ಮೈಸೂರು: ಶ್ರೀಗಂಧ ಮರವನ್ನು ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಆನಂದನಗರ ಗ್ರಾಮದ ಶೇಖ್ ರಿಯಾಜ್, ಸಿರಾಜ್ ಬೇಗ್, ಭರತ್, ಲಕ್ಷ್ಮಿಪುರ ಗ್ರಾಮದ ಸೋಮೇಶ್, ರಾಮನಗರ ಜಿಲ್ಲೆ ಕುಬ್ಬಕಲ್ಲರಹಳ್ಳಿ ಗ್ರಾಮದ ಶಿವಪ್ಪ ಎಂಬುವರೇ ಶ್ರೀಗಂಧ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳು.
ಇವರು ಕೊಪ್ಪ ಸಾಮಾಜಿಕ ಅರಣ್ಯದ ನಿಲವಾಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಶ್ರೀಗಂಧ ಮರವನ್ನು ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ವಲಯ ಅರಣ್ಯಾಧಿಕಾರಿ ಎಂ.ಎ ರತನ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಮಧುಸೂದನ್, ಅರಣ್ಯ ರಕ್ಷಕರಾದ ಸಂದೀಪ್ ನಾಯಕ, ಯಲುಗೂರೇಶ, ಸಿಬ್ಬಂದಿ ಮಹೇಶ, ಉಮಾಶಂಕರ, ರಂಗಸ್ವಾಮಿ, ಪುನೀತ್ ಕುಮಾರ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿದ್ದು ಆರೋಪಿಗಳು ಮಾಲು ಸಹಿತ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಂದ ಇಪ್ಪತ್ತು ಕೆಜಿ ಯಷ್ಟು ಶ್ರೀಗಂಧದ ತುಂಡುಗಳು ಹಾಗೂ ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸಿದ್ದ ಹತ್ಯಾರುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.