ಸ್ವಾಭಿಮಾನದ ಜಾಗೃತಿಗಾಗಿ ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ: ಚಕ್ರವರ್ತಿ ಸೂಲಿಬೆಲೆ

ಮೈಸೂರು: ಪ್ರಸ್ತುತ ದಿನಮಾನಗಳಲ್ಲಿ ಹೊಸ ಪೀಳಿಗೆಗೆ ಸಂಸ್ಕೃತವನ್ನು ಮುಟ್ಟಿಸಬೇಕಾದ ಜವಾಬ್ದಾರಿ ನಮ್ಮಮೇಲಿದೆ. ಸ್ವಾಭಿಮಾನದ ಜಾಗೃತಿಗಾಗಿ ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಯುವಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.

ಸುಧರ್ಮಾ ದಿನಪತ್ರಿಕೆ ವತಿಯಿಂದ ಇಲ್ಲಿನ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ನೂತನ ಸಂಸ್ಕೃತ ಕ್ಯಾಲೆಂಡರ್- 2022 ದಿನದರ್ಶಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶಭಕ್ತರ ಜಯಂತಿಗಳನ್ನು ಸೇರಿಸುವ ಮೂಲಕ ಉತ್ತಮವಾದ ದಿನದರ್ಶಿಕೆಯನ್ನು ರೂಪಿಸುತ್ತಿದೆ. ಭಾರತ ದೇಶದ ಮೇಲೆ ನಡೆದಿರುವ ಆಕ್ರಮಣಕ್ಕಿಂತಲೂ ಸಂಸ್ಕೃತ ಮೇಲೆ ಹೆಚ್ಚಾಗಿಯೇ ಆಕ್ರಮಣಗಳು ನಡೆದಿದೆ ಎಂದರು.

ಬ್ರಿಟಿಷರು ದೇಶದಲ್ಲಿ ಸಂಸ್ಕೃತ ಭಾಷೆಯನ್ನು ನಾಶ ಮಾಡಿದರೆ, ಭಾರತದ ಸಂಸ್ಕೃತಿಯನ್ನೇ ಬದಲಾಯಿಸಬಹುದು ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ದೇಶದಲ್ಲಿನ ಸ್ವಾಭಿಮಾನ ಇಂದಿಗೂ ದೇಶ- ಭಾಷೆ ಉಳಿದಿದೆ. ಇಂದಿಗೂ ಪ್ರಪಂಚದ ಯಾವುದೇ ಭಾಷೆಯೂ ಸಂಸ್ಕೃತದೊಂದಿಗೆ ಸ್ಪರ್ಧೆ ಮಾಡುವುದಿಲ್ಲ. ಏಕೆಂದರೆ, ಯಾವುದೇ ಒಂದು ವ್ಯಕ್ತಿ, ವಸ್ತುವನ್ನು ಹೆಸರಿಸುವಾಗಲೂ ಸಂಸ್ಕೃತ ಅದರ ಮೂಲದಿಂದಲೇ ತಿಳಿಸುವ ಪ್ರಯತ್ನ ಮಾಡುತ್ತದೆ ಎಂದು ಶ್ಲಾಘಿಸಿದರು.

ನಮ್ಮಭಾಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ. ಆದರೆ, ನಾವು ಇಂಗ್ಲಿಷ್‌ನಲ್ಲಿ ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ. ಆದ್ದರಿಂದಲೇ ಈಗಲೂ ಸಂಸ್ಕೃತವನ್ನು ಮೃತಭಾಷೆ ಎಂದು ಕರೆಯುತ್ತಾರೆ. ನಾವು ನಮ್ಮ ಮಕ್ಕಳಿಗೆ ಎಲ್ಲಿವರೆಗೆ ಸಂಸ್ಕೃತ ಕಲಿಸುವುದಿಲ್ಲವೋ?, ಸಂಸ್ಕೃತದಲ್ಲಿ ಸಂಭಾಷಣೆ ನಡೆಸುವುದಿಲ್ಲವೋ? ಅಲ್ಲಿಯವರೆಗೂ ಮೃತಭಾಷೆ ಎಂದೇ ಕರೆಯುತ್ತಾರೆ. ಆದ್ದರಿಂದ ಹೊಸ ಪೀಳಿಗೆಗೆ ಸಂಸ್ಕೃತವನ್ನು ಮುಟ್ಟಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಇಂದಿನ ಕೆಲವು ಸಿಕ್ಕರು ಪ್ರಧಾನಿಯನ್ನು ಕೊಂದೇ ಬಿಡಬೇಕು ಎನ್ನುವ ಪ್ರಯತ್ನ ಮಾಡಿದ್ದಾರೆ. ಅವರು ಗುರುಗೋವಿಂದ ಸಿಂಗ್ ಅದಕ್ಕಿಂಲೂ ಹಿಂದಿನವರ ತ್ಯಾಗವನ್ನು ಸ್ಮರಿಸಿಕೊಳ್ಳಬೇಕಿದೆ. ಅವರೆಲ್ಲರೂ ರಾಷ್ಟ್ರರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

– ಚಕ್ರವರ್ತಿ ಸೂಲಿಬೆಲೆ, ಯುವಬ್ರಿಗೆಡ್ ಸಂಸ್ಥಾಪಕ