ಶ್ರೀನಿವಾಸಪ್ರಸಾದ್ ಅವರ 73ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನ
ಮೈಸೂರು: ರಾಜಕೀಯವನ್ನು ಸಾಮಾಜಿಕ ಬದ್ಧತೆಯಾಗಿ ಸ್ವೀಕರಿಸಿದ್ದೇನೆ. ಪಕ್ಷ ಬಿಡುವ ಅನಿವಾರ್ಯ ಸಂದರ್ಭ ಸೃಷ್ಟಿಯಾದಾಗ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಪಕ್ಷ ಬದಲಾಯಿಸಿದ್ದೆನೆ. ಆದರೆ ಎಂದಿಗೂ ತತ್ವ, ವಿಚಾರ ಬದಲಾಗಿಲ್ಲ. ಅದು ಕರ್ನಾಟಕದ ಜನತೆಗೂ ಗೊತ್ತು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.
ಇನ್ನು ಮೂರು ವರ್ಷ ಕಳೆದರೆ ರಾಜಕೀಯ ಪ್ರವೇಶಿಸಿ ಅರ್ಧ ಶತಮಾನ ತುಂಬುತ್ತದೆ.1974ರಿಂದ ಪಕ್ಷೇತರ ಅಭ್ಯರ್ಥಿಯಾಗಿ 2019ರ ಚುನಾವಣೆಗೆ ತನಕ ಒಟ್ಟು 14 ಚುನಾವಣೆಗಳನ್ನು ಎದುರಿಸಿzನೆ. ಜ್ಞಾಪಕವಿರುವ ವಾಸ್ತವಕ್ಕೆ ಹತ್ತಿರವಾದ ಹಲವು ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದೆನೆ.

1950ರ ಚುನಾವಣೆಯಲ್ಲಿ ಗೆದ್ದು ಪ್ರಥಮ ಬಾರಿ ಲೋಕಸಭೆ ಪ್ರವೇಶಿಸಿದಾಗ ಇಂದಿರಾ ಗಾಂಧಿ ಪ್ರಧಾನಿ, ವಾಜಪೇಯಿ ವಿರೋಧ ಪಕ್ಷದ ನಾಯಕರು. ಅವತ್ತಿಗೆ ಪಾರ್ಲಿಮೆಂಟ್ ಮಹಾವಿದ್ಯಾಲಯ. ನಾನು ಪಾರ್ಲಿಮೆಂಟಿನ ವಿದ್ಯಾರ್ಥಿ. ಅದು ಅದ್ಭುತವಾದ ನೆನಪು ಎಂದು ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ಸಿಎಂ ಗಾದಿ ಬಾಲ್ಯದ ಕನಸು: ಮುಖ್ಯಮಂತ್ರಿ ಪದವಿ ಆಸೆ ಇಲ್ಲ ಅಂತ ಹೇಳಲಾರೆ. ಅದು ಬಾಲ್ಯದ ಕನಸು. ಹೈಕಮಾಂಡ್ಗೆ ಕೂಡ ನನ್ನ ಮುಖ್ಯಮಂತ್ರಿ ಮಾಡುವ ಆಸೆಯಿತ್ತು. ಬದಲಾದ ಪರಿಸ್ಥಿತಿ, ರಾಜಕೀಯ ಸನ್ನಿವೇಶದಲ್ಲಿ ಅದು ಈಡೇರಲಿಲ್ಲ, ಕ್ರಮೇಣ ಆ ಆಸೆ ಬಿಡಬೇಕಾಯಿತು.
ಶುಕ್ರವಾರ (ಆ.6) 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರು ಸ್ವರಚಿತ ನಾನು ಎದುರಿಸಿದ 14 ಚುನಾವಣೆಗಳ ಅವಲೋಕನ ಪುಸ್ತಕವನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಇದಾದ ಬಳಿಕ ನೆನಪುಗಳು ಎಂಬ ಆತ್ಮಕತೆ ಬರೆಯಲು ನಿರ್ಧರಿಸಿರುವ ಪ್ರಸಾದ್ ಅವರು, ಅದರಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ದಾಖಲು ಮಾಡುವುದಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನನಗೂ ಮುಖ್ಯಮಂತ್ರಿಯಾಗುವ ಆಸೆಯಿತ್ತು, ಇಲ್ಲ ಎಂದು ಹೇಳುವುದಿಲ್ಲ. ಸತತ ನಾಲ್ಕು ಬಾರಿ ಪಾರ್ಲಿಮೆಂಟ್ ಸದಸ್ಯನಾಗಿ ಆಯ್ಕೆಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು, ಉಳಿದ ಎಲ್ಲ ಜವಾಬ್ದಾರಿ ನಿರ್ವಹಿಸಿದೆ. 1996ರ ಲೋಕಸಭಾ ಚುನಾವಣೆಯಲ್ಲಿ ಬದನವಾಳು ಗಲಾಟೆಯಿಂದ ರಾಜಶೇಖರಮೂರ್ತಿ, ಜನಾರ್ದನ ಪೂಜಾರಿ ಇತರರು ಪಿತೂರಿ ಮಾಡಿ ಐದನೇ ಬಾರಿಗೆ ಟಿಕೆಟ್ ತಪ್ಪಿಸಿದರು.

