ಜುಲೈ 5, ಕರಾಮುವಿ ಆನ್ ಲೈನ್ ತರಬೇತಿ ಸಮಾರೋಪ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಹಮ್ಮಿಕೊಂಡಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನದ ಆನ್ ಲೈನ್ ತರಬೇತಿಯ ಸಮಾರೋಪ ಸಮಾರಂಭವು ಜುಲೈ 5 ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಅಂದು ನಡೆಯುವ ಕಾರ್ಯಕ್ರಮದಲ್ಲಿ ರೈಲ್ವೆ ಎಡಿಜಿಪಿ  ಭಾಸ್ಕರ್ ರಾವ್  ಅವರು ಬೆಂಗಳೂರಿನಿಂದಲೇ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ  ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು  ಮಾತನಾಡಲಿದ್ದಾರೆ. ಕರ್ಣಾಟಕ ಬ್ಯಾಂಕ್ನ ಪ್ರಧಾನ ಕಛೇರಿಯ ಎಂ.ಡಿ ಮತ್ತು ಸಿ.ಇ.ಒ ಎಸ್. ಎಂ. ಮಹಾಬಲೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯ ಅಧ್ಯಯನ ಪುಸ್ತಕ ‘ಮುಕ್ತಭಂಡಾರ’ ವನ್ನು ಬಿಡುಗಡೆ ಮಾಡಲಿದ್ದಾರೆ. ಕುಲಸಚಿವ ಪ್ರೊ.ಆರ್. ರಾಜಣ್ಣ ಉಪಸ್ಥಿತರಿರಲಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಬಗ್ಗೆ ಹೇಳಬೇಕೆಂದರೆ, 2011ರಲ್ಲಿ ಆರಂಭಗೊಂಡ ಕೇಂದ್ರವು ಹಲವು ತರಬೇತಿಗಳನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ತರಬೇತಿ ಹಾಗೂ ಯುಜಿಸಿ-ನೆಟ್ , ಕೆ-ಸೆಟ್ , ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಸೇರಿದೆ. ಕೊರೊನಾ ಕಾರಣದಿಂದ ಆನ್ ಲೈನ್ ತರಬೇತಿಯನ್ನೂ ಕುಲಪತಿಗಳ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದು, ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ  ಪರೀಕ್ಷೆಗೆ ತರಬೇತಿ ಕಳೆದ ಮೇ 15 ರಂದು ಪ್ರಾರಂಭವಾಗಿದ್ದು ದಿನಾಂಕ:05.07.2021ರಂದು ಮುಗಿಯಲಿದೆ ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 0821- 2515944 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *