿರಲಿಲ್ಲ. ಹೆಂಡತಿ ಬಸುರಾಗಿ ರುಚಿಹತ್ತಿದ ಮೇಲೆ ದಾಸಿಯರನ್ನು ಮೇಯಲು ಶುರು ಮಾಡಿದ್ದು. ಇಲ್ಲದಿದ್ದರೆ ಈ ದುರ್ಯೋಧನ ಗಾಂಧಾರಿಯ ಮಗನಾಗುತ್ತಿದ್ದನಾ? ಇವನ ಅಪ್ಪ ಅಂಬಿಕೆಯ ಮಗನಲ್ಲವೇ ವಿಧುರ?”

ಗಾಂಧಾರಿ ಕೃಷ್ಣನಿಗೆ ಹೇಳುವ ಮಾತುಗಳು “ಕೃಷ್ಣ, ನೂರು ಮಕ್ಕಳು ಅನ್ನುವುದು ಮಹಾರಾಜನದು. ಹಾಗಂತ ಅವನ ಲೆಕ್ಕ. ಈ ಗಾಂಧಾರಿ ಎನ್ನಿಸಿಕೊಂಡ ದಾಸಿ ಹೆತ್ತದ್ದು ಬರೀ ಹದಿನಾಲ್ಕು. ಜೊತೆಗೆ ಒಬ್ಬ ಅಳಿಯನೂ ಸತ್ತಿದ್ದಾನೆ. ನನ್ನ ದುಃಖ ಸಣ್ಣದು. ಮಹಾರಾಜನದರಷ್ಟು ದೊಡ್ಡದಲ್ಲ.” ಈ ಎಲ್ಲಾ ವ್ಯಂಗ್ಯ ಪೂರಿತ ಮಾತುಗಳು ಹೆಣ್ಣಿನ ಶೋಷಣೆಯನ್ನು ಪ್ರತಿಭಟಿಸುವ ಅವರ ಭಾವನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ರೂಪಕಗಳಾಗಿ ಸಾಗುತ್ತದೆ. ರಂಗಪಠ್ಯದುದ್ದಕ್ಕೂ ಪಾತ್ರಗಳು ಸಂಕೇತಗಳಾಗಿ ಧ್ವನಿಸುತ್ತವೆ. ಭೀಮನ ಬೆವರು, ದ್ರೌಪದಿಯ ಶೆಕೆ, ಬೆಳದಿಂಗಳ ಅರ್ಜುನ, ನಾಯಿಯಂತೆ ಸ್ವಾಮಿನಿಷ್ಠ ಕರ್ಣ, ಎಣ್ಣೆಯ ಕಮಟು ವಾಸನೆಯ ಧೃತರಾಷ್ಟ್ರ, ಪರ್ವತದಂತಹ ಕುಂತಿ ಹೀಗೆ. . . .  ಮಹಾಭಾರತವೊಂದು ಪುರಾಣವಾಗಿ ಉಳಿಯದೇ ಚಾರಿತ್ರಿಕ ಘಟನೆ ಎಂಬಂತೆ ಚಿತ್ರಿಸಿಕೊಂಡು ಸಾಗುತ್ತದೆ.

ಪರ್ವ ರಂಗಪಠ್ಯ ಏಳು ಗಂಟೆ ಮೂವತ್ತು ನಿಮಿಷಗಳ ಅವಧಿಯದ್ದು. ಇದನ್ನು ಐದು ಅಂಕಗಳಾಗಿ ವಿಂಗಡಿಸಲಾಗಿದೆ. ಈ ಐದು ಅಂಕಗಳಲ್ಲಿ ಒಂದು ಮತ್ತು ಎರಡನೇ ಅಂಕವನ್ನು ‘ಆದಿ ಪರ್ವ’ (ಪೂರ್ವರಂಗ). ಮೂರನೇ ಅಂಕ ‘ನಿಯೋಗ ಪರ್ವ’, ನಾಲ್ಕು ಮತ್ತು ಐದನೇ ಅಂಕ ‘ಯುದ್ಧ ಪರ್ವ’ವಾಗಿದೆ.

Leave a Reply

Your email address will not be published. Required fields are marked *