ಆಗ ಟಿಕೆಟ್ ದೊರೆತಿದ್ದರೆ ಪಿಸಿಸಿ ಅಧ್ಯಕ್ಷನಾಗುತ್ತಿದ್ದೆ. ಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗುವುದು ಕಾಂಗ್ರೆಸ್ ಸಂಸ್ಕೃತಿ. ಇವತ್ತಿನಂತೆ ಲಾಬಿ ಮಾಡಬೇಕಿರಲಿಲ್ಲ. ಹಣದಾಸೆ ಇಲ್ಲ. ನನ್ನ ಸಿಎಂ ಮಾಡಬೇಕೆಂದು ಹೈಕಮಾಂಡ್ಗೂ ಆಸೆಯಿತ್ತು. ಆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ 1 ಲಕ್ಷದ 60 ಸಾವಿರ ಮತಗಳನ್ನು ಪಡೆದು ಸೋತೆ. ಆಸೆ ಕೈಬಿಟ್ಟೆ. ಇವತ್ತು ಹಣ, ಜಾತಿ, ಲಾಬಿ ಮುಖ್ಯವಾಗಿದೆ. ದುಡ್ಡು ಇರುವವರು ಮಾತ್ರ ಉನ್ನತ ಹುದ್ದೆ ಪಡೆಯುತ್ತಿದ್ದಾರೆ. ಹಿಂದೆ ಇದೆಲ್ಲ ಇರಲಿಲ್ಲ ಎಂದರು.
ಎರಡು ಬಾರಿ ಅವಕಾಶ ಇತ್ತು: ಕರ್ನಾಟಕದಲ್ಲಿ ದಲಿತ ವರ್ಗದವರು ಸಿಎಂ ಆಗಬೇಕೆಂದು ದಲಿತರಲ್ಲಿ ಬಹಳ ಆಸೆಯಿದೆ. ಎರಡು ಬಾರಿ ಆ ಅವಕಾಶ ದೊರೆತಿತ್ತು. ಹೈಕಮಾಂಡ್ ಕೂಡ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಗೆ ಒಪ್ಪಿಗೆ ನೀಡಿತ್ತು. ಅದು ಈಡೇರಲಿಲ್ಲ. ಈಗಲೂ ದಲಿತ ಸಿಎಂ ಕೂಗಿದೆ. ಮುಂದೆ ದಲಿತ ಮುಖ್ಯಮಂತ್ರಿ ಯಾರಾಗುವರೆಂದು ಹೇಳಲಾರೆ ಎಂದರು ಪ್ರಸಾದ್.
ಮಲ್ಲಿಕಾರ್ಜುನ ಖರ್ಗೆ 2004ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅಹಿಂದ ಬಿಟ್ಟು ಸಿದ್ದರಾಮಯ್ಯ ಆಗಷ್ಟೇ ಕಾಂಗ್ರೆಸ್ ಸೇರಿದ್ದರು. ಅವರಿಗೆ ಯಾವ ಸ್ಥಾನಮಾನ ನೀಡಿರಲಿಲ್ಲ. ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಚುನಾವಣೆಗೆ ಹೋದೆವು. ಬಹುಮತ ಬರಲಿಲ್ಲ. ಖರ್ಗೆ ಅವರು ರಾಜ್ಯದಲ್ಲಿ ತಮ್ಮದೇನು ನಡೆಯುವುದಿಲ್ಲ ಎಂದು ೨೦೦೮ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕಾರ್ಮಿಕ ಸಚಿವರಾದರು.
2013ರಲ್ಲಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಪರಮೇಶ್ವರ್ ಅವರೊಂದಿಗೆ ರಾಹುಲ್ ಗಾಂಧಿ ಮಾತಾಡಿದ್ದರು. ಆದರೆ, ಪರಮೇಶ್ವರ್ ಚುನಾವಣೆಯಲ್ಲಿ ಸೋತರು. ಪರಮೇಶ್ವರ್ ಸೋಲಿಸಿದ್ದು ಬೇರೆ. ಎಲ್ಲರನ್ನೂ ಸೋಲಿಸಲು ಪ್ರಯತ್ನಿಸುತ್ತಾರೆ. ಗೆಲ್ಲಬೇಕಿತ್ತು. ಸೋತು ಸಿದ್ದರಾಮಯ್ಯಗೆ ಸರಾಗ ಮಾಡಿದರು.
ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರ್ಮಸಿಂಗ್ ಮುಖ್ಯಮಂತ್ರಿಯಾದರು. ದಲಿತರ ಸಿಎಂ ಮಾಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧರಿದ್ದಾರೆ. ಕರ್ನಾಟಕದಲ್ಲಿ ನಾಯಕರ ಕೊರತೆಯೂ ಇಲ್ಲ. ರಾಜಕೀಯ ಅವಕಾಶ ಬಳಸಿಕೊಂಡು ಅಧಿಕಾರ ಪಡೆಯಬೇಕು ಎಂದು ಸಲಹೆ ನೀಡಿದರು.

ಸಿದ್ದು ಮೇಲಿನ ಕೋಪ ಮಾಗದ ಗಾಯ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ರೀತಿಯಲ್ಲೂ ಸಹಕಾರ ಕೊಟ್ಟೆ. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಿ ವಿಶ್ರಾಂತಿ ಜೀವನ ನಡೆಸಲು ನಿರ್ಧರಿಸಿದ್ದೆ. ಸೌಜನ್ಯಕ್ಕಾದರೂ ನನ್ನ ಕೇಳದೆ, ಸಚಿವ ಸಂಪುಟದಿಂದ ಕೈ ಬಿಟ್ಟು ಅವಮಾನ ಮಾಡಿದರು. ಮಂತ್ರಿ ಸ್ಥಾನದಿಂದ ತೆಗೆಯಲು ಕೆಲವರು ವಿಶ್ವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮೇಲಿನ ಕೋಪ ಕಡಿಮೆಯಾಗುವುದಿಲ್ಲ. ಅದು ಮಾಗದ ಗಾಯ.
-ವಿ.ಶ್ರೀನಿವಾಸಪ್ರಸಾದ್, ಸಂಸದ