ಮೈಸೂರು: ಬೆಟ್ಟ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಸೀಡ್ ಬಾಲ್ ಗಳನ್ನು ಮಳೆಗಾಲದಲ್ಲಿ ನೆಡುವುದರಿಂದ ಗಿಡಗಳು ಹುಟ್ಟಿ ಬೆಳೆಯುವಂತೆ ಮಾಡುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ತಮ್ಮನ್ನು ತೊಡಗಿಸಿಕೊಂಡಿವೆ.
ಅರಣ್ಯ ಬೆಳೆಸುವ ಹಲವು ವಿಧಾನಗಳಲ್ಲಿ ಸೀಡ್ ಬಾಲ್ ಗಳನ್ನು ಎಸೆಯುವುದು ಮತ್ತು ನೆಡುವುದು ಕೂಡ ಒಂದು ವಿಧಾನವಾಗಿದೆ. ವರ್ಷಕ್ಕೊಮ್ಮೆ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿ ಮತ್ತೆ ಮರೆತು ಬಿಡುವವರ ನಡುವೆ ವರ್ಷಪೂರ್ತಿ ಬೇರೆ, ಬೇರೆ ವಿಧಾನಗಳೊಂದಿಗೆ ಅರಣ್ಯಗಳನ್ನು ಬೆಳೆಸುವುದು ಕೂಡ ನಾವು ಪರಿಸರಕ್ಕೆ ನೀಡುವ ಕೊಡುಗೆಯಾಗಿದೆ.

ಈ ನಡುವೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಜಿಲ್ಲೆ ಹಾಗೂ ಸ್ಟೂಡೆಂಟ್ ಫಾರ್ ಡೆವಲಪ್ ಮೆಂಟ್ ಇದೀಗ ಆಕ್ಸಿಜನ್ ಚಾಲೆಂಜ್ ಅಭಿಯಾನ ಹಮ್ಮಿಕೊಂಡಿದ್ದು, ಆ ಮೂಲಕ ಮೈಸೂರು ಜಿಲ್ಲೆಯ ಆಯ್ದ ಬೆಟ್ಟಗುಡ್ಡಗಳಲ್ಲಿ ಸೀಲ್ ಬಾಲ್ ಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅದರಂತೆ ಜಿಲ್ಲೆಯ ಹದಿನಾರಿನ ಹುಳಿಮಾವು ಬೆಟ್ಟದಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಸೀಡ್ ಬಾಲ್ ಗಳನ್ನು ನೆಡಲಾಗಿದೆ. ಒಟ್ಟಾರೆ ಅಭಿಯಾನದ ಮೂಲಕ 5 ಲಕ್ಷ ಸಸಿಗಳು ಹಾಗೂ 5 ಲಕ್ಷ ಸಿಡ್ ಬಾಲ್ಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ.