ಶ್ರೀ ವ್ಯಾಸರಾಜೋ ವಿಜಯತೇ. ಶ್ರೀ ವ್ಯಾಸತೀರ್ಥ ವಿದ್ಯಾಪೀಠ,

ಮೈಸೂರು: ಸಂಸ್ಕೃತ ಮಾಸಾಚರಣೆ ನಿಮಿತ್ತ ನಗರದ ಶ್ರೀವ್ಯಾಸತೀರ್ಥ ವಿದ್ಯಾಪೀಠದ ವತಿಯಿಂದ ಮೈಸೂರಿನ ಜೆ.ಪಿ ನಗರದಲ್ಲಿರುವ ವಿಠಲ ಧಾಮದಲ್ಲಿ “ಸಂಸ್ಕೃತ ಆಪಣ ಪ್ರದರ್ಶಿನಿ” ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ಆಪಣ ಎಂದರೆ ಸಂಸ್ಕೃತದಲ್ಲಿ ವ್ಯಾಪಾರ ಮಳಿಗೆ ಎಂದು ಅರ್ಥ. ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ದಿನನಿತ್ಯ ಬಳಸುವ ಹಣ್ಣು ,ತರಕಾರಿ, ದಿನಸಿ ಪದಾರ್ಥಗಳ ಸಂಸ್ಕೃತ ಹೆಸರನ್ನು ಪರಿಚಯಿಸುವ ದೃಷ್ಟಿಯಿಂದ ವ್ಯಾಪಾರ ಮಳೆಗೆಯನ್ನು ನಿರ್ಮಿಸಿ ಅಲ್ಲಿ ಪ್ರತಿಯೊಂದು ಪದಾರ್ಥಗಳಿಗೆ ಸಂಸ್ಕೃತ ಹೆಸರನ್ನು ಫಲಕಗಳಲ್ಲಿ ಬರೆದು ಪ್ರದರ್ಶನ ಮಾಡಿ ಜನರಿಗೆ ಅರಿವು ಮೂಡಿಸಿರುವುದು ಮಾದರಿ ಕಾರ್ಯ ಎಂದರು.
ಸಂಸ್ಕೃತ ನಮ್ಮ ಅಖಂಡ ಭಾತರ ನೆಲದ ಮೂಲ ಭಾಷೆ. ಸಂಸ್ಕೃತ ವಿಶ್ವದ ಬಹುತೇಕ ಭಾಷೆಗಳ ಜನನಿ. ಗಣಕ ಯಂತ್ರಕ್ಕೆ ಆಂಗ್ಲಭಾಷೆಗಿಂತಲೂ ಅತಿ ಹೆಚ್ಚಿನ ರೀತಿಯಲ್ಲಿ ಹೊಂದುವ ಮಹತ್ವ ಪಡೆದ ಭಾಷೆ.ಇದನ್ನು
ಸಾಮಾನ್ಯ ಜನರಿಗೂ ಪರಿಚಯಿಸುವುದು ಇಂದು ಅನಿವಾರ್ಯ ಮತ್ತು ನಮ್ಮ ಕರ್ತವ್ಯ ವಾಗಿದೆ ಎಂದು ಡಾ. ಪ್ಯಾಟಿ ನುಡಿದರು.
ವಿದ್ಯಾಪೀಠದ 15 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ವಿವಿಧ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಗಮನ ಸೆಳೆಯಿತು.
ಬಹುಮಾನ:
ಪ್ರದರ್ಶನಿಯನ್ನು ನೋಡಿ ಐದು ಪದಾರ್ಥದ ಸಂಸ್ಕೃತದ ಹೆಸರನ್ನು ಹೇಳಿದ ಸಾರ್ವಜನಿಕ ರಿಗೆ ವಿಶೇಷ ಬಹುಮಾನವನ್ನು ಕೊಡಲಾಯಿತು. ಅನೇಕ ಜನರು ಉತ್ಸಾಹದಿಂದ ಭಾಗವಹಿಸಿ ಸಂಸ್ಕೃತದ ಹೆಸರುಗಳನ್ನು ಕೇಳಿ, ಉಚ್ಚಾರಣೆ ಮಾಡಿ, ಅರ್ಥ ತಿಳಿದು ಸಂಭ್ರಮಿಸಿದರು.
ಮೆಚ್ಚುಗೆ:
ಶ್ರಾವಣ ಮಾಸವನ್ನು ಸಂಸ್ಕೃತ ಮಾಸವೆಂದು ದೇಶಾದ್ಯಂತ ಆಚರಿಸುತ್ತಾರೆ. ಅದರ
ಅಂಗವಾಗಿ ನಡೆದ ಈ ವಿನೂತನ ಕಾರ್ಯಕ್ರಮ ಹಲವರ ಮೆಚ್ಚುಗೆ ಗಳಿಸಿತು.